ಪತ್ನಿ ಪಾಲಿಗೆ ಪ್ರೀತಿಸಿ ಮದುವೆಯಾದಾತನೇ ವಿಲನ್​: ಪತಿ ಅಟ್ಟಹಾಸಕ್ಕೆ 6 ತಿಂಗಳ ಭ್ರೂಣ ಸಾವು

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಗರ್ಭಿಣಿ ಪತ್ನಿಯ ಮೇಲೆ ಪತಿ ನಡೆಸಿದ ಮಾರಣಾಂತಿಕ ಹಲ್ಲೆಯಿಂದ 6 ತಿಂಗಳ ಭ್ರೂಣ ಅಸುನೀಗಿದೆ. ಪ್ರೀತಿಸಿ ಮದುವೆಯಾಗಿದ್ದ ಯುವತಿ ಮೇಲೆ ಗಂಡ ಹಲ್ಲೆ ನಡೆಸಿದ್ದು, ಗಾಯಗೊಂಡ ಯುವತಿ ಆಸ್ಪತ್ರೆ ಸೇರಿದ್ದಾಳೆ. ಗಂಡ ಮತ್ತು ಆತನ ಮನೆಯವರೇ ಭ್ರೂಣದ ಸಾವಿಗೆ ಕಾರಣ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹಾನಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪತ್ನಿ ಪಾಲಿಗೆ ಪ್ರೀತಿಸಿ ಮದುವೆಯಾದಾತನೇ ವಿಲನ್​: ಪತಿ ಅಟ್ಟಹಾಸಕ್ಕೆ 6 ತಿಂಗಳ ಭ್ರೂಣ ಸಾವು
ಸಾಂದರ್ಭಿಕ ಚಿತ್ರ
Image Credit source: Google

Updated on: Nov 10, 2025 | 4:18 PM

ಹಾವೇರಿ, ನವೆಂಬರ್​ 10: ಪ್ರೀತಿಸಿ ಮದುವೆಯಾದ ಯುವತಿ ಮೇಲೆ ಪತಿರಾಯ ಮನಸೋ ಇಚ್ಚೇ ಹಲ್ಲೆ ನಡೆಸಿದ ಪರಿಣಾಮ 6 ತಿಂಗಳ ಭ್ರೂಣ ಹೊಟ್ಟೆಯಲ್ಲೇ ಅಸುನೀಗಿರುವ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ನಡೆದಿದೆ. ಪತ್ನಿ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಪತಿ ಅಟ್ಟಹಾಸ ಮೆರೆದಿದ್ದು, ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುವನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಓಣಿಕೇರಿಯ ಅಮೀರಬಿ ಮನಿಯಾರ್, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಸನಾಬಾದ್ ಗ್ರಾಮದ ಯುವಕ ಅಹ್ಮದರಾಜ್​ನನ್ನು ಪ್ರೀತಿಸಿದ್ದಳು. ಈ ಪ್ರೀತಿ ದೈಹಿಕ ಸಂಪರ್ಕದವರೆಗೂ ಹೋದ ಕಾರಣ ಅಮೀರಬಿ ಗರ್ಭಿಣಿಯಾಗಿದ್ದರು. ಬಳಿಕ ಈ ವಿಷಯ ಮನೆವರಿಗೆ ತಿಳಿದಿದ್ದು, ಎರಡು ಕಡೆಯ ಊರನ ಜನರು ಸೇರಿ ಅದ್ದೂರಿಯಾಗಿ ಇವರ ಮದುವೆ ಮಾಡಿಸಿದ್ದರು. ಆದರೆ, ಮದುವೆ ಮಾಡಿಕೊಂಡ ಅಹ್ಮದರಾಜ್​ ಪತ್ನಿ ಗರ್ಭಿಣಿ ಎಂಬುದನ್ನೂ ನೋಡದೆ ಹಿಂಸೆ ನೀಡಿದ್ದಾನೆ. ಲಾಠಿ ಮತ್ತು ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ತಾಯಿ ಹಾಗೂ ಸಹೋದರನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ

ಪತಿ ಮತ್ತು ಆತನ ಮನೆಯವರಿಂದ ಹಲ್ಲೆ ಆರೋಪ

ತನ್ನ ಹೊಟ್ಟೆಯಲಲ್ಲಿದ್ದ ಭ್ರೂಣದ ಸಾವಿಗೆ ತನ್ನ ಗಂಡ ಮತ್ತು ಆತನ ಮನೆಯವರೇ ಕಾರಣ ಎಂದು ಸಂತ್ರಸ್ತೆ ಅಮೀರಬಿ ಮನಿಯಾರ್ ಹೇಳಿದ್ದಾರೆ. ಪ್ರತಿನಿತ್ಯ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗುತ್ತಿತ್ತು. ವಿಷಯವನ್ನು ಯಾರಿಗೂ ಹೇಳದಂತೆ ನನಗೆ ಬೆದರಿಕೆಯನ್ನೂ ಹಾಕಿದ್ದರು. ಈ ಭಯದಿಂದಲೇ ಇಂದು ನಾನು ಈ ಸ್ಥಿತಿಗೆ ಬರಬೇಕಾಯ್ತು. ನಾನು ಆರು ತಿಂಗಳ ಗರ್ಭಿಣಿ ಅಂತಲೂ ನೋಡದೆ ಹಲ್ಲೆ ಮಾಡಿದ್ದಾರೆ ಎಂದು ಗಂಡನ ಮನೆಯವರ ವಿರುದ್ಧ ಅಮೀರಬಿ ಆರೋಪ ಮಾಡಿದ್ದಾರೆ. ಮಗಳ ಮೆಲೆ ಹಲ್ಲೆ ನಡೆಸಿದ್ದಲ್ಲದೆ ಭ್ರೂಣವನ್ನೇ ಕೊಂದ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಅಮಿರಬಿ ಪೋಷಕರು ಒತ್ತಾಯಿಸಿದ್ದು, ಈ ಬಗ್ಗೆ ಪ್ರಕರಣ ಹಾನಗಲ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.