
ಮಂಡ್ಯ:ಕೊರೊನಾ ಸೋಂಕಿತ ಮಹಿಳೆ ಮೃತಪಟ್ಟು ಮೂರು ದಿನಗಳಾಗಿದ್ದರೂ, ಗ್ರಾಮಸ್ಥರ ವಿರೋಧದಿಂದ ಮಹಿಳೆಯ ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲದೆ, ಮೃತದೇಹ ಶವಾಗಾರದಲ್ಲಿಯೇ ಇರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ.ಹೀಗಾಗಿ ಮಹಿಳೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸೋಮವಾರ ಮೃತಪಟ್ಟಿದ್ದಾರೆ. ಹೀಗಾಗಿ ಮಹಿಳೆಯ ಅಂತ್ಯಸಂಸ್ಕಾರ ಮಾಡಲು ಅಧಿಕಾರಿಗಳು ಮಹಿಳೆಯ ಶವವನ್ನು ಗ್ರಾಮಕ್ಕೆ ತಂದಿದ್ದಾರೆ.
ಆದರೆ ಗ್ರಾಮಸ್ಥರ ವಿರೋಧದಿಂದಾಗಿ ಮಹಿಳೆಯ ಶವಸಂಸ್ಕಾರವನ್ನು ಬೇರೆಡೆ ಮಾಡಲು ನಿರ್ಧರಿಸಿದ್ದಾರೆ. ಆದರೆ ಅಲ್ಲೂ ಸಹ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಅಧಿಕಾರಿಗಳು ನಿಗದಿ ಮಾಡಿದ ಮೂರು ಸ್ಥಳದಲ್ಲಿಯೂ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಮಹಿಳೆಯ ಅಂತ್ಯಕ್ರಿಯೆ ನಡೆಸಲಾಗಿಲ್ಲ.
ಇದರಿಂದ ಅಧಿಕಾರಿಗಳು ಮಹಿಳೆಯ ಮೃತದೇಹವನ್ನು ಶವಗಾರದಲ್ಲಿಯೇ ಇರಿಸುವಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದ ಮಹಿಳೆಯ ಸಂಬಂಧಿಕರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದು, ಆದಷ್ಟು ಬೇಗ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಅಂತ್ಯಕ್ರಿಯೆ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ.