
ಬೆಂಗಳೂರು/ಕೊಪ್ಪಳ, (ಸೆಪ್ಟೆಂಬರ್ 17): ದಲಿತ ಮಹಿಳೆಯ (Dalit Woman) ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ((Basanagouda Patil Yatnal)) ಹೈಕೋರ್ಟ್ (Karnataka High Court) ಬಿಗ್ ರಿಲೀಫ್ ನೀಡಿದೆ. ಅಟ್ರಾಸಿಟಿ ಕಾಯ್ದೆಯಡಿ ಕೊಪ್ಪಳದಲ್ಲಿ (Koppal) ದಾಖಲಾಗಿರುವ FIR ಪ್ರಶ್ನಿಸಿ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬಸನಗೌ ಪಾಟೀಲ್ ಯತ್ನಾಳ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದೆ. ಅಲ್ಲದೇ ಪೊಲೀಸರ ತನಿಖೆಗೆ ಸಹಕರಿಸಲು ಯತ್ನಾಳ್ಗೆ ಸೂಚಿಸಿದೆ. ಯಾವುದೇ ಪಕ್ಷದವರಿರಲಿ ಒಂದು ಸಮುದಾಯ ಓಲೈಸಿದರೆ ಹೀಗಾಗುತ್ತದೆ. ಭಾರತೀಯರನ್ನು ಭಾರತೀಯರಂತೆಯೇ ನೋಡಿದರೆ ಈ ಸಮಸ್ಯೆ ಇರುವುದಿಲ್ಲ ಎಂದು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಸನಾತನ ಧರ್ಮದ ಹೆಣ್ಣುಮಕ್ಕಳಿಗೆ ಚಾಮುಂಡಿ ತಾಯಿಗೆ ಪೂಜೆ ಹಕ್ಕಿದೆ. ದಲಿತ ಹೆಣ್ಣುಮಕ್ಕಳರಲಿ ಯಾವುದೇ ಸಮಾಜದವರಿರಲಿ ಹಕ್ಕಿದೆ ಎಂದು ಯತ್ನಾಳ್ ಅವರು ಹೇಳಿದ್ದಾರೆ. ಆದ್ರೆ, ಅವರ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ್ದಾರೆ ಎಂದು ಯತ್ನಾಳ್ ಪರ ವಕೀಲ ವೆಂಕಟೇಶ ದಳವಾಯಿ ವಾದ ಮಂಡಿಸಿದರು. ಸಾಲದಕ್ಕೆ ಯತ್ನಾಳ್ ಹೇಳಿಕೆಯನ್ನು ಮೊಬೈಲ್ನಲ್ಲಿ ಜಡ್ಜ್ ಗೆ ಕೇಳಿಸಿರು. ಇದನ್ನು ಪರಿಗಣಿಸಿದ ಹೈಕೋರ್ಟ್, ಶಾಸಕ ಯತ್ನಾಳ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದ್ದು, ಯಾವುದೇ ಪಕ್ಷದವರಿರಲಿ ಒಂದು ಸಮುದಾಯ ಓಲೈಸಿದರೆ ಹೀಗಾಗುತ್ತದೆ. ಭಾರತೀಯರನ್ನು ಭಾರತೀಯರಂತೆಯೇ ನೋಡಿದರೆ ಈ ಸಮಸ್ಯೆ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ದಲಿತ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್ಐಆರ್ (FIR) ದಾಖಲಾಗಿತ್ತು. ಕೊಪ್ಪಳ (Koppal) ನಗರದ ದಲಿತ ಸಂಘಟನೆಯ ಯುವ ಮುಖಂಡ ಮಲ್ಲಿಕಾರ್ಜುನ ಪೂಜಾರ ಅವರು ದೂರು ದಾಖಲಿಸಿದ್ದು, ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ದೂರಿನನ್ವಯ ಕೊಪ್ಪಳ ನಗರ ಠಾಣೆಯಲ್ಲಿ SC/ST ಕಾಯ್ದೆಯಡಿ ಜಾತಿನಿಂದನೆ ಪ್ರಕರಣ ದಾಖಲಾಗಿತ್ತು.
ಕಳೆದ ಎರಡು ದಿನಗಳ ಹಿಂದೆ ಯತ್ನಾಳ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಹಿಂದೂಗಳ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡಲಿರುವ ಬಾನು ಮುಷ್ತಾಕ್ ವಿರುದ್ಧ ಮಾತನಾಡುವ ಭರಾಟೆಯಲ್ಲಿ ಸನಾತನ ಧರ್ಮದವರು ಮಾತ್ರ ತಾಯಿ ಚಾಮುಂಡಿಗೆ ಹೂ ಮುಡಿಸಬೇಕು ಹೊರತು ಒಬ್ಬ ದಲಿತ ಮಹಿಳೆಗೂ ಅವಕಾಶ ಕೊಡಲ್ಲ ಎಂದು ಹೇಳಿಕೆ ನೀಡಿ ದಲಿತ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದಲಿತ ಹೆಣ್ಣುಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿರುವುದು ದಲಿತ ಸಮುದಾಯಕ್ಕೆ ನೋವಾಗಿದೆ. ಅವರು ಮಾತನಾಡಿರುವ ವಿಡಿಯೋ ಆಧಾರದಲ್ಲಿ ಅವರ ವಿರುದ್ಧ SC/ST ಜಾತಿನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಮತ್ತು ಯತ್ನಾಳ್ ಅವರು ರಾಜ್ಯದ ಹಲವು ಜಿಲ್ಲೆಗಳಿಗೆ ತೆರಳಿ ಕೋಮು ಸಂಘರ್ಷ ಸೃಷ್ಟಿಸುವಂತಹ ಹೇಳಿಕೆ ನೀಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Wed, 17 September 25