ಗದಗ: ಭೀಕರ ಬರಕ್ಕೆ ಬರಡಾದ ಅನ್ನದಾತನ ಬದುಕು! ಬರಗಾಲ ಘೋಷಣೆ ಮಾಡಿ ಸರ್ಕಾರ ಗಪ್ ಚುಪ್; ನೇಗಿಲಯೋಗಿ ವಿಲವಿಲ

ಅನ್ನದಾತ ಬದುಕು ಆ ದೇವರಿಗೆ ಪ್ರೀತಿ. ಮಳೆ ಬಂದ್ರೂ ಕಷ್ಟ, ಬರದಿದ್ರೂ ಕಷ್ಟ ಎಂಬಂತಾಗಿದೆ. ಕಳೆದ ಎರಡ್ಮೂರು ವರ್ಷ ಅತಿಯಾದ ಮಳೆಗೆ ಎಲ್ಲ ಬೆಳೆಗಳು ಕೊಚ್ಚಿ ಹೋಗಿತ್ತು. ಆದ್ರೆ, ಈ ವರ್ಷ ಭೀಕರ ಬರಕ್ಕೆ ಅನ್ನದಾತ ಕಷ್ಟ ಸಂಪೂರ್ಣ ಸುಟ್ಟು ಹೋಗಿದೆ. ಹೌದು, ಇಲ್ಲೊಬ್ಬ ಅನ್ನದಾತ ಸಂಕಷ್ಟದಲ್ಲೂ ಸಾಲ ಮಾಡಿ ಶೇಂಗಾ ಬಿತ್ತನೆ ಮಾಡಿ ಕಂಗಾಲಾಗಿದ್ದಾನೆ. ಬಿತ್ತನೆ ಬಳಿಕ ಹನಿ ಮಳೆಯೂ ಆಗದ ಕಾರಣ ಬಳ್ಳಿಗೆ ಒಂದೇ ಒಂದು ಕಾಳು ಆಗಿಲ್ಲ. ಹೀಗಾಗಿ ನೇಗಿಲಯೋಗಿ ಬದುಕು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ. 

ಗದಗ: ಭೀಕರ ಬರಕ್ಕೆ ಬರಡಾದ ಅನ್ನದಾತನ ಬದುಕು! ಬರಗಾಲ ಘೋಷಣೆ ಮಾಡಿ ಸರ್ಕಾರ ಗಪ್ ಚುಪ್; ನೇಗಿಲಯೋಗಿ ವಿಲವಿಲ
ಗದಗ ರೈತರ ಗೋಳಾಟ
Edited By: ಕಿರಣ್ ಹನುಮಂತ್​ ಮಾದಾರ್

