ಕೃಷ್ಣಾ ನದಿ ಉಗಮ ಸ್ಥಾನದಲ್ಲೇ ಮಾಯವಾದ ಮಳೆ; ಆಲಮಟ್ಟಿ ಡ್ಯಾಂ ಭರ್ತಿಯಾಗದಿದ್ದರೆ ಉತ್ತರ ಕರ್ನಾಟಕ ಭಾಗದ ಜನಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ

ಉತ್ತರ ಕರ್ನಾಟಕದ ಜೀವನದಿ ಕೃಷ್ಣ, ಈ ಬಾರಿ ಭೋರ್ಗರೆಯಲ್ಲಾ? ಕೃಷ್ಣಾನದಿಗೆ ಆಲಮಟ್ಟಿ ಬಳಿ ನಿರ್ಮಾಣ ಮಾಡಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಕೂಡ ಭರ್ತಿ ಆಗುವುದು ಡೌಟ್? ಎಂಬ ಪ್ರಶ್ನೆ ಮೂಡುತ್ತಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಆದರೆ, ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರಕ್ಕೆ ನೀರಿನ ಒಳ ಹರಿವಿನ ಪ್ರಮಾಣ ಏರಿಳಿತವಾಗುತ್ತಿದೆ. ಉತ್ತಮ ಮಳೆಯಾಗುತ್ತಿದ್ದರೂ ಡ್ಯಾಂಗೆ ಒಳ ಹರಿವು ಯಾಕೆ ಉಂಟಾಗಿಲ್ಲಾ? ಡ್ಯಾಂ ಭರ್ತಿಯಾಗೋಕೆ ಎದುರಾಗಿರೋ ಸಮಸ್ಯೆಗಳೇನು? ಎಂಬುದರ ಕುರಿತ ಇಲ್ಲಿದೆ ಮಾಹಿತಿ.

ಕೃಷ್ಣಾ ನದಿ ಉಗಮ ಸ್ಥಾನದಲ್ಲೇ ಮಾಯವಾದ ಮಳೆ; ಆಲಮಟ್ಟಿ ಡ್ಯಾಂ ಭರ್ತಿಯಾಗದಿದ್ದರೆ ಉತ್ತರ ಕರ್ನಾಟಕ ಭಾಗದ ಜನಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ
ಕೃಷ್ಣಾ ನದಿ ಉಗಮ ಸ್ಥಾನದಲ್ಲೇ ಮಳೆ ಇಲ್ಲದೆ ಭರ್ತಿಯಾಗದ ಆಲಮಟ್ಟಿ ಡ್ಯಾಂ
Edited By: ಕಿರಣ್ ಹನುಮಂತ್​ ಮಾದಾರ್

Updated on: Jun 21, 2024 | 6:57 PM

ವಿಜಯಪುರ, ಜೂ.21: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿ(Krishna River)ಗೆ ಅಡ್ಡಲಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ನಿರ್ಮಾಣ ಮಾಡಲಾಗಿದೆ. ಈ ಡ್ಯಾಂನಿಂದ ವಿಜಯಪುರ(Vijayapur), ಬಾಗಲಕೋಟೆ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ರೈತರ ಜಮೀನುಗಳಿಗೆ ನೀರು ಸಿಗುತ್ತದೆ. ಅಲ್ಲದೇ ವಿಜಯಪುರ ನಗರ, ವಿವಿಧ ತಾಲೂಕು ಕೇಂದ್ರಗಳ ನೂರಾರು ಗ್ರಾಮಗಳ ಜನ-ಜಾನುವಾರುಗಳಿಗೆ ನೀರು ದೊರೆಯುತ್ತದೆ. ಲಕ್ಷಾಂತರ ಜನ, ಪ್ರಾಣಿ ಸಂಕುಲ, ರೈತರಿಗೆ ಜೀವ ಸೆಲೆಯಾಗಿರುವ ಆಲಮಟ್ಟಿ ಡ್ಯಾಂ ಈ ಬಾರಿ ಭರ್ತಿಯಾಗುತ್ತಾ? ಇಲ್ಲವಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

