
ಬೆಂಗಳೂರು: ಈ ಬಾರಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನಂತರ ನಗರದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತಾಡಿ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ ಕಳೆದ ಬಾರಿಯಂತೆ ಆರು ದಿನಗಳ ಕಾಲ ಪರೀಕ್ಷೆ ನಡೆಸದೆ, ಕೇವಲ ಎರಡು ದಿನಗಳಲ್ಲಿ ಅವುಗಳನ್ನು ಮುಗಿಸುವುದಾಗಿ ಹೇಳಿದರು. ‘ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಜೊತೆ ಡಯಟ್ ಮೂಲಕ ಸಂವಾದ ನಡೆಸಿದೆ. ಸಂತೋಷದ ಸಂಗತಿಯೆಂದರೆ ಎಲ್ಲ ಜಿಲ್ಲೆಗಳ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪರೀಕ್ಷೆಗಳ ಬಗ್ಗೆ ಅವರು ತಮ್ಮ ಆತಂಕದ ಜೊತೆಗೆ ತಯಾರಿ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅವರು ವ್ಯಕ್ತಪಡಿಸಿದ ಎಲ್ಲ ಗೊಂದಲಗಳಿಗೆ ಪರಿಹಾರ ಸೂಚಿಸಿದ್ದೇನೆ. ಅವರಲ್ಲಿ ಮನೆ ಮಾಡಿದ್ದ ಸಂಶಯ ಮತ್ತು ಭೀತಿ ಮಾಯಾವಾಗಿದೆ ಅಂತ ಭಾವಿಸಿದ್ದೇನೆ,’ ಎಂದು ಸುದ್ದಿ ಗೋಷ್ಟಿಯಲ್ಲಿ ಸಚಿವರು ಹೇಳಿದರು.
‘ಕರ್ನಾಟಕದಲ್ಲಿ ಕಳೆದ ವರ್ಷ ಜುಲೈನಲ್ಲಿ ಕೋವಿಡ್-19 ಸೋಂಕಿನ ಪಾಸಿಟಿವಿಟಿ ದರ ಶೇಕಡಾ 13.2 ಇತ್ತು ಈಗ ಅದು ಶೇಕಡಾ 1.7ಇದೆ. ಅಷ್ಟಾಗಿಯೂ ಕಳೆದ ವರ್ಷ ಆರು ದಿನ ಪರೀಕ್ಷೆಗಳನ್ನು ನಡೆಸಲಾಗಿತ್ತು. ರಾಜ್ಯದೆಲ್ಲೆಡೆ ಲಾಕ್ಡೌನ್ ತೆರವು ಮಾಡಲಾಗಿದೆ. ಜನ ಓಡಾಡುತ್ತಿದ್ದಾರೆ. ಬಸ್ ಸಂಚಾರ ಎಂದಿನಂತೆ ನಡೆಯುತ್ತಿದೆ. ರಾಜ್ಯಾದ್ಯಂತ ಸೋಂಕಿನ ಪ್ರಕರಣಗಳು ಬಹಳ ಪ್ರಮಾಣದಲ್ಲಿ ಇಳಿಮುಖಗೊಂಡಿವೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ನಾನು ಈಗಷ್ಟೇ ಹೇಳಿದಂತೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಕೇವಲ ಎರಡೇ ದಿನಗಳಲ್ಲಿ ಮುಕ್ತಾಯಗೊಳ್ಳಲಿವೆ,’ ಎಂದು ಸುರೇಶ್ ಕುಮಾರ್ ಹೇಳಿದರು.
‘ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮಾಸ್ಕ್ ನೀಡಲು ಕೆಲವು ಸಂಘಸಂಸ್ಥೆಗಳು ಮುಂದಾಗಿವೆ. ಯೂತ್ ಫಾರ್ ಸೇವಾ ಹೆಸರಿನ ಒಂದು ಸಂಸ್ಥೆಯು 1.10 ಲಕ್ಷ ಮಾಸ್ಕ್ ನೀಡುವುದಾಗಿ ಹೇಳಿದೆ. 8.86 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದು ಅವರಿಗೆಲ್ಲ ಎಂಬೇಸ್ಸಿ ಹೆಸರಿನ ಸಂಸ್ಥೆಯು ಉಚಿತವಾಗಿ ಸ್ಯಾನಿಟೈಸರ್ ಒದಗಿಸಲಿದೆ,’ ಎಂದು ಹೇಳಿದ ಸುರೇಶ್ಕುಮಾರ್ ಅವರು ಸಂಘ ಸಂಸ್ಥೆಗಳು ಸರ್ಕಾರದ ಜೊತೆ ಕೈಜೋಡಿಸುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
Published On - 4:39 pm, Fri, 9 July 21