ಶಿವಮೊಗ್ಗ, ಜುಲೈ 01: ಜಿಲ್ಲೆಯ ಹೊಸನಗರ ತಾಲೂಕಿನ ಸಮಗೋಡು ಬಳಿ 40 ಅಡಿ ಆಳದ ಕಂದಕಕ್ಕೆ ಕೆಎಸ್ಆರ್ಟಿಸಿ (KSRTC Bus) ಬಸ್ ಉರುಳಿರುವಂತಹ ಘಟನೆ ನಡೆದಿದೆ. ಎದುರಿಗೆ ಬಂದ ವಾಹನಕ್ಕೆ ಸೈಡ್ ಕೊಡುವಾಗ ಕಂದಕಕ್ಕೆ ಉರುಳಿ ದುರಂತ ಸಂಭವಿಸಿದೆ. 40 ಅಡಿ ಆಳದಲ್ಲಿ ಮರಕ್ಕೆ ಕೆಎಸ್ಆರ್ಟಿಸಿ ಬಸ್ ಸಿಲುಕಿ ತಲೆಕೆಳಗಾಗಿದ್ದು, ಬಸ್ನಲ್ಲಿ ಮಹಿಳೆಯರು, ಮಕ್ಕಳು ಸೇರಿ 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಪ್ರಯಾಣಿಕರು (passengers) ಬಚಾವ್ ಆಗಿದ್ದಾರೆ.
ಮರ ತಡೆಯದಿದ್ದರೆ ಇನ್ನೂ 100 ಅಡಿ ಆಳದ ಹೊಳೆಗೆ ಬಸ್ ಬೀಳುತ್ತಿತ್ತು. ಬೆಂಗಳೂರಿನಿಂದ ಹೊಸನಗರ ಮಾರ್ಗವಾಗಿ ಭಟ್ಕಳಕ್ಕೆ ಬಸ್ ತೆರಳುತ್ತಿತ್ತು. ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸಹಾಯಕ್ಕೆ ಧಾವಿಸಿದ್ದಾರೆ.
ಗದಗ: ಸರ್ಕಾರಿ ಬಸ್ ಟೈರ್ ಬ್ಲಾಸ್ಟ್ ಆದ ಹಿನ್ನೆಲೆ ಮಹಿಳಾ ಪ್ರಯಾಣಿಕಳ ಕಾಲಿಗೆ ಗಂಭೀರ ಗಾಯವಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹುಬ್ಬಳ್ಳಿ ಹಾಗೂ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ಈ ಘಟನೆ ನಡೆದಿತ್ತು. ಗದಗ ನಗರದಿಂದ ಗಂಗಾವತಿ ಪಟ್ಟಣಕ್ಕೆ ತೆರಳುತ್ತಿದ್ದ KSRTC ಬಸ್ ವೇಗವಾಗಿ ಸಂಚರಿಸುತ್ತಿರುವಾಗ ಏಕಾಏಕಿ ಹಿಂದಿನ ಚಕ್ರದ ಟೈರ್ ಬ್ಲಾಸ್ಟ್ ಆಗಿತ್ತು.
ಇದನ್ನೂ ಓದಿ: ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆಯಾಯ್ತು ವಿಚಿತ್ರ ಫ್ಯಾಮಿಲಿಯ ಕೃತ್ಯ
ಈ ವೇಳೆ ಹಿಂಬದಿ ಸೀಟ್ನಲ್ಲಿ ಕೂತಿದ್ದ ಮಹಿಳೆ ಕಾಲಿಗೆ ಗಂಭೀರ ಗಾಯವಾಗಿತ್ತು. ಟೈರ್ ಬ್ಲಾಸ್ಟ್ ಆದ ಚಕ್ರದ ಮೇಲಿನ, ಒಳಗಡೆ ಸೀಟ್ನಲ್ಲಿ ಮಹಿಳೆ ಕೂತಿದ್ದರು. ಬ್ಲಾಸ್ಟ್ ಆದ ರಭಸಕ್ಕೆ ಬಸ್ ಒಳಗಡೆ ಕೂತಿದ್ದ ಮಹಿಳೆ ಕಾಲಿಗೆ ಗಂಭೀರ ಗಾಯವಾಗಿತ್ತು. ಅದೃಷ್ಟವಶಾತ್ ಸ್ವಲ್ಪದರಲ್ಲೇ ಅನಾಹುತ ತಪ್ಪಿತ್ತು. ಉಳಿದೆಲ್ಲ ಪ್ರಯಾಣಿಕರು ಬಚಾವ್ ಆಗಿದ್ದರು. ಚಾಲಕ ತಕ್ಷಣ ಮಹಿಳೆಯನ್ನ ಆ್ಯಂಬ್ಯುಲೆನ್ಸ್ ಮೂಲಕ ಗದಗ ಜೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಶಿವಮೊಗ್ಗ: ಹೊಸನಗರ ತಾಲೂಕಿನಾದ್ಯಂತ ಕಳೆದ ಕೆಲ ಗಂಟೆಗಳಿಂದ ಭಾರಿ ಮಳೆ ಸುರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಗುಡುಗು, ಸಿಡಿಲಬ್ಬರದೊಂದಿಗೆ ಬಿರುಗಾಳಿ ಸಹಿತ ಬಿಟ್ಟು ಬಿಡದೆ ಮಳೆ ಸುರಿದಿದೆ.
ಇದನ್ನೂ ಓದಿ: ದೇವರಮನೆ, ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಪ್ರವಾಸಿಗರ ಹುಚ್ಚಾಟ: ಸಂಚಾರಕ್ಕೆ ಸಮಸ್ಯೆ
ನಗರ, ಮಾಸ್ತಿಕಟ್ಟೆ, ಕೋಡೂರು, ಹುಂಚ, ನಿಟ್ಟೂರು, ಸಂಪೆಕಟ್ಟೆ, ಹೊಸನಗರ ಪಟ್ಟಣ ಸೇರಿದಂತೆ ಹಲವೆಡೆ ಧಾರಾಕಾರ ಮಳೆ, ಗಾಳಿಗೆ ಬೃಹತ್ ಮರಗಳು ಧರೆಗುರುಳಿವೆ. ಸತತವಾಗಿ ಸುರಿಯುತ್ತಿರುವ ಮಳೆಗೆ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.