Aati Amavasya 2024: ‘ಆಟಿ ಅಮಾವಾಸ್ಯೆ’ ತುಳುವರಿಗೆ ವಿಶೇಷ ಯಾಕೆ? ಈ ಕಷಾಯದ ಹಿಂದಿದೆ ವೈಜ್ಞಾನಿಕ ಕಾರಣ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 27, 2024 | 3:19 PM

ಸುರಿಯುವ ಮಳೆಗೆ ಆಷಾಢದಲ್ಲಿ ನಾನಾ ಬಗೆಯ ಸೋಂಕುಗಳು ಕಾಣಿಸುವುದೇ ಹೆಚ್ಚು. ಇದನ್ನು ಅರಿತ ತುಳುವರ ಪೂರ್ವಜರು ವಿಶಿಷ್ಟ ಆಚರಣೆಯೊಂದನ್ನು ತಂದಿದ್ದು, ಅದುವೇ ಆಷಾಢ ಅಮವಾಸ್ಯೆಯಲ್ಲಿ ಕಷಾಯ ಕುಡಿಯುವುದು. ಈ ಆಷಾಢ ಮಾಸದಲ್ಲಿ ಬರುವ ಆಟಿ ಅಮಾವಾಸ್ಯೆಯು ತುಳುವರಿಗೆ ವಿಶೇಷ. ಈ ದಿನದಂದು ಮನೆ ಮಂದಿಯರೆಲ್ಲಾ ಹಾಲೆ ಮರದ ತೊಗಟೆಯ ಕಷಾಯ ಮಾಡಿ ಸೇವಿಸುತ್ತಾರೆ. ಈ ಬಾರಿ ಆಗಸ್ಟ್ 4 ರಂದು ಆಟಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಹಾಗಾದ್ರೆ ತುಳುವರ ಆಚರಣೆಯ ವಿಶೇಷ ಹಾಗೂ ಮಹತ್ವವೇನು ಎನ್ನುವುದರ ಸಂಪೂರ್ಣ ಮಾಹಿತಿಯು ಇಲ್ಲಿದೆ.

Aati Amavasya 2024: ಆಟಿ ಅಮಾವಾಸ್ಯೆ ತುಳುವರಿಗೆ ವಿಶೇಷ ಯಾಕೆ? ಈ ಕಷಾಯದ ಹಿಂದಿದೆ ವೈಜ್ಞಾನಿಕ ಕಾರಣ
Follow us on

ತುಳುನಾಡು ಎಂದ ಕೂಡಲೇ ನೆನಪಾಗುವುದೇ ಇಲ್ಲಿನ ವಿಶಿಷ್ಟವಾದ ಆಚರಣೆಗಳು. ಕರಾವಳಿಗರು ತಮ್ಮ ಜೀವನಶೈಲಿ ಹಾಗೂ ಆರೋಗ್ಯಕರವಾದ ಆಹಾರ ಕ್ರಮವನ್ನು ಅಳವಡಿಸಿಕೊಂಡವರು. ಹೀಗಾಗಿ ಇಲ್ಲಿನ ಜನರ ಒಂದೊಂದು ಆಚರಣೆಯು ಅರ್ಥ ಪೂರ್ಣವಾಗಿದೆ. ಈ ತುಳುನಾಡಿನಲ್ಲಿ ‘ಆಟಿ ಅಮಾವಾಸ್ಯೆ’ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಶುಭ ಸಮಾರಂಭಗಳು ನಡೆಯದ ಈ ಆಷಾಢದಲ್ಲಿ ರೋಗರುಜಿನಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎನ್ನುವ ನಂಬಿಕೆಯು ತುಳುವರದ್ದು. ಹೀಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕರಾವಳಿಯ ಜನರು ಆಷಾಢ ಅಮಾವ್ಯಾಸೆಯಂದು ಕಷಾಯ ಸೇವಿಸುವ ಕ್ರಮವಿದೆ.

ಆಟಿ ಅಮಾವಾಸ್ಯೆ ಆಚರಣೆಯು ವಿಶೇಷ ಏಕೆ?

ತುಳುನಾಡಿನ ಜನರು ಕೃಷಿ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡವರು. ಆದರೆ ಆಟಿ ತಿಂಗಳಿನಲ್ಲಿ ಫಸಲು ಕೊಯ್ಲಿಗೆ ಬರುವುದಿಲ್ಲ. ಜೋರಾಗಿ ಸುರಿಯುವ ಮಳೆಯಿಂದಾಗಿ ವಾತಾವರಣದಲ್ಲಾಗುವ ಬದಲಾವಣೆ, ಕಾಡುವ ಆರೋಗ್ಯ ಸಮಸ್ಯೆಗಳು ಹೆಚ್ಚಿರುವ ಕಾರಣ, ಆಟಿ ಅಮಾವಾಸ್ಯೆಯ ದಿನದಂದು ಕಷಾಯ ಸೇವಿಸುವ ಪದ್ಧತಿಯಿದೆ. ಈ ದಿನದಂದು ಹಾಲೆ ಮರದಲ್ಲಿ ಔಷಧೀಯ ಗುಣವು ಹೇರಳವಾಗಿರುತ್ತದೆ. ಕಷಾಯ ಮಾಡಿ ಸೇವನೆಯು ದೇಹದಲ್ಲಿರುವ ಕಲ್ಮಶವನ್ನು ಹೊರಹಾಕಿ, ರೋಗ ನಿರೋಧಕವನ್ನು ಹೆಚ್ಚಿಸುತ್ತದೆ ಎನ್ನುವುದು ನಂಬಿಕೆಯು ತುಳುವರದ್ದು. ಪ್ರಕೃತಿಯ ಜೊತೆಗೆ ಬೆಸೆದುಕೊಂಡಿರುವ ಇಲ್ಲಿನ ಜನರು ನಮಗೆ ಪ್ರಕೃತಿಯು ನೀಡಿದ ಔಷಧವೇ ಈ ಹಾಲೆ ಮರ ಎಂದು ನಂಬಿದ್ದಾರೆ.

