Water Price Hike: ನೀರಿನ ದರ ಏರಿಕೆ ಸುಳಿವಿನ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ

ರಾಜ್ಯದ ಖಜಾನೆಯನ್ನು ಲೂಟಿ ಹೊಡೆದಿರುವ ಕಾಂಗ್ರೆಸ್ ಸರ್ಕಾರ ಇದೀಗ ತಿಜೋರಿ ತುಂಬಿಸಲು ಜನರ ಮೇಲೆ ಹೊರೆ ಹೇರಲು ಸಿದ್ದವಾಗಿದೆ ಎಂದು ಬಿಜೆಪಿ ಟೀಕಿಸಿದೆ. ಕಾವೇರಿ ನೀರಿನ ದರ ಹೆಚ್ಚಳದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಸುಳಿವಿನಿಂದ ಬಿಜೆಪಿ ಕೆರಳಿ ಕೆಂಡವಾಗಿದೆ.

Water Price Hike: ನೀರಿನ ದರ ಏರಿಕೆ ಸುಳಿವಿನ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ
ಸಾಂದರ್ಭಿಕ ಚಿತ್ರ

Updated on: Jul 25, 2024 | 2:23 PM

ಬೆಂಗಳೂರು, ಜುಲೈ 25: ಕರ್ನಾಟಕದ ಜನತೆಗೆ ದಿನಕ್ಕೊಂದು ದರ ಏರಿಕೆಯ ಬರೆ ಎಳೆಯಲು ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ನೀರಿನ ದರ ಏರಿಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ ಬೆನ್ನಲ್ಲೇ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಲೂಟಿ ಮಾಡಿದ ಹೊರೆಯನ್ನು ಜನರ ಮೇಲೆ ಹಾಕಲು ಮುಂದಾಗಿದೆ ಎಂದು ಟೀಕಿಸಿದೆ.

‘ಕರುನಾಡಿನ ಜನತೆಗೆ ದಿನಕ್ಕೊಂದು ದರ ಏರಿಕೆಯ ಬರೆ! ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತದಲ್ಲಿ ಜನಸಾಮಾನ್ಯರು ಬೆಲೆಯೇರಿಕೆಯಿಂದ ತತ್ತರಿಸುತ್ತಿದ್ದಾರೆ. ಈಗ ಜನರ ದಿನಬಳಕೆಯ ನೀರಿನ ದರವನ್ನೂ ಏರಿಸಲು ಹೊರಟಿದೆ ‘ಕೈ’ ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಟೀಕಿಸಿದೆ.

ಬಿಜೆಪಿ ಎಕ್ಸ್​ ಸಂದೇಶ


‘ರಾಜ್ಯದ ಖಜಾನೆಯನ್ನೆಲ್ಲಾ ಲೂಟಿ ಹೊಡೆದು ಈಗ ಖರ್ಚಿನ ಹೊರೆಯನ್ನು ಜನರ ಮೇಲೆ ಹೊರಿಸಲು ‘ಸಿದ್ದ’ವಾಗಿದೆ ಸರ್ಕಾರ. #CongressLootsKarnataka’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ನೀಟ್ ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯಿಸಿ ನಿರ್ಣಯ ಅಂಗೀಕಾರ

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಡಿಕೆ ಶಿವಕುಮಾರ್ ನೀರಿನ ದರ ಹೆಚ್ಚಳದ ಸುಳಿವು ನೀಡಿದ್ದರು. ಕಳೆದ 12 ವರ್ಷಗಳಿಂದ ಜಲಮಂಡಳಿಯು ಕಾವೇರಿ ನೀರಿನ ಬೆಲೆ ಹೆಚ್ಚಿಸಿಲ್ಲ. ಸದ್ಯ ಜಲ ಮಂಡಳಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕಾವೇರಿ ನೀರಿನ ದರ ಹೆಚ್ಚಳ ಮಾಡಿದರೆ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗಬಹುದು. ಆದರೆ ದರ ಹೆಚ್ಚಿಸದೆ ಈಗಿರುವ ಸ್ಥಿತಿಯಲ್ಲೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