ಬೆಂಗಳೂರಿಗೆ ಕಾಡಲಿದೆಯಾ ನೀರಿನ ಹಾಹಾಕಾರ? ಸರ್ಕಾರಕ್ಕೆ ಪಂಪ್‌ ಸ್ಟೇಷನ್‌ ಚೀಫ್ ಎಕ್ಸಿಕ್ಯುಟಿವ್ ಇಂಜಿನಿಯರ್ ಬರೆದ ಪತ್ರದಲ್ಲೇನಿದೆ?

| Updated By: ವಿವೇಕ ಬಿರಾದಾರ

Updated on: Sep 23, 2023 | 1:12 PM

ಮುಂದಿನ ವರ್ಷ ಮಾರ್ಚವರೆಗೆ ಬೆಂಗಳೂರಿಗೆ ನೀರು ಪೂರೈಸಲು 10 ಟಿಎಂಸಿ ನೀರು ಅವಶ್ಯಕತೆ ಇದೆ. ಆದರೆ ತಮಿಳುನಾಡಿಗೆ ಮುಂದಿನ ಎರಡು ತಿಂಗಳು ಇದೇ ರೀತಿ ನೀರು ಬಿಟ್ಟರೇ 7 ಟಿಎಂಸಿ ನೀರು ಮಾತ್ರ ಉಳಿದುಕೊಳ್ಳುತ್ತದೆ. ಇದರಿಂದ ಬೆಂಗಳೂರಲ್ಲಿ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.

ಬೆಂಗಳೂರಿಗೆ ಕಾಡಲಿದೆಯಾ ನೀರಿನ ಹಾಹಾಕಾರ? ಸರ್ಕಾರಕ್ಕೆ ಪಂಪ್‌ ಸ್ಟೇಷನ್‌ ಚೀಫ್ ಎಕ್ಸಿಕ್ಯುಟಿವ್ ಇಂಜಿನಿಯರ್ ಬರೆದ ಪತ್ರದಲ್ಲೇನಿದೆ?
ಬೆಂಗಳೂರಿಗೆ ನೀರು ಪೂರೈಸುವ ಟಿಕೆ ಹಳ್ಳಿ ಪಂಪ್‌ ಸ್ಟೇಷನ್‌
Follow us on

ರಾಮನಗರ ಸೆ.23: ತಮಿಳುನಾಡಿಗೆ (Tamilnadu) ನಿತ್ಯ ಐದು ಸಾವಿರ ಕ್ಯೂಸೆಕ್​​ ಕಾವೇರಿ ನೀರು (Cauvery Water Dispute) ಹರಿಸಬೇಕು ಎಂದು ಸುಪ್ರಿಂಕೋರ್ಟ್,​​ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಎತ್ತಿಹಿಡಿದ ಬೆನ್ನಲ್ಲೇ ರಾಜ್ಯದಲ್ಲಿ ರೈತರು (Faremer) ನ್ಯಾಯಾಲಯದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾವೇರಿ ನದಿ ನೀರು ನಾಲ್ಕು ಜಿಲ್ಲೆಗಳಿಗೆ ಜೀವನಾಡಿಯಾಗಿದ್ದು, ರಾಜಧಾನಿ ಬೆಂಗಳೂರಿಗೂ ಕಾವೇರಿ ನೀರೇ ಪೂರೆಕೈಯಾಗುತ್ತಿದೆ. ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿದರೇ ಮುಂದಿನ ದಿನಗಳಲ್ಲಿ ಸಿಲಿಕಾನ್​ ಸಿಟಿ ಜನರಿಗೆ ಕುಡಿಯಲು ನೀರು ಸಿಗದೆ ಪರದಾಡುವಂತ ಪರಿಸ್ಥಿತಿ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಮಾಡುವ ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ಪಂಪ್‌ ಸ್ಟೇಷನ್‌ ಚೀಫ್ ಎಕ್ಸಿಕ್ಯುಟಿವ್ ಇಂಜಿನಿಯರ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ರಾಜಧಾನಿಗೆ ಪ್ರತಿ‌ ತಿಂಗಳಿಗೆ 1.6 ಟಿಎಮ್​​ಸಿ ನೀರಿನ ಅವಶ್ಯಕತೆ ಇದೆ. ಡಿಸೆಂಬರ್​ವರೆಗೂ ನೀರು ಸರಬರಾಜು ಮಾಡಬಹುದು. ಆದರೆ ಮುಂದಿನ ವರ್ಷದ ಆರಂಭದಲ್ಲಿ ಹಂತ 6 ಕಾರ್ಯಾರಂಭ ಮಾಡಿದರೇ ತಿಂಗಳಿಗೆ 2.4 ಟಿಎಂಸಿ ನೀರು ಬೇಕಾಗುತ್ತದೆ. ಹೀಗಾಗಿ ಪ್ರತಿದಿನ ಐದು ಸಾವಿರ ಕ್ಯೂಸೆಕ್​ ನೀರು ತಮಿಳುನಾಡಿಗೆ ಬಿಟ್ಟರೇ ಡಿಸೆಂಬರ್​​ ತಿಂಗಳ ನಂತರ ನೀರು ಪೂರೈಕೆಯಲ್ಲಿ ತೊಂದರೆಯಾಗಲಿದೆ. ಹೀಗಾಗಿ ನೀರನ್ನು ಸಂಗ್ರಹಿಸುವಂತೆ ಕರ್ನಾಟಕದ ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಆಗಸ್ಟ್​​, ಸೆಪ್ಟೆಂಬರ್​​ನಲ್ಲೇ ಕಾವೇರಿ ನದಿ ನೀರು ಹಂಚಿಕೆ ವಿವಾದ ಉಲ್ಬಣಗೊಳ್ಳುವುದೇಕೆ? ಇಲ್ಲಿವೆ ಕೆಲವು ಕಾರಣ

