ಭಾರತದಲ್ಲಿ ಖಲಿಫೇಟ್, ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲಿ 50 ಸ್ಲೀಪರ್ ಸೆಲ್: ಬಳ್ಳಾರಿ ಉಗ್ರರ ಬಗ್ಗೆ ಎನ್​ಐಎ ಸ್ಫೋಟಕ ಮಾಹಿತಿ

ಕಳೆದ ವರ್ಷ ಡಿಸೆಂಬರ್​​ನಲ್ಲಿ ಬಳ್ಳಾರಿಯಲ್ಲಿ ಬಂಧನಕ್ಕೊಳಗಾಗಿರುವ ಐಸಿಸ್ ಉಗ್ರರ ಬಗ್ಗೆ ಇದೀಗ ಎನ್​ಐಎ ಸ್ಫೋಟಕ ಮಾಹಿತಿ ನೀಡಿದೆ. ಬಂಧಿತ ಉಗ್ರರ ವಿರುದ್ಧ ಚಾರ್ಜ್​ಶೀಟ್​​ ಸಲ್ಲಿಸಿರುವ ಎನ್​ಐಎ ಅದರಲ್ಲಿ ಉಲ್ಲೇಖಿಸಿರುವ ಅಂಶಗಳು ಬೆಚ್ಚಿಬೀಳಿಸುವಂತಿವೆ. ಹಾಗಾದರೆ ಎನ್​ಐಎ ಚಾರ್ಜ್​ಶೀಟ್​ನಲ್ಲಿ ಏನೇನಿದೆ? ಇಲ್ಲಿದೆ ವಿವರ.

ಭಾರತದಲ್ಲಿ ಖಲಿಫೇಟ್, ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲಿ 50 ಸ್ಲೀಪರ್ ಸೆಲ್: ಬಳ್ಳಾರಿ ಉಗ್ರರ ಬಗ್ಗೆ ಎನ್​ಐಎ ಸ್ಫೋಟಕ ಮಾಹಿತಿ
ಬಳ್ಳಾರಿ ಉಗ್ರರ ಬಗ್ಗೆ ಎನ್​ಐಎ ಸ್ಫೋಟಕ ಮಾಹಿತಿ

Updated on: Jun 14, 2024 | 7:02 AM

ನವದೆಹಲಿ, ಜೂನ್ 14: ದೇಶದಲ್ಲಿ ಖಲಿಫೇಟ್ (ಇಸ್ಲಾಂ ಆಡಳಿತ) ಜಾರಿಗೊಳಿಸುವಂತೆ ಮಾಡುವುದು ಮತ್ತು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ 50 ಸ್ಲಿಪರ್‌ಸೆಲ್ ಸ್ಥಾಪನೆ ಮಾಡುವುದು ಕರ್ನಾಟಕದ (Karnataka) ಬಳ್ಳಾರಿ (Ballari) ಉಗ್ರರ (Terrorists) ಸಂಚಾಗಿತ್ತು ಎಂಬ ಸ್ಫೋಟಕ ಮಾಹಿತಿ ಇದೀಗ ತಿಳಿದುಬಂದಿದೆ. ಆರೋಪಿಗಳು ಈಗಾಗಲೇ ಬಳ್ಳಾರಿಯಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಿದ್ದರು ಮತ್ತು ಜಿಹಾದ್ ಸಂಬಂಧಿತ ಡಿಜಿಟಲ್ ದಾಖಲೆಗಳು ಮತ್ತು ಡೇಟಾವನ್ನು ಇತರ ಯುವಕರೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ದಳ (NIA) ಸಲ್ಲಿಸಿರುವ ಚಾರ್ಜ್​ಶೀಟ್​ನಿಂದ ತಿಳಿದುಬಂದಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಳ್ಳಾರಿಯಲ್ಲಿ ಐಸಿಸ್‌ ಚಟುವಟಿಕೆಗಳನ್ನು ಬಯಲಿಗೆಳೆದಿದ್ದ ಎನ್​ಐಎ, ಆ ಸಂಬಂಧ ಬಂಧಿಸಲ್ಪಟ್ಟ ಕರ್ನಾಟಕ ನಾಲ್ವರು ಸೇರಿದಂತೆ 7 ಮಂದಿ ಉಗ್ರರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದೆ.