ಹಾಲೆ ಮರದ ತೊಗಟೆ ತರುವುದಕ್ಕೂ ಇದೆ ಕ್ರಮ

ವರ್ಷಕ್ಕೊಮ್ಮೆ ಬರುವ ಆಟಿ ಅಮಾವಾಸ್ಯೆಯಂದು ಮಾತ್ರ ಈ ಕಷಾಯವನ್ನು ಕುಡಿಯಲಾಗುತ್ತದೆ. ಬೇರೆ ಯಾವುದೇ ಸಮಯದಲ್ಲಿಯೂ ಈ ಕಷಾಯ ಸೇವಿಸುವಂತಿಲ್ಲ. ಹಿಂದಿನ ದಿನವೇ ಈ ಮರವನ್ನು ಗುರುತು ಮಾಡಿಡಬೇಕು. ಈ ಅಮಾವಾಸ್ಯೆ ದಿನ ಸೂರ್ಯೋದಯಕ್ಕೂ ಮುನ್ನ ಮರದ ಬಳಿ ತೆರಳಿ ಕಲ್ಲಿನ ಸಹಾಯದಿಂದ ಮರದ ತೊಗಟೆಯನ್ನು ಕೆತ್ತಿ ಮನೆಗೆ ತರಬೇಕು. ಆದರೆ ಕೆತ್ತಿ ಅಥವಾ ಇನ್ಯಾವುದೇ ಆಯುಧವನ್ನು ಬಳಸುವಂತಿಲ್ಲ.

ಸೂರ್ಯೋದಯಕ್ಕೂ ಮುನ್ನವೇ ತೊಗಟೆಯನ್ನು ತರಲು ಪುರುಷರು ಬೆತ್ತಲೆಯಾಗಿ ಹೋಗುವ ಕ್ರಮವಿತ್ತು. ಆದರೆ ಈಗಿನ ಜನರು ಬಟ್ಟೆ ಧರಿಸಿಯೇ ಈ ಮರದ ತೊಗಟೆ ತರಲು ಹೋಗುತ್ತಾರೆ. ಬಟ್ಟೆ ಹಾಕದೇ ಬೆತ್ತಲೆಯಾಗಿ ಹೋದರೆ ದೇಹದ ಮುಂದೆ ಯಾವುದೇ ಪ್ರೇತಪಿಶಾಚಿಗಳು ನಿಲ್ಲಲ್ಲ ಎನ್ನುವುದು ತುಳುವರ ನಂಬಿಕೆ.

ಇದನ್ನೂ ಓದಿ: ಕರಾವಳಿಗರ ಸಾಂಪ್ರದಾಯಿಕ ತಿನಿಸು ಕಲ್ತಪ್ಪ ಮಾಡೋದು ಸುಲಭ, ಇಲ್ಲಿದೆ ರೆಸಿಪಿ

ಮನೆಗೆ ತಂದ ತೊಗಟೆಯನ್ನು ಸ್ವಚ್ಛಗೊಳಿಸಿ, ಇದಕ್ಕೆ ಕರಿ ಮೆಣಸು, ಬೆಳ್ಳುಳ್ಳಿ, ಓಮ ಹಾಕಿ ಕಲ್ಲಿನಿಂದಲೇ ಜಜ್ಜಬೇಕು. ಇದರ ರಸ ತೆಗೆದು, ಇದಕ್ಕೆ ಬಿಳಿ ಕಲ್ಲನ್ನು ಕೆಂಡದಲ್ಲಿ ಕಾಯಿಸಿ ಒಗ್ಗರಣೆ ಕೊಡಬೇಕು. ಈ ಕಷಾಯವನ್ನು ಮನೆ ಮಂದಿಯೆಲ್ಲಾ ಸೇವಿಸುತ್ತಾರೆ. ಕಷಾಯ ಕಹಿಯಾಗಿರುವ ಕಾರಣ ಬಾಯಿ ಸಿಹಿಯಾಗಿಸಲು ಬೆಲ್ಲ ತಿನ್ನುತ್ತಾರೆ. ಈ ಕಷಾಯವು ಹೆಚ್ಚು ಕುಡಿದರೆ ದೇಹಕ್ಕೆ ಉಷ್ಣವಾಗುವ ಕಾರಣ ದೇಹ ತಂಪಾಗಲೆಂದು ಮೆಂತ್ಯೆ ಗಂಜಿ ಸೇವಿಸುವ ಕ್ರಮವು ಇದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