ಸಾಮಾಜಿಕ ಬಹಿಷ್ಕಾರ ಹಾಕುವ ಮುನ್ನ ಜೋಕೆ!: ಹೊಸ ಕಾನೂನು ತರಲು ಮುಂದಾಗಿದೆ ರಾಜ್ಯ ಸರ್ಕಾರ

ಸಾಮಾಜಿಕ ಬಹಿಷ್ಕಾರ ತಡೆಗಟ್ಟಲು ಹೊಸ ಕಾನೂನು ತರಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ. 'ಕರ್ನಾಟಕ ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ವಿಧೇಯಕ-2025'ಕ್ಕೆ ಸಚಿವ ಸಂಪುಟದ ಅನುಮೋದನೆ ಸಿಗುವ ಸಾಧ್ಯತೆ ಇದೆ. ಈ ಕಾನೂನಿನಡಿ ಏನೆಲ್ಲ ವಿಷಯಗಳು ಬರಲಿವೆ? ಶಿಕ್ಷೆ ಏನಿರಲಿದೆ? ಎನ್ನುವ ಮಾಹಿತಿ ಇಲ್ಲಿದೆ.

ಸಾಮಾಜಿಕ ಬಹಿಷ್ಕಾರ ಹಾಕುವ ಮುನ್ನ ಜೋಕೆ!: ಹೊಸ ಕಾನೂನು ತರಲು ಮುಂದಾಗಿದೆ ರಾಜ್ಯ ಸರ್ಕಾರ
ಸಾಮಾಜಿಕ ಬಹಿಷ್ಕಾರ
Image Credit source: Google
Updated By: ಪ್ರಸನ್ನ ಹೆಗಡೆ

Updated on: Dec 04, 2025 | 3:21 PM

ಬೆಂಗಳೂರು, ಡಿಸೆಂಬರ್​​ 04: ಮೂಢ ನಂಬಿಕೆ, ಆಚರಣೆಗಳ ಹೆಸರಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವಂತಹ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗ್ತಿವೆ. ಈ ಹಿನ್ನಲೆ ಇಂತಹ ಪ್ರಕರಣಗಳ ತಡೆಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಈ ಬಗ್ಗೆ ಹೊಸ ಕಾನೂನು ತರಲು ಸಿದ್ಧತೆ ನಡೆದಿದೆ. ಕರ್ನಾಟಕ ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ವಿಧೇಯಕ-2025ರ ಮಂಡನೆಗೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಸಿಗುವ‌ ಸಾಧ್ಯತೆ ಇದೆ.

ಯಾವ್ಯಾವುದಕ್ಕೆ ನಿಷೇಧ?

  • ಗ್ರಾಮ ಅಥವಾ ಸಮುದಾಯದಿಂದ ಹೊರಹಾಕುವುದಕ್ಕೆ ನಿರ್ಬಂಧ
  • ಧಾರ್ಮಿಕ, ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ ವಿಧಿಸುವುದು
  • ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿ ಮಾಡುವುದು
  • ಸಾಮಾಜಿಕ-ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ತಡೆ
  • ವ್ಯವಹಾರ ಅಥವಾ ಉದ್ಯೋಗ ತಿರಸ್ಕಾರ ಮಾಡುವುದು
  • ಶಾಲೆ, ಆಸ್ಪತ್ರೆ, ಸಮುದಾಯ ಭವನಗಳ ಪ್ರವೇಶಕ್ಕೆ ತಡೆಯೊಡ್ಡುವುದು
  • ಸೇವೆಗಳು, ಅವಕಾಶಗಳನ್ನು ನಿರಾಕರಿಸುವುದು
  • ಮದುವೆ, ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವುದಕ್ಕೆ ತಡೆಯೊಡ್ಡುವುದು
  • ಸಂಬಂಧ ಕಡಿತಗೊಳಿಸಲು ಪ್ರಚೋದನೆ ನೀಡುವುದು
  • ಲಿಂಗತ್ವದ ಆಧಾರದ ಮೇಲೆ ಭೇದ ಮಾಡುವುದು
  • ವ್ಯಾಪಾರ, ಸಾಮಾಜಿಕ ಸಂಬಂಧಗಳಿಗೆ ತಡೆಯೊಡ್ಡುವುದು
  • ಮಕ್ಕಳನ್ನು ಒಟ್ಟಿಗೆ ಆಡಲು ಅಡ್ಡಿ ಪಡಿಸುವುದು
  • ಮಾನವ ಹಕ್ಕುಗಳನ್ನು ನಿರಾಕರಿಸುವುದು
  • ಬಟ್ಟೆ, ಭಾಷೆ, ಸಾಂಸ್ಕೃತಿಕ ಭೇದ ಎಸಗುವುದು

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ತವರಿನಲ್ಲೇ ಇದೆಂಥಾ ಅನ್ಯಾಯ; ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಶಿಕ್ಷೆ ಏನು?

ಸಾಮಾಜಿಕ ಬಹಿಷ್ಕಾರ ಹಾಕಿರುವುದು ಅಥವಾ ಅದಕ್ಕೆ ಕಾರಣವಾಗಿರುವುದು ವಿಚಾರಣೆ ವೇಳೆ ಸಾಬೀತಾದರೆ ಅಂತಹ ವ್ಯಕ್ತಿಗಳಿಗೆ 3 ವರ್ಷ ಜೈಲು ಶಿಕ್ಷ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಬಹಿಷ್ಕಾರಕ್ಕೆ ಒಳಗಾಗುವವರು ಪೊಲೀಸ್​​ ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ನೀಡಬಹುದು. ಪ್ರಥಮ ದರ್ಜೆಯ ನ್ಯಾಯಾಧೀಶರಿಗೆ ವಿಚಾರಣೆಯ ಅಧಿಕಾರ ನೀಡಲಾಗಿದೆ. ಸಾಮಾಜಿಕ ಬಹಿಷ್ಕಾರ ಹಾಕುವಂತಹ ಸಭೆಗಳು ನಡೆಯುವ ಮಾಹಿತಿ ಸಿಕ್ಕರೆ ಅವುಗಳನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶಿಸಬಹುದು.

ದ್ವೇಷ ಭಾಷಣ ನಿಗ್ರಹಕ್ಕೂ ವಿಧೇಯಕ

ಇದರ ಜೊತೆಗೆ ದ್ವೇಷ ಭಾಷಣಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿಯೂ ಹೊಸ ವಿಧೇಯಕವನ್ನು ಮಂಡಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ.ಜಿ. ಪರಮೇಶ್ವರ್​​ ಮಾಹಿತಿ ನೀಡಿದ್ದು, ಅಪರಾಧ ವಿಧೇಯಕ 2025ರ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಒಮ್ಮೆ ಸಂಪುಟದ ಅನುಮೋದನೆ ದೊರೆತರೆ, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:20 pm, Thu, 4 December 25