ರಾಮನಗರ ಕಂದಾಯ ಕಚೇರಿಗೆ ಹಾನಿ, ಜೆಡಿಎಸ್​ ಕಾರ್ಯಕರ್ತರ ವಿರುದ್ಧ ಎಫ್​ಐಆರ್​

| Updated By: ವಿವೇಕ ಬಿರಾದಾರ

Updated on: Jul 10, 2024 | 11:04 AM

ರಾಮನಗರ ಹಳ್ಳಿಮಾಳದ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ಮುಂದೂಡಿದ್ದನ್ನು ಖಂಡಿಸಿ ಕಂದಾಯ ಭವನದ ಬಳಿ ನಡೆಸಿದ ಪ್ರತಿಭಟನೆ ವೇಳೆ ಕಚೇರಿಗೆ ಹಾನಿ ಮಾಡಲಾಗಿದೆ ಎಂದು ಜೆಡಿಎಸ್​ ಕಾರ್ಯಕರ್ತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ರಾಮನಗರ ಕಂದಾಯ ಕಚೇರಿಗೆ ಹಾನಿ, ಜೆಡಿಎಸ್​ ಕಾರ್ಯಕರ್ತರ ವಿರುದ್ಧ ಎಫ್​ಐಆರ್​
ಜೆಡಿಎಸ್​ ಕಾರ್ಯಕರ್ತರ ಪ್ರತಿಭಟನೆ
Follow us on

ರಾಮನಗರ, ಜುಲೈ 10: ಪ್ರತಿಭಟನೆ ವೇಳೆ ಕಂದಾಯ ಭವನಕ್ಕೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ (JDS) ಕಾರ್ಯಕರ್ತರ ವಿರುದ್ಧ ರಾಮನಗರದ (Ramnagar) ಟೌನ್ ಪೊಲೀಸ್ ಠಾಣೆಯಲ್ಲಿ (Police Station) ಎಫ್​ಐಆರ್​ ​ದಾಖಲಾಗಿದೆ. ಹಳ್ಳಿಮಾಳದ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ಮುಂದೂಡಿದ್ದನ್ನು ಖಂಡಿಸಿ ಜೆಡಿಎಸ್​ ಕಾರ್ಯಕರ್ತರು ರಾಮನಗರ ಕಂದಾಯ ಭವನದ ಬಳಿ ಪ್ರತಿಭಟನೆ ನಡೆಸಿದರು.

ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ರಾಜಕೀಯ ಕಾರಣಕ್ಕಾಗಿ ಮುಂದೂಡಲಾಗಿದೆ ಎಂದು ಆರೋಪಿಸಿ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ವೇಳೆ ಕಂದಾಯ ಭವನದಲ್ಲಿ ಇರುವ ಸಹಾಕರ ಇಲಾಖೆಯ ನಿರ್ಬಂಧಕರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ವಾಗ್ವಾದ ನಡೆಯಿತು.

ಇದನ್ನೂ ಓದಿ: ಶಿವಕುಮಾರ್​ಗೆ ಬುದ್ಧಿ ಇದ್ದಿದ್ದರೆ ರಾಮನಗರ-ಚನ್ನಪಟ್ಟಣ ಅವಳಿ ನಗರ ಮಾಡುವ ಬಗ್ಗೆ ಯೋಚಿಸುತ್ತಿದ್ದರು: ಹೆಚ್ ಡಿ ಕುಮಾರಸ್ವಾಮಿ

ಈ ಸಂದರ್ಭದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ತಳ್ಳಾಟ-ನೂಕಾಟ ಸಂಭವಿಸಿತು. ಮುತ್ತಿಗೆ ಹಾಕಿದ ವೇಳೆ ಕಚೇರಿಗೆ ಹಾನಿ ಮಾಡಲಾಗಿದೆ ಎಂದು ಜೆಡಿಎಸ್​ ಕಾರ್ಯಕರ್ತರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ಕಾಂಗ್ರೆಸ್​ ಶಾಸಕ ಇಕ್ಬಾಲ್​ ಹುಸೇನ್​ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಂದೂಡಿಕೆ ಮಾಡಿದ್ದಾರೆ. ಎರಡು ಬಾರಿ ಚುನಾವಣೆ ನಿಗಧಿಯಾಗಿದ್ದರೂ ಅಧಿಕಾರಿಗಳು ಚುನಾವಣೆ ನಡೆಸಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್​ ಆರೋಪಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:03 am, Wed, 10 July 24