ವಿಜಯಪುರ: ಜ.12 ರಿಂದ ಸಿದ್ದೇಶ್ವರ ಜಾತ್ರೆ ಮಹೋತ್ಸವ; ಯಾವ ದಿನ ಏನೇನು ನಡೆಯಲಿದೆ? ಮಾಹಿತಿ ಇಲ್ಲಿದೆ

ವಿಜಯಪುರ ನಗರದ ಸಿದ್ದೇಶ್ವರ ಜಾತ್ರಾ‌ ಮಹೋತ್ಸವ ಜನವರಿ 12 ರಿಂದ ಆರಂಭವಾಗಲಿದ್ದು, 18ರ ವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಆ ದಿನಗಳಂದು ವಿವಿಧ ಕಾರ್ಯಕ್ರಮಗಳನ್ನು ಪೂಜಾ ವಿಧಿವಿಧಾನಗಳು ನಡೆಯಲಿವೆ. ಕೊರೊನಾ ಹಾಗೂ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕಾರಣ ಕಳೆದ ಮೂರು ವರ್ಷಗಳಿಂದ ಜಾತ್ರೆ ನಡೆಸಿರಲಿಲ್ಲ.

ವಿಜಯಪುರ: ಜ.12 ರಿಂದ ಸಿದ್ದೇಶ್ವರ ಜಾತ್ರೆ ಮಹೋತ್ಸವ; ಯಾವ ದಿನ ಏನೇನು ನಡೆಯಲಿದೆ? ಮಾಹಿತಿ ಇಲ್ಲಿದೆ
ಜನವರಿ 12 ರಿಂದ ಸಿದ್ದೇಶ್ವರ ಜಾತ್ರೆ ಮಹೋತ್ಸವ
Edited By: Rakesh Nayak Manchi

Updated on: Jan 08, 2024 | 2:46 PM

ವಿಜಯಪುರ, ಜ.8: ಕೊರೊನಾ ಹಾಗೂ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕಾರಣ ಕಳೆದ ಮೂರು ವರ್ಷಗಳಿಂದ ನಗರದ ಸಿದ್ದೇಶ್ವರ ಜಾತ್ರಾ‌ ಮಹೋತ್ಸವ (Siddheshwar Fair) ನಡೆಸಿರಲಿಲ್ಲ. ಇದೀಗ ಜನವರಿ 12 ರಿಂದ ಜಾತ್ರೆ ಆರಂಭವಾಗಲಿದ್ದು, 18ರ ವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಆ ದಿನಗಳಂದು ವಿವಿಧ ಕಾರ್ಯಕ್ರಮಗಳನ್ನು ಪೂಜಾ ವಿಧಿವಿಧಾನಗಳು ನಡೆಯಲಿವೆ.

ಜಾತ್ರಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಜಾತ್ರಾ‌ ಉತ್ಸವ ಸಮೀತಿ ಅಧ್ಯಕ್ಷ ಗುರು ಗಚ್ಚಿನಮಠ, ಜನೇವರಿ 12 ರಂದು ಗೋಮಾತೆ ಪೂಜೆ ಹಾಗೂ ನಂದಿಧ್ವಜಗಳ ಮೆರವಣಿಗೆ ನಡೆಯಲಿದೆ. ಜನೇವರಿ 13 ರಂದು ಲಿಂಗದಗುಡಿಯಲ್ಲಿನ 770 ಲಿಂಗಗಳಿಗೆ ಎಣ್ಣೆ ಮಜ್ಜನ, ಜನೇವರಿ 14 ರಂದು ಅಕ್ಷತಾರ್ಪಣೆ ಹಾಗೂ ಭೋಗಿ ಕಾರ್ಯಕ್ರಮ ನಡೆಯಲಿದೆ ಎಂದರು.

ಇದನ್ನೂ ಓದಿ: ವಿಜಯಪುರದಲ್ಲಿ ಧರ್ಮ ದಂಗಲ್; ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಹಾಕಲಾಗಿದ್ದ ಬ್ಯಾನರ್ ತೆರವು

ಜನೇವರಿ 15 ರಂದು ಹೋಮ ಹವನ ಪಲ್ಲಕ್ಕಿ ಮೆರವಣಿಗೆ, ಜನೇವರಿ 16 ರಂದು ಮದ್ದು ಸುಡುವ ಕಾರ್ಯಕ್ರಮ, ಜನೇವರಿ 17 ರಂದು ಭಾರ ಎತ್ತುವ ಸ್ಪರ್ಧೆ, ಜನೇವರಿ 18 ರಂದು ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆ ನಡೆಯಲಿದ್ದು, ರಾಜ್ಯ ರಾಷ್ಟ್ರ ಮಟ್ಟದ ಕುಸ್ತಿ ಪಟುಗಳು ಭಾಗಿಯಾಗಲಿದ್ದಾರೆ ಎಂದರು. ಈ ವೇಳೆ, ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ, ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಸಿದ್ದೇಶ್ವರ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

ವ್ಯಾಪಾರ ಧರ್ಮ ದಂಗಲ್

ಧಾರ್ಮಿಕ ದತ್ತಿ ಕಾನೂನಿನ ಪ್ರಕಾರವೇ ಅನ್ಯ ಧರ್ಮೀಯರಿಗೆ ವ್ಯಾಪಾರದ ಅವಕಾಶ ಇಲ್ಲ ಅಂತ ವಾದಿಸಿ ಹಿಂದೂ ಸಂಘಟನೆಗಳು ಜಾತ್ರಾ ಮಹೋತ್ಸವಗಳಂದು ಅನ್ಯಕೋಮಿನವರಿಗೆ ವ್ಯಾಪಾರ ನಿಷೇಧಿಸಿ ಬ್ಯಾನರ್​ಗಳನ್ನು ಹಾಕುತ್ತಿವೆ. ಕರಾವಳಿಯಲ್ಲಿ ಆರಂಭವಾದ ಈ ವಿವಾದ ರಾಜ್ಯಾದ್ಯಂತ ಹಬ್ಬಿದ್ದು, ವಿಜಯಪುರ ಜಾತ್ರೆಯಲ್ಲೂ ಈ ರೀತಿಯ ಬ್ಯಾನರ್ ಕಾಣಿಸಿದೆ. ಬಳಿಕ ಪೊಲೀಸರ ನೆರವಿನಿಂದ ಸಿದ್ದೇಶ್ವರ ಸಂಸ್ಥೆಯ ಸಿಬ್ಬಂದಿ ಬ್ಯಾನರ್ ತೆರವುಗೊಳಿಸಿದ್ದಾರೆ. ಬ್ಯಾನರ್ ಮತ್ತೇ ಅದೇ ಸ್ಥಳದಲ್ಲಿ ಹಾಕಬೇಕೆಂದು ಶ್ರೀರಾಮ ಸೇನಾ ಸಂಘಟನೆ ಮುಖಂಡ ನೀಲಕಂಠ ಕಂದಗಲ್ ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us