
ಹುಬ್ಬಳ್ಳಿ: ರಾಜ್ಯದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲ್ಲವೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷಕ್ಕೆ ಉತ್ತರ ಕರ್ನಾಟಕದಲ್ಲಿ ನೆಲೆ ಇಲ್ಲ. ಜೆಡಿಎಸ್ನವರು ಬಿಜೆಪಿಗೆ ಸಹಾಯ ಮಾಡಲು ಹೊರಟಿದ್ದಾರೆ ಎಂದಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರ ಕೊರತೆ ಇಲ್ಲ. ಚುನಾವಣೆ ಘೋಷಣೆಯಾದರೆ ಅಭ್ಯರ್ಥಿ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.
ಐ ಡೋಂಟ್ ಕೇರ್ ಈಶ್ವರಪ್ಪ; ಈಶ್ವರಪ್ಪ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್
ಇನ್ನು ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆದಾಗ ಯಾವ ಸಾಧನೆಯನ್ನೂ ಮಾಡಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಾಂಗ್ ಕೊಟ್ಟಿದ್ದು, ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಇದನ್ನು ಕೇಳಲು ಕೆ.ಎಸ್.ಈಶ್ವರಪ್ಪ ಯಾರು? ನನಗೆ ಕೆ.ಎಸ್. ಈಶ್ವರಪ್ಪನವರ ಸರ್ಟಿಫಿಕೇಟ್ ಬೇಕಾಗಿಲ್ಲ. ಐ ಡೋಂಟ್ ಕೇರ್ ಈಶ್ವರಪ್ಪ ಎಂದು ಗುಡುಗಿದ್ದಾರೆ.
ಈಶ್ವರಪ್ಪರನ್ನ ಎತ್ತಿಕಟ್ಟಿ ಹೋರಾಟ
ಎಸ್ಟಿ ಮೀಸಲಾತಿಗೆ ಕುರುಬ ಸಮುದಾಯದ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಆರ್ಎಸ್ಎಸ್ನವರು ಈಶ್ವರಪ್ಪರನ್ನ ಎತ್ತಿಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಿಎಂ ಆಗಿದ್ದಾಗ ಕುರುಬರನ್ನು ಎಸ್ಟಿಗೆ ಸೇರಿಸಬೇಕೆಂದು ನಾನೇ ಹೇಳಿದ್ದೆ. ಎಸ್ಟಿ ಮೀಸಲು ಹೋರಾಟದಲ್ಲಿ ರಾಜಕೀಯ ಮಾಡಲ್ಲ. ಕುಲಶಾಸ್ತ್ರ ಅಧ್ಯಯನದ ಬಗ್ಗೆ ಇನ್ನೂ ವರದಿಯೇ ಬಂದಿಲ್ಲ. ವರದಿ ಬರುವುದಕ್ಕೂ ಮುನ್ನವೇ ಹೋರಾಟ ಬೇಡ ಅಂದಿದ್ದೆ. ಆದರೆ ಈಗ ಮಾಡುತ್ತಿರುವ ಹೋರಾಟ ಆರ್ಎಸ್ಎಸ್ ಪ್ರೇರಿತವಾಗಿದೆ ಎಂದರು. ಅಲ್ಲದೇ ಹಿಂದ ಸಮಾವೇಶ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಹಿಂದುಳಿದವರ ಪರವಾಗಿ ಇದೆ ಹೀಗಾಗಿ ನಾವು ಹೋರಾಟ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ ಹೋರಾಟಕ್ಕೆ ಧುಮುಕುವೆ; ಹೆಚ್.ಸಿ.ಮಹದೇವಪ್ಪ