Good Governance Day 2025: ಉತ್ತಮ ಆಡಳಿತ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು?

ಸರ್ಕಾರದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿಯ ಪ್ರಯುಕ್ತ ಪ್ರತಿ ವರ್ಷ ಭಾರತದಲ್ಲಿ 'ಉತ್ತಮ ಆಡಳಿತ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

Good Governance Day 2025: ಉತ್ತಮ ಆಡಳಿತ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು?
ಉತ್ತಮ ಆಡಳಿತ ದಿನ
Image Credit source: Pinterest

Updated on: Dec 25, 2025 | 10:01 AM

ಉತ್ತಮ ಆಡಳಿತ (Good Governance) ಎಂದರೆ ಪಾರದರ್ಶಕತೆ, ಹೊಣೆಗಾರಿಕೆ, ಸಾರ್ವಜನಿಕ ಕಲ್ಯಾಣ ಮತ್ತು ಜವಾಬ್ದಾರಿಯುತವಾಗಿ, ಪರಿಣಾಮಕಾರಿಯಾಗಿ ಆಡಳಿತವನ್ನು ನಡೆಸುವುದಾಗಿದೆ. ಸರ್ಕಾರಿ ನೀತಿಗಳನ್ನು ಸಾಮಾನ್ಯ ನಾಗರಿಕರಿಗೆ ಪ್ರಾಮಾಣಿಕವಾಗಿ ತಲುಪಿಸಿದಾಗ, ಭ್ರಷ್ಟಾಚಾರವನ್ನು ನಿಗ್ರಹಿಸಿ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಅವಕಾಶಗಳನ್ನು ಒದಗಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಂದು ಆಡಳಿತ ವರ್ಗಗಳು ಉತ್ತಮ ರೀತಿಯಲ್ಲಿ ಆಡಳಿತ ನಡೆಸಬೇಕು ಹಾಗೂ ಸರ್ಕಾರದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಡಿಸೆಂಬರ್‌ 25 ರಂದು ಉತ್ತಮ ಆಡಳಿತ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿಂತನೆಗಳು ಮತ್ತು ಆದರ್ಶಗಳಿಗೆ ಸಮರ್ಪಿತವಾಗಿದೆ.

ಉತ್ತಮ ಆಡಳಿತ ದಿನದ ಇತಿಹಾಸವೇನು?

ಭಾರತದ ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿಯಂದು ಭಾರತದಲ್ಲಿ ‘ಉತ್ತಮ ಆಡಳಿತ ದಿನ’ವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಸಂಪೂರ್ಣವಾಗಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಮರ್ಪಿಸಲಾಗಿದೆ. 2014 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥವಾಗಿ ಪ್ರತಿ ವರ್ಷ ಡಿಸೆಂಬರ್ 25 ರಂದು ‘ಉತ್ತಮ ಆಡಳಿತ ದಿನ’ವನ್ನು ಆಚರಿಸುವುದಾಗಿ ಘೋಷಿಸಿದರು. ಈ ದಿನದಂದು ಅಟಲ್ ಬಿಹಾರಿ ವಾಜಪೇಯಿ ಅವರ ಕೆಲಸವನ್ನು, ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ.  ಸ್ಮರಿಸಲಾಗುತ್ತದೆ. ಅನೇಕ ಸ್ಥಳಗಳಲ್ಲಿ ವಿಚಾರ ಸಂಕಿರಣಗಳು ಮತ್ತು ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ.

ಉತ್ತಮ ಆಡಳಿತ ದಿನದ ಆಚರಣೆಯ ಉದ್ದೇಶವೇನು?

ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿಯ ಪ್ರಯುಕ್ತ ಭಾರತ ಸರ್ಕಾರವು 2014 ರಲ್ಲಿ ಉತ್ತಮ ಆಡಳಿತ ದಿನವನ್ನು ಪ್ರಾರಂಭಿಸಿತು. ಇದರ ಉದ್ದೇಶವೆಂದರೆ,

  • ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳ
  • ಜನ ಕೇಂದ್ರಿತ ನೀತಿಗಳನ್ನು ರೂಪಿಸುವುದು
  • ಸರ್ಕಾರಿ ಕೆಲಸವನ್ನು ಜವಾಬ್ದಾರಿಯುತವಾಗಿಸುವುದು
  • ನಾಗರಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಸರ್ಕಾರಿ ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು, ಇ-ಆಡಳಿತವನ್ನು ಉತ್ತೇಜಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಒಬ್ಬ ಜವಾಬ್ದಾರಿಯುತ ಗ್ರಾಹಕರಾಗಿ ನಿಮ್ಮ ಹಕ್ಕುಗಳೇನು, ತಿಳಿದುಕೊಳ್ಳಿ

ಅಟಲ್ ಬಿಹಾರಿ ವಾಜಪೇಯಿ ಒಬ್ಬ ಚೈತನ್ಯಶೀಲ ರಾಜಕಾರಣಿ:

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 25, 1924 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು. ಅವರು ಮೂರು ಬಾರಿ ಭಾರತದ ಪ್ರಧಾನಿಯಾದರು.  ಸರ್ಕಾರದ ಕೆಲಸವು ಕೇವಲ ಆಡಳಿತ ನಡೆಸುವುದಲ್ಲ, ಸೇವೆ ಸಲ್ಲಿಸುವುದು ಎಂದು ನಂಬಿದ್ದ ಅವರು  ತಮ್ಮ ಅಧಿಕಾರಾವಧಿಯಲ್ಲಿ ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದರು, ಮಹತ್ವದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು. ಅಜಾತಶತ್ರು ಎಂದೇ ಹೆಸರುವಾಸಿಯಾದ ಅವರು ನಿಷ್ಕಳಂಕ ಚಾರಿತ್ರ್ಯದ, ಮೇರು ವ್ಯಕ್ತಿತ್ವದ ಮಹಾನ್‌ ಜನನಾಯಕ. ತಮ್ಮ ಅತ್ಯುತ್ತಮ ಆಡಳಿದಿಂದ ಅಚ್ಚಳಿಯ ಛಾಪು ಮೂಡಿಸಿದ್ದ ವಾಜಪೇಯಿ ಅವರ ಜನ್ಮ ಜಯಂತಿಯಂದು ಉತ್ತಮ ಆಡಳಿತ ದಿನವನ್ನು ಆಚರಣೆ ಮಾಡುವ  ಮೂಲಕ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