
ರಾಜ್ಯದ ಹಲವಾರು ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಾ ಪ್ರವಾಹದ ಸ್ಥಿತಿಯನ್ನು ಸೃಷ್ಟಿಸಿರುವ ಮಳೆಯು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಮತ್ತಷ್ಟು ಕಂಗೆಡಿಸಿದೆ.
ಆಸ್ಪತ್ರೆಯ ಬೆಡ್ ಮೇಲೆ ಕುಳಿತೇ ಕಡತಗಳನ್ನು ಪರಿಶೀಲಿಸುತ್ತಾ ಸಚಿವರಿಗೆ ಹಾಗೂ ಆಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡುತ್ತಿರುವ ಮುಖ್ಯಮಂತ್ರಿಗಳು; ನಾಳೆ ಕೊಡಗು ಜಿಲ್ಲೆಗೆ ತೆರಳಿ ಮಳೆಯಿಂದಾಗಿರುವ ಹಾನಿಯನ್ನು ಪರಿಶೀಲಿಸಿ, ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕೆಂದಿದ್ದ ಕಂದಾಯ ಸಚಿವ ಆರ್ ಅಶೋಕ ಅವರನ್ನು ಕೊಡಗಿಗೆ ಬದಲಾಗಿ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿನ ಪರಿಹಾರ ಕೆಲಸಗಳನ್ನು ನೋಡಿಕೊಳ್ಳುವಂತೆ ಆ ಜಿಲ್ಲೆಯ ಉಸ್ತುವಾರಿ ಸಚಿವ ವಿ ಸೋಮಣ್ಣಗೆ ತಿಳಿಸಿದ್ದಾರೆ.
ಹಾಗೆಯೇ, ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ದೂರವಾಣಿ ಕರೆಗಳ ಮೂಲಕ ಸೂಚಿಸಬೇಕೆಂದು ಮುಖ್ಯಮಂತ್ರಿಗಳು ಸಚಿವ ಅಶೋಕ ಅವರಿಗೆ ತಿಳಿಸಿದ್ದಾರೆ.