ಅಲ್ಲದೇ ಮುಂದಿನ ವರ್ಷ ಮಾರ್ಚವರೆಗೆ ಬೆಂಗಳೂರಿಗೆ ನೀರು ಪೂರೈಸಲು 10 ಟಿಎಂಸಿ ನೀರು ಅವಶ್ಯಕತೆ ಇದೆ. ಆದರೆ ತಮಿಳುನಾಡಿಗೆ ಮುಂದಿನ ಎರಡು ತಿಂಗಳು ಇದೇ ರೀತಿ ನೀರು ಬಿಟ್ಟರೇ 7 ಟಿಎಂಸಿ ನೀರು ಮಾತ್ರ ಉಳಿದುಕೊಳ್ಳುತ್ತದೆ. ಇದರಿಂದ ಬೆಂಗಳೂರಲ್ಲಿ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನೀರು ಶೇಖರಣೆ ಮಾಡಿಟ್ಟುಕೊಳ್ಳಿ ಎಂದಿದ್ದಾರೆ.

ಮಳೆ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಜಲಾಶಯಗಳು ಸದ್ಯ ಶೇ.36ರಷ್ಟು ಮಾತ್ರ ಭರ್ತಿಯಾಗಿವೆ. ಅದರಂತೆ ಕೆಆರ್​ಎಸ್, ಗೊರೂರು (ಹೇಮಾವತಿ), ಕಬಿನಿ ಮತ್ತು ಹಾರಂಗಿ ಜಲಾಶಯಗಳಲ್ಲಿ ಒಟ್ಟು 47.15 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆಯಾಗಿದೆ. ಅದರಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿದರೆ 37.56 ನೀರನ್ನು ಮಾತ್ರ ಬಳಸಿಕೊಳ್ಳಬಹುದಾಗಿದೆ.

ಕೆಆರ್​ಎಸ್​​ ಡ್ಯಾಂನಿಂದ ಶುಕ್ರವಾರ ಕಾವೇರಿ ನದಿಗೆ 2,673 ಕ್ಯೂಸೆಕ್ ನೀರು ಬಿಡಲಾಗಿತ್ತು, ಶನಿವಾರ 2973 ಕ್ಯೂಸೆಕ್ ನೀರು ಬಿಡಲಾಗಿದೆ. ಸೆಪ್ಟೆಂಬರ್​ 22 ರಂದು ಕೆಆರ್​​ಎಸ್​ಗೆ 5,845 ಕ್ಯೂಸೆಕ್ ನೀರು ಒಳ ಹರಿವು ಇತ್ತು, ಸೆಪ್ಟೆಂಬರ್​ 23 ರಂದು ಒಳ ಹರಿವು 5147 ಕ್ಯೂಸೆಕ್​ಗೆ ಇಳಿಕೆಗಿದೆ. ಸದ್ಯ 96.90 ಅಡಿಗೆ ನೀರು ಕುಸಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Sat, 23 September 23