
ಗದಗ, (ಜನವರಿ 22): ಲಕ್ಕುಂಡಿ (Lakkundi) ಗ್ರಾಮದಲ್ಲಿ ಮನೆ ಪಾಯಾ ಅಗೆಯುವ ವೇಳೆ ಸಿಕ್ಕ ಚಿನ್ನದ ನಿಧಿಯನ್ನು (Gold Treasure) ಹಸ್ತಾಂತರಿಸಿದ್ದ ರಿತ್ತಿ ಕುಟುಂಬಕ್ಕೆ (Ritti family) ಕೊನೆಗೂ ಜಿಲ್ಲಾಡಳಿತ ಸಹಾಯಹಸ್ತ ಚಾಚಿದೆ. ಹೌದು..ರಿತ್ತಿ ಕುಟುಂಬ 30*40 ಸೈಟ್ ನೀಡುವುದಾಗಿ ಲಕ್ಕುಂಡಿ ಗ್ರಾಮ ಪಂಚಾಯತ್ ಘೋಷಣೆ ಮಾಡಿದೆ. ಇಂದು (ಜನವರಿ 22) ಲಕ್ಕುಂಡಿ ಗ್ರಾಮ ಪಂಚಾಯತಿಯ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಇದೇ ವೇಳೆ ನಿಧಿಯನ್ನು ಹಸ್ತಾಂತರ ಮಾಡಿದ ರಿತ್ತಿ ಕುಟುಂಬದ ಸದಸ್ಯರನ್ನು ಸನ್ಮಾನ ಮಾಡಲಾಯಿತು. ಇನ್ನು ಜನವರಿ 26ರಂದು ಗಣರಾಜ್ಯೋತ್ಸವದಂದು ಜಾಗದ ಪ್ರಮಾಣ ಪತ್ರವನ್ನು ಕುಟುಂಬಕ್ಕೆ ಹಸ್ತಾಂತರವಾಗಲಿದೆ. ಇನ್ನು ನಿವೇಶನ ಜೊತೆ ಎಲ್ಲ ಶಾಲೆಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ.
ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಅಧಿಕಾರಿಗಳು, ಸರ್ವ ಸದಸ್ಯರ ಸಮ್ಮುಖದಲ್ಲಿ ಲಕ್ಕುಂಡಿ ಮಾರುತಿ ನಗರದಲ್ಲಿ ರಿತ್ತಿ ಕುಟುಂಬಕ್ಕೆ 30*40 ಸೈಟ್ ನೀಡುವ ನಿರ್ಣಯವನ್ನು ಪಾಸ್ ಮಾಡಲಾಯಿತು. ಮಾನವೀಯ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ಗ್ರಾಮ ಪಂಚಾಯತ್ ಸೈಟ್ ನೀಡುವ ನಿರ್ಧಾರ ತೆಗೆದಕೊಂಡಿದೆ. ಮುಂದೆ ಸಚಿವರು, ಶಾಸಕರ ಅನುದಾನದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಲಾಗಿದೆ. ಅಲ್ಲದೇ ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ, ಪ್ರಜ್ವಲ್ ತಾಯಿ ಗಂಗಮ್ಮಗೆ ಕೆಲಸ ಕೊಡುವುದಾಗಿ ಪಂಚಾಯತ್ ಭರವಸೆ ನೀಡಿದೆ.