Updated on: Oct 15, 2023 | 9:18 PM

ಗದಗ, ಅ.15: ಜಿಲ್ಲೆಯ ಮುಂಡರಗಿ(Mundaragi) ತಾಲೂಕಿನ ಕದಂಪೂರ ಗ್ರಾಮದ ಸುತ್ತಮುತ್ತ ಬಂಗಾರದ ಬೆಳೆ ಬೆಳೆಯುವಂತಹ ಜಮೀನುಗಳಿವೆ. ಆದ್ರೆ, ಈ ಬಾರಿ ಅಷ್ಟೊಇಷ್ಟೋ ಆದ ಮಳೆಗೆ ಕಂದಪೂರ, ಲಕ್ಕುಂಡಿ ಗ್ರಾಮದ ರೈತರು ಶೇಂಗಾ ಬಿತ್ತನೆ ಮಾಡಿದ್ದಾರೆ. ಆರಂಭದಲ್ಲಿ ಭರ್ಜರಿಯಾಗಿ ಬೆಳೆದಿದೆ. ಆದ್ರೆ, ಬಿತ್ತನೆ ಬಳಿಕ ಮಳೆ ಸಂಪೂರ್ಣ ಕೈಕೊಟ್ಟಿದೆ. ಜಮೀನಿನಲ್ಲಿ ಶೇಂಗಾ ಬೆಳೆ(Groundnut crop) ನೋಡಿದ್ರೆ, ಅಬ್ಬಾ ಇಂತಹ ಬರಗಾಲದಲ್ಲೂ ಬಂಗಾರದಂಥೆ ಬೆಳೆ ಎನ್ನುವಂತಿದೆ. ಆದ್ರೆ, ಶೇಂಗಾ ಬಳ್ಳಿಗಳು ಕಿತ್ತಿದರೆ, ಬಳ್ಳಿಗೆ ಒಂದೇ ಒಂದು ಶೇಂಗಾ ಕಾಳು ಕೂಡ ಆಗಿಲ್ಲ. ಸಂಕಷ್ಟದಲ್ಲೂ ಸಾಕಷ್ಟು ಸಾಲಸೋಲ ಮಾಡಿ ಬಿತ್ತನೆ ಮಾಡಿದ ರೈತರು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಕಷ್ಟು ರೈತರು ಮೂರ್ನಾಲ್ಕು ವರ್ಷಗಳ ಕೃಷಿಯ ಬದುಕು ನೋಡಿ, ಕೃಷಿ ಸಹವಾಸವೇ ಬೇಡ ಎಂದು ಲಾವಣಿ ನೀಡಿ ಸುಮ್ಮನಿದ್ದಾರೆ. ಇನ್ನೂ ಲಾವಣಿ ಪಡೆದು ಲಾಭ ಪಡೆಯಬೇಕು ಅಂದ್ಕೊಂಡ ರೈತರು ಭೀಕರ ಬರಕ್ಕೆ ಕಂಗಾಲಾಗಿ ಹೋಗಿದ್ದಾರೆ. ಜಮೀನು ಮಾಲೀಕರಿಗೆ ಅಡ್ವಾನ್ಸ್ ಹಣ ನೀಡಿ. ಬಳಿಕ ಸಾಲಸೋಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದಾರೆ. ಆದ್ರೆ, ವರುಣದೇವ ಕೃಪೆ ತೋರದ ಕಾರಣ ಲಾವಣಿ ಮಾಡಿದ ಅನ್ನದಾತರ ಬದುಕು ಡೋಲಾಯಮಾನವಾಗಿದೆ. ಒಣ ಬೇಸಾಯ ಮಾಡುವ ರೈತರ ಬದುಕೇ ಒಣಗಿ ಹೋಗಿದೆ. ಸರ್ಕಾರ ಬರ ಘೋಷಣೆ ಮಾಡಿದ್ರೆ ಸಾಲದು. ಶೀಘ್ರ ಅನ್ನದಾತರ ನೆರವಿಗೆ ಧಾವಿಸಬೇಕು. ಅಷ್ಟೇ ಅಲ್ಲ ದನ, ಕರುಗಳಿಗೆ ಮೇವು ಇಲ್ಲದೇ ಗೋಳಾಡುತ್ತಿವೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಕೇಂದ್ರ ಎಷ್ಟಾದರೂ ಪರಿಹಾರ ಕೊಡಲಿ, ರಾಜ್ಯ ಸರ್ಕಾರ ಬರಗಾಲವನ್ನ ಸಮರ್ಥವಾಗಿ ಎದುರಿಸುತ್ತದೆ: ಸಿಎಂ ಸಿದ್ದರಾಮಯ್ಯ

ಇನ್ನು ಕದಂಪೂರ ಗ್ರಾಮದ ರೈತ ನಾಗರಾಜ್ ಎಂಬುವವರು ನಾಲ್ಕು ಎಕರೆ ಶೇಂಗಾ ಬಿತ್ತನೆ ಮಾಡಿದ್ದಾರೆ. ಮಳೆ ಇಲ್ಲದೇ ಶೇಂಗಾ ಬಳ್ಳಿಯಲ್ಲಿ ಒಂದೇ ಒಂದು ಕಾಳು ಇಲ್ಲ. ಮುಂದಿನ ವರ್ಷ ಕೃಷಿಯ ಸಹವಾಸವೇ ಬೇಡ ಎನ್ನುವಂತಾಗಿದೆ ಎಂದು ಗೋಳಾಡುತ್ತಿದ್ದಾರೆ. ಇಡೀ ಕುಟುಂಬವೇ ಜಮೀನಿನಲ್ಲಿ ಇಡೀ ವರ್ಷ ದುಡಿದ್ರು, ಸಾಲ ತೀರಿಲ್ಲ. ಈ ನಡುವೆ ಈ ಬಾರಿಯಾದ್ರೂ ಉತ್ತಮ ಬೆಳೆ ಬೆಳೆದು ಬದುಕು ಕಟ್ಟಿಕೊಳ್ಳಬೇಕು ಅಂತ ಕನಸು ಕಂಡ ರೈತರ ಕುಟುಂಬಗಳು ಭೀಕರ ಬರಗಾಲಕ್ಕೆ ನಿಜಕ್ಕೂ ಹೈರಾಣಾಗಿದ್ದಾರೆ. ಇನ್ನಾದ್ರೂ ಸರ್ಕಾರ ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಅನ್ನದಾತರ ಸಂಕಷ್ಟಕ್ಕೆ ನೆರವಾಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us