26/11 Mumbai Attack: 13 ವರ್ಷಗಳು ಕಳೆದರೂ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೆನಪು ಸದಾ ಹಸಿರು

| Updated By: shivaprasad.hs

Updated on: Nov 26, 2021 | 7:19 AM

31 ವರ್ಷದ ಕೆಚ್ಚೆದೆಯ ವೀರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನವೆಂಬರ್ 28, 2008 ರಂದು ಲಷ್ಕರ್-ಎ-ತೊಯ್ಬಾ ಉಗ್ರರ ವಿರುದ್ಧ ಹೋರಾಡುವಾಗ ದೇಶಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಿ ಸ್ಫೂರ್ತಿ, ದೇಶಭಕ್ತಿ ಮತ್ತು ತ್ಯಾಗದ ಸಂಕೇತವಾದರು.

26/11 Mumbai Attack: 13 ವರ್ಷಗಳು ಕಳೆದರೂ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೆನಪು ಸದಾ ಹಸಿರು
ಸಂದೀಪ್ ಉನ್ನಿಕೃಷ್ಣನ್
Follow us on

ಬೆಂಗಳೂರು: ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ(Lashkar-e-Taiba) ಉಗ್ರರು ನಡೆಸಿದ 26/11 ಮುಂಬೈ ದಾಳಿಗೆ (26/11 Mumbai attack )ಹದಿಮೂರು ವರ್ಷ. ಹಿಂಸಾಚಾರದ ಕಹಿ ನೆನಪುಗಳ ಜೊತೆಗೆ ಭಾರತೀಯ ಭದ್ರತಾ ಸಿಬ್ಬಂದಿಯ ಶೌರ್ಯ, ವಿಶೇಷವಾಗಿ ಎನ್ಎಸ್​​ಜಿ ಕಮಾಂಡೋ, ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್(Major Sandeep Unnikrishnan) ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಸಂದೀಪ್ ಹುತಾತ್ಮರಾಗಿ ವರ್ಷಗಳ ನಂತರ, ಅವರು ಇನ್ನೂ ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಹೀರೊ ಆಗಿ ಜನಮಾನಸದಲ್ಲಿ ನೆಲೆಯೂರಿದ್ದಾರೆ. ಬೆಂಗಳೂರಿನ ಪ್ರಮುಖ ಆಟೋ ನಿಲ್ದಾಣಗಳು, ಜಂಕ್ಷನ್‌ಗಳು ಮತ್ತು ಹಲವಾರು ಬಸ್ ತಂಗುದಾಣಗಳಲ್ಲಿ ದೇಶದ ಇತರ ಹೆಮ್ಮೆಯ ಯೋಧರ ಜೊತೆಗೆ ಅವರ ಛಾಯಾಚಿತ್ರವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಸಂದೀಪ್ ಅವರ ಕಟೌಟ್‌ಗಳು, ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ರಾಜ್ಯದ ಎಲ್ಲಾ ಪ್ರಮುಖ ನಗರ ಪ್ರದೇಶಗಳಲ್ಲಿ ಕಾಣಬಹುದು. ಬೆಂಗಳೂರಿನಲ್ಲೂ ಪ್ರಮುಖ ರಸ್ತೆಯೊಂದಕ್ಕೆ ಸಂದೀಪ್ ಉನ್ನಿಕೃಷ್ಣನ್ ಅವರ ಹೆಸರಿಡಲಾಗಿದೆ.  31 ವರ್ಷದ ಕೆಚ್ಚೆದೆಯ ವೀರ ನವೆಂಬರ್ 28, 2008 ರಂದು ಲಷ್ಕರ್-ಎ-ತೊಯ್ಬಾ ಉಗ್ರರ ವಿರುದ್ಧ ಹೋರಾಡುವಾಗ ದೇಶಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಿ ಸ್ಫೂರ್ತಿ, ದೇಶಭಕ್ತಿ ಮತ್ತು ತ್ಯಾಗದ ಸಂಕೇತವಾದರು. ಅವರು ದೇಶಕ್ಕಾಗಿ ತ್ಯಾಗ ಮಾಡಿದ ದಿನವಾದ ನವೆಂಬರ್ 28 ರಂದು ಬೆಂಗಳೂರಿನ ಕನ್ನಮಂಗಲದ ಸೇನಾ ನೆಲೆಯಲ್ಲಿ ತಮ್ಮ ಮಗನ ಪ್ರತಿಮೆಯ ಉದ್ಘಾಟನೆಯ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿರುವ ಅವರ ಕುಟುಂಬವು ಹೆಮ್ಮೆಯಿಂದ ಎದುರು ನೋಡುತ್ತಿದೆ.

ನಿವೃತ್ತ ಇಸ್ರೋ ಅಧಿಕಾರಿ ಆಗಿರುವ ಅವರ ಅಪ್ಪ ಕೆ. ಉನ್ನಿಕೃಷ್ಣನ್ “ಸೇನಾ ಸಿಬ್ಬಂದಿಗಳು ಆಯೋಜಿಸಿರುವ ಕಾರ್ಯಕ್ರಮಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ. ಅಲ್ಲಿಯೇ ಸಂದೀಪ್ ಉನ್ನಿಕೃಷ್ಣನ್ ಸೇರಿದ್ದಾರೆ. ಈ ಸಮಾರಂಭದಲ್ಲಿ ಲೆಫ್ಟಿನೆಂಟ್ ಜನರಲ್‌ಗಳಿಂದ ಹಿಡಿದು ಯೋಧರು ಭಾಗವಹಿಸಲಿದ್ದಾರೆ ಎಂದು ಐಎಎನ್‌ಎಸ್‌ ವರದಿ ಮಾಡಿದೆ.