519.60 ಮೀಟರ್ ಸಾಮರ್ಥ್ಯದ ಡ್ಯಾಂನಲ್ಲಿ ಜೂನ್ 21 ರವರೆಗೆ 509.84 ಮೀಟರ್ ಮಾತ್ರ ನೀರು ಸಂಗ್ರವಾಗಿದೆ. ಟಿಎಂಸಿ ಲೆಕ್ಕದಲ್ಲಿ ನೋಡಿದಾಗ ಡ್ಯಾಂನಲ್ಲಿ 29.138ನ ಟಿಎಂಸಿ ನೀರಿದೆ. ಆ ನೀರಲ್ಲಿ 11.518 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ. ಇಷ್ಟರ ಮಧ್ಯೆ ಇದೇ ಜೂನ್ 7 ರಿಂದ ಈ ವರ್ಷದ ಮೊದಲ ಒಳ ಹರಿವು ಡ್ಯಾಂನಲ್ಲಿ ದಾಖಲಾಗಿತ್ತು. ಜೂನ್7 ರಂದು 1,768 ಕ್ಯೂಸೆಕ್ ಒಳ ಹರಿವು ಉಂಟಾಗಿತ್ತು. ಜೂನ್ 8 ರಂದು 2,578 ಕ್ಯೂಸೆಕ್, ಜೂನ್ 9 ರಂದು 6,714 ಕ್ಯೂಸೆಕ್, ಜೂನ್ 10 ರಂದು 3,879 ಕ್ಯೂಸೆಕ್ ಒಳ ಹರಿವಿತ್ತು. ನಂತರ ಜೂನ್ 11 ರಂದು 21,251 ಕ್ಯೂಸೆಕ್ ಒಳ ಹರಿವು ಉಂಟಾಗಿ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿತ್ತು.

ಇದನ್ನೂ ಓದಿ:ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳ, ಜೂ. 8ರ ಡ್ಯಾಂಗಳ ನೀರಿನ ಮಟ್ಟ ವಿವರ ಇಲ್ಲಿದೆ

ಆಲಮಟ್ಟಿ ಡ್ಯಾಂ ಈ ಬಾರಿ ಭರ್ತಿಯಾಗುತ್ತಾ?

ಜೂನ್ 20 ರಂದು 2,050 ಕ್ಯೂಸೆಕ್ ಹಾಗೂ ಇಂದು ಜೂನ್ 21 ರಂದು 4,318 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಇಷ್ಟೇ ಪ್ರಮಾಣದ ಒಳ ಹರಿವು ಉಂಟಾದರೆ ಆಲಮಟ್ಟಿ ಡ್ಯಾಂ ಭರ್ತಿಯಾಗಲ್ಲ. ಕೃಷ್ಣೆಯ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹಾಗೂ ಚಿಪ್ಲೂನ್, ಸತಾರಾ, ಕರಾಟ, ರತ್ನಾಗಿರಿ ಪ್ರದೇಶದಲ್ಲಿ ಮಳೆ ಮಾಯವಾಗಿದೆ. ಆ ಭಾಗದಲ್ಲಿ ಮಳೆಯಾದರೆ ಮಾತ್ರ ಆಲಮಟ್ಟಿ ಡ್ಯಾಂಗೆ ನೀರು ಬರಲಿದೆ. ಹಾಗಾಗಿ ಜನರು ಈಗಿನಿಂದಲೇ ಜಾಗೃತೆ ವಹಿಸಬೇಕಿದೆ.