ಕುಟುಂಬಕ್ಕೆ ನಿವೇಶನ ಮಾತ್ರವಲ್ಲದೇ ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆಂಚಪ್ಪ ಪೂಜಾರ್ ಪ್ರತಿಕ್ರಿಯಿಸಿದ್ದು, ಜನವರಿ 10 ರಂದು ಪ್ರಜ್ವಲ್ ರಿತ್ತಿ ಮನೆ ಪಾಯ ಅಗೆಯುವಾಗ 466 ಗ್ರಾಮ ಚಿನ್ನ ಪತ್ತೆಯಾಗಿತ್ತು. ಬಳಿಕ ಪ್ರಜ್ವಲ್ ರಿತ್ತಿ, ತಾಯಿ ಕಸ್ತೂರೆವ್ವ ರಿತ್ತಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಕುಟುಂಬದ ಪ್ರಾಮಾಣಿಕತೆಗೆ ಲಕ್ಕುಂಡಿ ಗ್ರಾಮ ಪಂಚಾಯತಿಯಿಂದ 30×40 ವಿಸ್ತೀರ್ಣ ನಿವೇಶನ ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಲಕ್ಕುಂಡಿ ಗ್ರಾಮದ ಎಲ್ಲ ಶಾಲೆ, ಕಾಲೇಜುಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ ಹಾಕಲು ತೀರ್ಮಾನಿಸಲಾಗಿದೆ. ಯಾಕಂದರೆ ಚಿಕ್ಕ ವಯಸ್ಸಿನಲ್ಲೇ ಪ್ರಜ್ವಲ್ ಪ್ರಯಾಣಿಕ ಮೆರೆದಿರುವುದು ಎಲ್ಲಾ ಮಕ್ಕಳಿಗೆ ಮಾದರಿಯಾಗಿದ್ದಾನೆ. ಹೀಗಾಗಿ ಪ್ರಜ್ವಲ್ ನೋಡಿ ಮಕ್ಕಳಲ್ಲೂ ಪ್ರಮಾಣಿಕತೆ ಹೆಚ್ಚಲಿ ಅನ್ನೋ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನು ಸಿಕ್ಕ ನಿಧಿಯನ್ನ ಪ್ರಮಾಣಿಕವಾಗಿ ಸರ್ಕಾರಕ್ಕೆ ನೀದಿ ಔದರ್ಯ ಮೆರೆದಿದ್ದ ಬಡ ಕುಟುಂಬ ನಿವೇಶನ, ಮನೆ ನೀಡಬೇಕೆಂದು ಟಿವಿ9 ನಿರಂತರ ವರದಿ ಮಾಡಿತ್ತು. ಇದರ ಫಲವಾಗಿ ಕುಟುಂಬಕ್ಕೊಂದು ಸೂರು ಸಿಕ್ಕಿದೆ. ಇದರಿಂದ ಪ್ರಜ್ವಲ್ ಹಾಗೂ ತಾಯಿ ಕಸ್ತೂರೆವ್ವ ರಿತ್ತಿ ಸಂತಸಗೊಂಡಿದ್ದು, ಟಿವಿ9ಗೆ ಧನ್ಯವಾದ ತಿಳಿಸಿದರು.
ನಿಧಿ ಸಿಕ್ಕಿದ್ದೇ ಸಿಕ್ಕಿದ್ದು ಗ್ರಾಮದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸಕ್ರಿಯ ಸಹಯೋಗದೊಂದಿಗೆ ಉತ್ಖನನ ನಡೆಯುತ್ತಿದೆ. ನುರಿತ ತಜ್ಞರು ಮತ್ತು ಸಿಬ್ಬಂದಿ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಸಮ್ಮುಖದಲ್ಲಿ ಕಳೆದ ಆರು ದಿನಗಳಿಂದ ಉತ್ಖನನ ಕಾರ್ಯ ಮುಂದುವರೆದಿದ್ದು, ಪ್ರತಿ ದಿನ ಒಂದಲ್ಲ ಒಂದು ವಸ್ತುಗಳು ಪತ್ತೆಯಾಗುತ್ತಲೇ ಇವೆ. ಭೂಮಿ ಅಗೆದಾಗೆಲ್ಲ ಹಳೇ ಕಾಲದ ವಸ್ತುಗಳು ಸಿಗುತ್ತಿವೆ. ಇದರಿಂದ ಇನ್ನಷ್ಟು ಅಗೆದರೆ ಏನೇನು ಸಿಗಬಹುದು ಎನ್ನುವ ಕೌತುಕ ಮೂಡಿದೆ.