ಅದೊಂದು ಸುಂದರ ಕಂಚಿನ, ಏಕಶಿಲಾ ಪ್ರತಿಮೆ. “ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾದ ದಿನವಾದ ನವೆಂಬರ್ 28 ರಂದು ಇದು ಖಾಸಗಿ ಕಾರ್ಯಕ್ರಮವಾಗಲಿದೆ.” 13 ವರ್ಷಗಳಿಂದ ಸರ್ಕಾರ ಮತ್ತು ಸಾರ್ವಜನಿಕ ಪ್ರತಿಕ್ರಿಯೆ ಮಾತ್ರ  ಬೆಳೆಯುತ್ತಿದೆ ಎಂದು ಅವರು ಹೇಳಿದರು.

ಉನ್ನಿಕೃಷ್ಣನ್ ಅವರ ನಿವಾಸದ ಎರಡನೇ ಮಹಡಿಯನ್ನು ಒಂದು ಪುಟ್ಟ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ಅಲ್ಲಿ ಅವರ ಸಮವಸ್ತ್ರ ಸೇರಿದಂತೆ ಎಲ್ಲಾ ಸೇನಾ ಸಾಮಗ್ರಿಗಳನ್ನು ಇರಿಸಲಾಗಿತ್ತು. ಜನರು ತಮ್ಮ ಹೀರೊನ ವಸ್ತುಗಳನ್ನು ನೋಡಲು ಸರತಿ ಸಾಲಿನಲ್ಲಿ ನಿಂತು ಅವರಿಗೆ ಗೌರವ ಸಲ್ಲಿಸುತ್ತಿದ್ದರು. ಆದರೆ ಈಗ ಅದನ್ನು ಮುಚ್ಚಲಾಗಿದೆ.

“ನಾನು ಈಗ ಆರ್ಕೈವ್‌ಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿದ್ದೇನೆ” ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಫೋಟೋಗಳನ್ನು ಹಾಕುವ ರೀತಿ ನನಗೆ ಇಷ್ಟವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ನನ್ನ ಮಗ ಎಲ್ಲದರಲ್ಲೂ ಗೆಲ್ಲುವ ಮನೋಭಾವ ಹೊಂದಿದ್ದನು. ಅವನು ಸಚಿನ್ ತೆಂಡೂಲ್ಕರ್ ಅನ್ನು ಹೇಗೆ ಇಷ್ಟಪಟ್ಟಿದ್ದಾನೆ ಎಂಬುದನ್ನು ಅವರ ತಂದೆ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ಭಾರತ ಒಂದು ಪಂದ್ಯದಲ್ಲಿ ಸೋತಾಗ ಅವನು ನಿರಾಸೆಗೊಳ್ಳುತ್ತಿದ್ದ. ಇಸ್ರೋ ಯೋಜನೆ ವಿಫಲವಾದಾಗಲೂ ಅವ ನನಗೆ ಸಾಂತ್ವನ ಹೇಳುತ್ತಿದ್ದ ಅಂತಾರೆ ಉನ್ನಿಕೃಷ್ಣನ್.

ಸಂದೀಪ್ ಉನ್ನಿಕೃಷ್ಣನ್ ಯಾವಾಗಲೂ ತಮ್ಮ ಸಹ ಯೋಧರ ಬಗ್ಗೆ ಕಾಳಜಿ ವಹಿಸುತ್ತಿದ್ದರು ಮತ್ತು ಅವರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದರು. ಅವರ ಸಹೋದ್ಯೋಗಿಗಳು ಹೇಳುವವರೆಗೂ ಅವರ ದಾನ ಸ್ವಭಾವ ಪೋಷಕರಿಗೆ ತಿಳಿದಿರಲಿಲ್ಲ. “ಅವರು ಯೋಗ್ಯವಾದ ಸಂಬಳವನ್ನು ಪಡೆದಿದ್ದರೂ, ಅವರ ಖಾತೆಯಲ್ಲಿ ಹೆಚ್ಚು ಹಣ ಇರಲಿಲ್ಲ. ಸಂದೀಪ್ ಅನೇಕ ದತ್ತಿ ಸಂಸ್ಥೆಗಳಿಗೆ ದೇಣಿಗೆ ನೀಡುತ್ತಿದ್ದರು” ಎಂದು ಅವರ ತಂದೆ ಹೇಳಿದರು.

ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಕಾರ್ಯಾಚರಣೆಯನ್ನು ನಡೆಸುತ್ತಿರುವಾಗ ಸಂದೀಪ್ ಉನ್ನಿಕೃಷ್ಣನ್‌ನಿಂದ ಬಂದ ಕೊನೆಯ ಸಂದೇಶ ಹೀಗಿತ್ತು “ಬೇಡ, ನಾನು ಅವರನ್ನು ನಿಭಾಯಿಸುತ್ತೇನೆ.” ಇದಾದ ನಂತರದ ಗಳಿಗೆಯಲ್ಲಿ ಉಗ್ರರ  ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಯುವ ಎನ್ಎಸ್​​ಜಿ ಕಮಾಂಡೋನ ಶೌರ್ಯವನ್ನು ಸೇನೆ ಮತ್ತು ಅವರ ಸಹೋದ್ಯೋಗಿಗಳು ಇನ್ನೂ ಗೌರವಿಸುತ್ತಾರೆ. ಅವರಿಗೆ ಜನವರಿ 26, 2009 ರಂದು ದೇಶದ ಅತ್ಯುನ್ನತ ಶಾಂತಿ ಸಮಯದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಲಾಯಿತು.