ಹಾವೇರಿ: ಮಗ ಪ್ರಿಯತಮೆಯೊಂದಿಗೆ ಓಡಿಹೋಗಿದ್ದಕ್ಕೆ ಮಹಿಳೆಯ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಸೆಕ್ಷನ್ 350 ಮತ್ತು 324 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಾವೇರಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ.

ಹಾವೇರಿ: ಮಗ ಪ್ರಿಯತಮೆಯೊಂದಿಗೆ ಓಡಿಹೋಗಿದ್ದಕ್ಕೆ ಮಹಿಳೆಯ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ
ಮಹಿಳೆ ಮೇಲೆ ಹಲ್ಲೆ (ಎಕ್ಸ್​ ವಿಡಿಯೋದ ಸ್ಕ್ರೀನ್​ಗ್ರ್ಯಾಬ್)

Updated on: May 04, 2024 | 5:46 PM

ಹಾವೇರಿ, ಮೇ 4: 50 ವರ್ಷದ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ, ಎಳೆದಾಡಿದ ಘಟನೆ ಹಾವೇರಿ (Haveri) ಜಿಲ್ಲೆಯ ಅರೇಮಲ್ಲಾಪುರ (Aremallapur) ಗ್ರಾಮದಲ್ಲಿ ಏಪ್ರಿಲ್ 30ರಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ರಾಣೆಬೆನ್ನೂರು (Ranebennur) ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತ ಮಹಿಳೆ ಹನುಮವ್ವ ಮೆಡ್ಲೇರಿ ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಪ್ರಿಲ್ 29 ರಂದು ಆಕೆಯ ಮಗ ಆರೋಪಿಯ ಕುಟುಂಬದ ಹುಡುಗಿಯೊಂದಿಗೆ ಓಡಿಹೋದ ನಂತರ ಆಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು.

ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಯುವಕ ಮರಾಠಾ ಸಮುದಾಯಕ್ಕೆ ಮತ್ತು ಯುವತಿ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಯುವತಿಯ ಮನೆಯವರು ಈ ವರ್ಷ ಮದುವೆ ಮಾಡಲು ಮುಂದಾಗಿದ್ದರು. ಹೀಗಾಗಿ ಯವಕ ಯುವತಿಯೊಂದಿಗೆ ಪರಾರಿಯಾಗಿದ್ದಾನೆ. ಎರಡೂ ಕುಟುಂಬಗಳು ಗ್ರಾಮದ ಒಂದೇ ಬೀದಿಯಲ್ಲಿ ವಾಸಿಸುತ್ತಿವೆ. ಯುವಕ ಮತ್ತು ಯುವತಿ ಗ್ರಾಮಕ್ಕೆ ಹಿಂತಿರುಗಿಲ್ಲ.

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಸೆಕ್ಷನ್ 350 ಮತ್ತು 324 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಾವೇರಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ. ಪ್ರಕರಣದಲ್ಲಿ ಚದ್ರಪ್ಪ ತೆಲಗಿ, ಬಸಪ್ಪ, ಗುತ್ತೆವ್ವ ಆರೋಪಿಗಳೆಂದು ಹೆಸರಿಸಲಾಗಿದೆ. ಸದ್ಯದಲ್ಲೇ ಗ್ರಾಮದಲ್ಲಿ ಪೊಲೀಸರು ಶಾಂತಿ ಸಭೆ ನಡೆಸಲಿದ್ದಾರೆ. ಎರಡೂ ಸಮುದಾಯಗಳ ಸದಸ್ಯರು ಮತ್ತು ಗ್ರಾಮದ ಮುಖಂಡರನ್ನು ಸಭೆಗೆ ಕರೆಯಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್


ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ, ಘಟನೆ ತಡೆದ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಸನ್ಮಾನ

ಮಕ್ಕಳ ಪ್ರೀತಿಯ ವಿಚಾರವಾಗಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿದ್ದು ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಒತ್ತುವರಿ ಪ್ರಶ್ನಿಸಿದ ಬಡ ಕುಟುಂಬದ ಮಹಿಳೆಯೊಬ್ಬರ ಸೀರೆ ಕಳಚಿ ಹಲ್ಲೆ ಮಾಡಿದ ಘಟನೆ ಫೆಬ್ರವರಿಯಲ್ಲಿ ನಡೆದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Sat, 4 May 24