ಬೆಂಗಳೂರು: ಬಿಜೆಪಿ ವರಿಷ್ಠರಿಗೆ ತಮ್ಮ ಪಕ್ಷದ ಕರ್ನಾಟಕ ನಾಯಕರೊಂದಿಗೆ ಮಾತಾಡಬೇಕು ಅಂತ ಈಗ ಅನಿಸಿರುವಂತಿದೆ. ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa), ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಮತ್ತು ಸಂಸದ ಪಿಸಿ ಮೋಹನ್ (PC Mohan, MP)-ಮೂವರಿಗೆ ಇಂದು ಮಧ್ಯಾಹ್ನ ದೆಹಲಿಯಲ್ಲಿ ನಡೆಯಲಿರುವ ಸಭೆಗೆ ಹಾಜರಾಗುವಂತೆ ಬುಲಾವ್ ಬಂದಿದ್ದು ಅದರಲ್ಲಿ ಪಾಲ್ಗೊಳ್ಳಲು ಈಶ್ವರಪ್ಪ ಹೊರಟಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ದೆಹಲಿ ವಿಮಾನ ಹತ್ತುವ ಮೊದಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸಭೆಗೆ ಬರುವಂತೆ ಮಾತ್ರ ತಿಳಿಸಲಾಗಿದೆ ಎಂದು ಹೇಳಿದರು. ವಿರೋಧ ಪಕ್ಷದ ಮತ್ತು ಪಕ್ಷದ ರಾಜ್ಯಾಧ್ಯಕ್ಷನ ಅಯ್ಕೆ ಬಗ್ಗೆ ಮಾತುಕತೆ ನಡೆಯಲಿದೆಯಾ ಅಂತ ಕೇಳಿದಾಗ ಅದ್ಯಾವುದೂ ಗೊತ್ತಿಲ್ಲ, ಆದರೆ ಸಭೆ ಮುಗಿದ ಕೂಡಲೇ ವಿವರಗಳನ್ನು ನೀಡುವುದಾಗಿ ಈಶ್ವರಪ್ಪ ಹೇಳಿದರು. ನಿಮಗೆ ನೆನಪಿರಬಹುದು, ಕಳೆದ ವಾರ ಸಂಸದ ಡಿವಿ ಸದಾನಂದ ಗೌಡ ಆವರನ್ನು ದೆಹಲಿಗೆ ಕರೆಸಲಾಗಿತ್ತು. ಆದರೆ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸದಾನಂದ ಗೌಡರನ್ನು ಭೇಟಿ ಮಾಡದೆ ವಾಪಸ್ಸು ಕಳಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Thu, 2 November 23