
ಬೆಂಗಳೂರು: ಭ್ರಷ್ಟಚಾರದ ಆರೋಪ ಹೊತ್ತಿರೋ ಅಧಿಕಾರಿಗೆ ಸರ್ಕಾರ ಮಣೆ ಹಾಕಿರುವ ಪ್ರಸಂಗ ಬೆಳಕಿಗೆ ಬಂದಿದೆ. ಹಿರಿಯ ಅಧಿಕಾರಿ ಕೆ. ರಂಗನಾಥ್ ಎಂಬುವವರನ್ನು ಭ್ರಷ್ಟಾಚಾರ ಎಸಗಿದ ಜಾಗಕ್ಕೇ ಸರ್ಕಾರ ಮತ್ತೆ ವರ್ಗಾವಣೆ ಮಾಡಿದೆ ಎಂದು ತಿಳಿದುಬಂದಿದೆ.
ಅಂದ ಹಾಗೆ, ರಂಗನಾಥ್ ಈ ಹಿಂದೆ ಯಲಹಂಕದಲ್ಲಿ ತಹಶೀಲ್ದಾರ್ ಆಗಿದ್ದರು. ಈ ವೇಳೆ, ಸರ್ಕಾರಿ ಜಾಗ ಬೇರೊಬ್ಬರ ಹೆಸ್ರಿಗೆ ಮಾಡಿಕೊಟ್ಟಿರೋ ಆರೋಪ ಇವರ ವಿರುದ್ಧ ಕೇಳಿಬಂದಿತ್ತು. ಈ ಪ್ರಕರಣದ ಬಗ್ಗೆ ಕೋರ್ಟ್ನಲ್ಲೂ ವಿಚಾರಣೆ ನಡೀತಿದೆ. ಆದರೆ ಇದೀಗ, ನಗರದ ಉತ್ತರ ವಲಯದ AC ಯಾಗಿ ರಂಗನಾಥ್ರನ್ನು ವರ್ಗಾವಣೆ ಮಾಡಲಾಗಿದೆ. ಹೀಗಾಗಿ, ಅಧಿಕಾರಿ ರಾಜಕಾರಣಿ ಪ್ರಭಾವದಿಂದ ಮತ್ತೆ ಹುದ್ದೆ ಗಿಟ್ಟಿಸಿಕೊಂಡ್ರಾ ಎಂಬ ಮಾತು ಕೇಳಿಬಂದಿದೆ.
‘ಆರೋಪ ಸಾಬೀತಾದಲ್ಲಿ ಕೆ.ರಂಗನಾಥ್ರನ್ನು ವಜಾ ಮಾಡ್ತೇವೆ’
ಅಧಿಕಾರಿ ಕೆ. ರಂಗನಾಥ್ ವಿರುದ್ಧ ಭ್ರಷ್ಟಾಚಾರ ಆರೋಪ ಸಾಬೀತಾದಲ್ಲಿ ಅವರನ್ನು ವಜಾ ಮಾಡ್ತೇವೆ ಎಂದು ಟಿವಿ9ಗೆ BDA ಅಧ್ಯಕ್ಷ ಹಾಗೂ ಶಾಸಕ S.R.ವಿಶ್ವನಾಥ್ ಹೇಳಿದ್ದಾರೆ. ಸರ್ಕಾರಿ ಜಾಗ ಅಕ್ರಮ ಪರಭಾರೆ ಸಾಬೀತಾದ್ರೆ ಕ್ರಮ ಕೈಗೊಳ್ಳುತ್ತೇವೆ. ವಿಚಾರಣೆ ನಡೆಯುತ್ತಿದ್ದು ಆರೋಪ ಸಾಬೀತಾದ್ರೆ ಶಿಕ್ಷೆ ಕಟ್ಟಿಟ್ಟಬುತ್ತಿ ಎಂದು ವಿಶ್ವನಾಥ್ ಹೇಳಿದರು.
ಟಿವಿ9ನಲ್ಲಿ ವರದಿಯ ನಂತರ ತನಿಖೆ ಚುರುಕುಗೊಂಡಿದೆ. ಅಕ್ರಮ ದೃಢಪಟ್ಟ 15 ದಿನಗಳಲ್ಲೇ ಮನೆಗೆ ಕಳಿಸುತ್ತೇವೆ. ಸಿಎಂ ಯಡಿಯೂರಪ್ಪ ಗಮನಕ್ಕೂ ಇದನ್ನು ತರುತ್ತೇನೆ. ಆರೋಪಗಳು ಸಾಬೀತಾದ್ರೆ ಅಧಿಕಾರಿ ನಿಸ್ಸಂದೇಹವಾಗಿ ಅಮಾನತು ಆಗುತ್ತಾರೆ ಎಂದು ಟಿವಿ9ಗೆ ಯಲಹಂಕ ಶಾಸಕ S.R. ವಿಶ್ವನಾಥ್ ಹೇಳಿದ್ದಾರೆ.