ಮುಂಗಾರು ಮಳೆ ಆರಂಭವಾಗಿ 20 ದಿನಗಳ ಮೇಲಾಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದ ಮಹಾಬಲೇಶ್ವರ ಸೇರಿದಂತೆ ಇತರೆ ಭಾಗದಲ್ಲಿ ಈ ವೇಳೆಗೆ ಭಾರೀ ವರ್ಷಧಾರೆಯಾಗಬೇಕಿತ್ತು. ಆದರೆ, ಮಹಾಬಲೇಶ್ವರ ಹಾಗೂ ಕೃಷ್ಣಾ ಜಲಾನಯನದ ಪ್ರದೇಶಗಳಲ್ಲಿ ಮಳೆಯಾಗಿಲ್ಲ. ಅಲ್ಲಿ ವಾಡಿಕೆಗಿಂತಲೂ ಕಡಿಮೆ ಪ್ರಮಾಣದ ಮಳೆಯಾಗಿದೆ. ಹೀಗಾಗಿ ಕೃಷ್ಣಾನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದೇ ಪರಸ್ಥಿತಿ ಅಲ್ಲಿ ನಿರ್ಮಾಣವಾದರೆ ಮಳೆಯಾಗದೇ ಹೋದರೆ ಆಲಮಟ್ಟಿ ಡ್ಯಾಂ ಭರ್ತಿಯಾಗೋದು ಕಷ್ಟವೆನ್ನಲಾಗಿದೆ.

ಇದನ್ನೂ ಓದಿ:ಆಲಮಟ್ಟಿ, ಕೆಆರ್​ಎಸ್​ ಜಲಾಶಯದಲ್ಲಿ ಒಳಹರಿವು ಹೆಚ್ಚಳ, ರಾಜ್ಯದ ಡ್ಯಾಂಗಳ ನೀರಿನ ಮಟ್ಟ ವಿವರ ಹೀಗಿದೆ

ಸದ್ಯ ಆಲಮಟ್ಟಿ ಡ್ಯಾಂ ಉತ್ತರ ಕರ್ನಾಟಕ ಐದು ಜಿಲ್ಲೆಗಳ ರೈತರ ಜಮೀನಿಗೆ ನೀರು ಒದಗಿಸುವ ಜಲ ಮೂಲವಾಗಿದೆ. ಒಂದು ವೇಳೆ ಮಹಾರಾಷ್ಟ್ರದ ಮಹಾಬಲೇಶ್ವರ ಹಾಗೂ ಇತರೆ ಪ್ರದೇಶದಲ್ಲಿ ಬರಗಾಲ ಉಂಟಾದರೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಜನರಿಗೆ ಮಾತ್ರ ಸಂಕಷ್ಟ ತಪ್ಪಲ್ಲ. ವಿವಿಧ ಏತ ನೀರಾವರಿ ಯೋಜನೆಗಳಿಗೆ ನೀರಿಲ್ಲದಂತಾಗುತ್ತದೆ. ವಿಜಯಪುರ ನಗರ ವಿವಿಧ ಪಟ್ಟಣಗಳು ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದ ನೂರಾರು ಗ್ರಾಮಗಳ ಜನ-ಜಾನುವಾರುಗಳಿಗೆ ನೀರಿನ ಅಭಾವ ಮಾತ್ರ ತಪ್ಪಲ್ಲ. ಹಾಗಾಗಿ ವಿಜಯಪುರ ಜಿಲ್ಲೆಯ ಹಾಗೂ ಇತರೆ ಜಿಲ್ಲೆಗಳ ಜನರು ಮಹಾರಾಷ್ಟ್ರದ ಮಹಾಬಲೇಶ್ವರ ಹಾಗೂ ಇತರೆಡೆಗಳಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

ಕಳೆದ ವರ್ಷ ರಾಜ್ಯದಲ್ಲೆಡೆ ತೀವ್ರ ಬರಗಾಲ ಉಂಟಾಗಿತ್ತು. ರಾಜ್ಯದ ವಿವಿಧ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರಲಿಲ್ಲ. ಇವೆಲ್ಲದಕ್ಕೆ ಅಪವಾದವೆಂಬಂತೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಸಿಎಂ ಸಿದ್ದರಾಮಯ್ಯ ಭರ್ತಿಯಾಗಿದ್ದ ಡ್ಯಾಂನಲ್ಲಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಣೆ ಮಾಡಿದ್ದರು. ಆದರೆ, ರಾಜ್ಯದಲ್ಲಿ ಉತ್ತಮ ಮಳೆಯಾದರೂ ಸಹ ಆಲಮಟ್ಟಿ ಡ್ಯಾಂ ಭರ್ತಿಯಾಗುತ್ತಾ ಇಲ್ಲವೋ ಎಂಬುದು ಮಾತ್ರ ನಿಗೂಢವಾದಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us