2025ರ ವೇಳೆಗೆ ಭಾರತದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಸ್ಲಿಪರ್‌ಸೆಲ್​ಗಳನ್ನು ಸ್ಥಾಪಿಸುವುದು ಮತ್ತು ಇವುಗಳ ಸದಸ್ಯರನ್ನು ಬಳಸಿಕೊಂಡು ಸೇನೆ, ಪೊಲೀಸರು ಮತ್ತು ನಿರ್ದಿಷ್ಟ ಸಮುದಾಯದ ಧಾರ್ಮಿಕ ನಾಯಕರ ಮೇಲೆ ದಾಳಿ ನಡೆಸುವ ಸಂಚನ್ನು ಉಗ್ರರು ಹೂಡಿದ್ದರು ಎಂದು ಎನ್​ಐಎ ಉಲ್ಲೇಖಿಸಿದೆ.

ಬಳ್ಳಾರಿಯಲ್ಲಿ ಸಂಚು ಬಯಲಿಗೆಳೆದಿದ್ದ ಎನ್​ಐಎ

ಕಳೆದವರ್ಷ ಡಿಸೆಂಬರ್​​ನಲ್ಲಿ ಬಳ್ಳಾರಿಯಲ್ಲಿ ಉಗ್ರರ ಸಂಚನ್ನು ಎನ್​ಐಎ ಬಯಲಿಗೆಳೆದಿತ್ತು. ಕೃತ್ಯಕ್ಕೆ ಸಂಬಂಧಿಸಿ ರಾಜ್ಯದ ನಾಲ್ವರು ಸೇರಿದಂತೆ 7 ಜನರನ್ನು ಬಂಧಿಸಲಾಗಿತ್ತು. ಬಳ್ಳಾರಿಯಲ್ಲಿ ರಾಜ್ಯದ ಮೊಹಮ್ಮದ್ ಸುಲೈಮಾನ್ ಮಿನಾಜ್, ಮೊಹಮ್ಮದ್ ಮುನಿರುದ್ದೀನ್, ಸಯ್ಯದ್ ಸಮೀರ್, ಮೊಹಮ್ಮದ್ ಮುಜಮ್ಮಿಲ್​​ನನ್ನು ಬಂಧಿಸಲಾಗಿತ್ತು. ಜೊತೆಗೆ ಮಹಾರಾಷ್ಟ್ರದ ಇನ್ಸಾಲ್‌ ಷೇಕ್, ಜಾರ್ಖಂಡ್‌ನ ಮೊಹಮ್ಮದ್ ಶಹಬಾಜ್ ಮತ್ತು ದೆಹಲಿಯ ಶಯಾನ್ ರೆಹಮಾನ್ ಬಂಧಿಸಲಾಗಿತ್ತು. ಇದೀಗ ಈ ಉಗ್ರರ ವಿರುದ್ಧ ಎನ್‌ಐಎ ಆರೋಪಪಟ್ಟಿ ದಾಖಲಿಸಿದೆ.

ಇದನ್ನೂ ಓದಿ: ಪೊಲೀಸರ ಹೆಸರಿನಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಪಾಕಿಸ್ತಾನದಿಂದ ಬರುತ್ತಿದೆ ಬೆದರಿಕೆ ಕರೆ!

ತನಿಖೆಯ ಸಮಯದಲ್ಲಿ ಸ್ಫೋಟಕ ಸಾಮಗ್ರಿಗಳು, ಹರಿತವಾದ ಶಸ್ತ್ರಾಸ್ತ್ರಗಳು, ಜಿಹಾದ್, ಖಿಲಾಫತ್, ಐಸಿಸ್ ಸೇರಿದಂತೆ ವಿವಿಧ ಭಯೋತ್ಪಾದಕ ಸಂಘಟನೆಗಳು ಪ್ರಕಟಿಸಿದ ಫಿದಾಯೀನ್ ದಾಳಿಗಳಿಗೆ ಸಂಬಂಧಿಸಿದ ಪ್ರಚಾರ ನಿಯತಕಾಲಿಕೆಗಳನ್ನು ಒಳಗೊಂಡ ಡಿಜಿಟಲ್ ಸಾಧನಗಳು ಮತ್ತು ಇಸ್ಲಾಮಿಕ್ ಸ್ಥಾಪನೆಗಾಗಿ ಐಸಿಸ್ ಮಾರ್ಗಸೂಚಿಯನ್ನು ಬಹಿರಂಗಪಡಿಸುವ ಸಂದೇಶಗಳ ದಾಖಲೆಗಳು ಹಾಗೂ ದತ್ತಾಂಶಗಳನ್ನು ಎನ್‌ಐಎ ವಶಪಡಿಸಿಕೊಂಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us