
ಬೆಂಗಳೂರು: ತಮ್ಮ ತಮ್ಮ ಊರುಗಳಿಗೆ ತೆರಳಲು ವಲಸೆ ಕಾರ್ಮಿಕರ ಪರದಾಟ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ ಸೇರಿದಂತೆ ಹಲವರು ಭೇಟಿ ನೀಡಿ ಪ್ರಯಾಣಿಕರ ಸಮಸ್ಯೆ ಆಲಿಸಿದ್ದಾರೆ.
ಕೆಪಿಸಿಸಿಯಿಂದ ₹1 ಕೋಟಿ ನೆರವು:
ಲಾಕ್ಡೌನ್ನಿಂದ ಕಾಸಿಲ್ಲದೆ ಪಾರದಾಡುತ್ತಿದ್ದ ಕಾರ್ಮಿಕರಿಗೆ ಊರುಗಳಿಗೆ ತೆರಳಲು ಕೆಎಸ್ಆರ್ಟಿಸಿ ಸಂಸ್ಥೆಗೆ ಕಾಂಗ್ರೆಸ್ ನಿಯೋಗ 1 ಕೋಟಿ ರೂಪಾಯಿ ನೆರವು ನೀಡಿದೆ. ಇದೇ ವೇಳೆ ಮೆಜೆಸ್ಟಿಕ್ನಲ್ಲಿ ಬಸ್ ಹತ್ತಿ ಪ್ರಯಾಣಿಕರ ಸಮಸ್ಯೆ ಆಲಿಸಿ, ಧೈರ್ಯ ತುಂಬಿದ್ದಾರೆ.
ಕಾಂಗ್ರೆಸ್ ನಿರ್ಧಾರ ಮಾಡಿದ ನಂತರ ಉಚಿತ ಪ್ರಯಾಣ:
ವಲಸೆ ಕಾರ್ಮಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಾವು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದೇವೆ. ನಾವು ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದೆವು. ನಾವು ನಿರ್ಧಾರ ಮಾಡಿದ ನಂತರ ಕಾರ್ಮಿಕರು ಉಚಿತವಾಗಿ ಪ್ರಯಾಣಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸರ್ಕಾರಕ್ಕೆ ಕಿವಿಯೂ ಇಲ್ಲ, ಕಣ್ಣೂ ಇಲ್ಲ:
ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಿಸಿದ್ದೇವೆ. ಅದನ್ನು ಪರಿಶೀಲಿಸಲು ಇಲ್ಲಿಗೆ ಬಂದಿದ್ದೇವೆ. ರಾಜ್ಯ ಸರ್ಕಾರಕ್ಕೆ ಕಿವಿಯೂ ಇಲ್ಲ, ಕಣ್ಣೂ ಇಲ್ಲ. ಹೀಗಾಗಿ ಜನರ ಕಷ್ಟ ಆಲಿಸಲು ಯಾರೂ ಬರುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸಾಮಾಜಿಕ ಅಂತರ ಮರೆತ ಕಾಂಗ್ರೆಸ್ ನಿಯೋಗ:
ಇದೇ ವೇಳೆ ಬಸ್ ಪ್ರಯಾಣಿಕರ ಸೌಲಭ್ಯಗಳ ಬಗ್ಗೆ ಕಾಂಗ್ರೆಸ್ ನಿಯೋಗ ತಪಾಸಣೆ ಮಾಡಿದೆ. ಇದೇ ವೇಳೆ ಮೆಜೆಸ್ಟಿಕ್ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಕಾರ್ಮಿಕರ ಸಮಸ್ಯೆ ಕೇಳುವ ಬರದಲ್ಲಿ ಸಾಮಾಜಿಕ ಅಂತರವನ್ನೇ ಕೈ ನಾಯಕರು ಮರೆತರು.