ಕೈಯಲ್ಲಿ ಕೂಸು, ಕಣ್ಣಲ್ಲಿ ಸರ್ಕಾರಿ ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಇದು ಕನಸುಗಳ ಬೆನ್ನತ್ತಿ ಬಂದ ಬಾಣಂತಿಯೊಬ್ಬಳ ಹೋರಾಟದ ಕಥೆ. ಒಂದೆಡೆ ಬದುಕಿಗೆ ಭದ್ರತೆ ನೀಡುವ ಸರ್ಕಾರಿ ಉದ್ಯೋಗದ ಹಂಬಲ, ಮತ್ತೊಂದೆಡೆ ಎದೆಯ ಮೇಲಿದ್ದ ಎಂಟು ತಿಂಗಳ ಹಸುಗೂಸಿನ ಮಮತೆ. ಈ ಮಾನವೀಯತೆಗೆ ಬೆಂಗಳೂರಿನ ಕೃಷ್ಣಾ ಕಾಲೇಜು ಪರೀಕ್ಷಾ ಕೇಂದ್ರ ಸಾಕ್ಷಿಯಾಗಿದೆ. ಹೌದು....ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯಲು ಬಂದ ತಾಯಿಯೊಬ್ಬರು ತನ್ನ ಎಂಟು ತಿಂಗಳ ಮಗುವನ್ನು ಹೊರಗೆ ಬಿಡಬೇಕಾಯಿತು.
ಬೆಂಗಳೂರು, (ಆಗಸ್ಟ್ 02): ಇದು ಕನಸುಗಳ ಬೆನ್ನತ್ತಿ ಬಂದ ಬಾಣಂತಿಯೊಬ್ಬಳ ಹೋರಾಟದ ಕಥೆ. ಒಂದೆಡೆ ಬದುಕಿಗೆ ಭದ್ರತೆ ನೀಡುವ ಸರ್ಕಾರಿ ಉದ್ಯೋಗದ ಹಂಬಲ, ಮತ್ತೊಂದೆಡೆ ಎದೆಯ ಮೇಲಿದ್ದ ಎಂಟು ತಿಂಗಳ ಹಸುಗೂಸಿನ ಮಮತೆ. ಈ ಮಾನವೀಯತೆಗೆ ಬೆಂಗಳೂರಿನ ಕೃಷ್ಣಾ ಕಾಲೇಜು ಪರೀಕ್ಷಾ ಕೇಂದ್ರ ಸಾಕ್ಷಿಯಾಗಿದೆ. ಹೌದು….ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯಲು ಬಂದ ತಾಯಿಯೊಬ್ಬರು ತನ್ನ ಎಂಟು ತಿಂಗಳ ಮಗುವನ್ನು ಹೊರಗೆ ಬಿಡಬೇಕಾಯಿತು. ತಾಯಿಗಾಗಿ ಅಳುತ್ತಿದ್ದ ಮಗುವನ್ನು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಮಡಿಲಿಗೆ ತೆಗೆದುಕೊಂಡು, ಜೋಗುಳ ಹಾಡಿ ಆರೈಕೆ ಮಾಡಿದರು. ಈ ಮಾನವೀಯ ಘಟನೆಯು ತಾಯಿ ನಿರಾಳವಾಗಿ ಪರೀಕ್ಷೆ ಬರೆಯಲು ನೆರವಾಯಿತು.
ಪರೀಕ್ಷೆ ಬರೆಯಲು ಕೃಷ್ಣಾ ಕಾಲೇಜಿಗೆ ಅಭ್ಯರ್ಥಿಯೊಬ್ಬರು ತಮ್ಮ 8 ತಿಂಗಳ ಮಗುವಿನೊಂದಿಗೆ ಆಗಮಿಸಿದ್ದರು. ಆದರೆ, ಪರೀಕ್ಷಾ ಕೊಠಡಿಗೆ ಹೋಗುವ ಕ್ಷಣದಲ್ಲಿ ಮಗು ಜೋರಾಗಿ ಅಳಲು ಪ್ರಾರಂಭಿಸಿದೆ. ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ ಅಳು ನಿಲ್ಲಿಸಿಲ್ಲ. ಪರೀಕ್ಷೆ ಬರೆಯಬೇಕೋ ಅಥವಾ ಮಗುವನ್ನು ನೋಡಿಕೊಳ್ಳಬೇಕೋ ಎಂದು ಸಂಕಟಪಡುತ್ತಿದ್ದ ತಾಯಿಯನ್ನು ಸ್ಥಳದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಮಹಿಳಾ ಸಿಬ್ಬಂದಿ ಗಮನಿಸಿ ನೀವು ನಿಶ್ಚಿಂತೆಯಿಂದ ಪರೀಕ್ಷೆ ಬರೆಯಿರಿ, ಮಗುವನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ” ಎಂದು ಬಟ್ಟೆ ತೊಟ್ಟಿಲು ಕಟ್ಟಿ ಹಾರೈಕೆ ಮಾಡಿದ್ದಾರೆ.