ದಾವಣಗೆರೆ: ಐತಿಹಾಸಿಕ ಸೂಳೆಕೆರೆಯಲ್ಲಿ ಮತ್ತೆ ಚೈತನ್ಯದ ಚಿಲುಮೆ ಉಕ್ಕಿದೆ. ಕೊರೊನಾ ಸಂಕಷ್ಟದ ಬಳಿಕ ಸೂಳೆಕೆರೆಯಲ್ಲಿ ಬೋಟಿಂಗ್ ಆರಂಭವಾಗಿದೆ. ಹೀಗಾಗಿ ಸಾವಿರಾರು ಜನ ಸೂಳೆಕೆರೆ ಅಂಗಳಕ್ಕೆ ಬಂದು ಸಂಭ್ರಮಿಸುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿ ಇರುವ ಐತಿಹಾಸಿಕ ಸೂಳೆಕೆರೆಯಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಿಂದಾಗಿ ಬೋಟಿಂಗ್, ಮೀನುಗಾರಿಕೆ ಹಾಗೂ ಪ್ರವಾಸಿಗರ ಆಗಮನಕ್ಕೆ ನಿಷೇಧ ಹೇರಲಾಗಿತ್ತು. ಆದ್ಧರಿಂದ ಇಷ್ಟು ದಿನ ಪ್ರವಾಸಿಗರಿಲ್ಲದೆ ಖಾಲಿ ಹೊಡೆಯುತ್ತಿದ್ದ ಸೂಳೆಕೆರೆ ಇಂದು ಸಾವಿರಾರು ಜನರ ಆಗಮನದಿಂದ ನೋಡುಗರ ಗಮನ ಸೆಳೆಯುತ್ತಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾವಳಿ ಕಡಿಮೆಯಾದ ಬಳಿಕ ಈಗ ಜಿಲ್ಲಾಡಳಿತ ಸಾರ್ವಜನಿಕರಿಗೆ ಬೋಟಿಂಗ್ ಹಾಗೂ ಕೆರೆ ಸುತ್ತಾಟಕ್ಕೆ ಅವಕಾಶ ಕಲ್ಪಿಸಿದೆ. ಹೀಗಾಗಿ ತುಂಬಿ ತುಳುಕುತ್ತಿರುವ ಸೂಳೆಕೆರೆ ಜಲ ರಾಶಿಯಲ್ಲಿ ಸಾವಿರಾರು ಜನ ಸಂಭ್ರಮಿಸುತ್ತಿದ್ದಾರೆ.