2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು ನಡೆಸಿದ್ದ ಮಣಿಪುರದ ಶಂಕಿತ ಉಗ್ರ ಬಂಧನ

ಜೂನ್ 22 ರಂದು ಮಣಿಪುರದ ಕ್ವಾಕ್ಟಾದಲ್ಲಿ ವ್ಯಕ್ತಿಯೊಬ್ಬನನ್ನು ಕೊಂದ ಕಾರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಗಂಗ್ಟೆ ಎಂದು ಪೊಲೀಸ್ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ಜೂನ್ 22 ರಂದು ಸಣ್ಣ ಸೇತುವೆಯೊಂದರ ಬಳಿ ನಿಲ್ಲಿಸಲಾಗಿದ್ದ ಸ್ಕಾರ್ಪಿಯೋ ಎಸ್‌ಯುವಿ ಸ್ಫೋಟಗೊಂಡಿದ್ದು, ಹಿಂಸಾಚಾರಕ್ಕೆ ಕಾರಣವಾಗಿತ್ತು. ದಾಳಿಯು ತರಬೇತಿ ಪಡೆದ ಭಯೋತ್ಪಾದಕರು ನಡೆಸಿದಂತೆ ಇತ್ತು ಎಂದು ಮೂಲಗಳು ಹೇಳಿದ್ದವು.

2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು ನಡೆಸಿದ್ದ ಮಣಿಪುರದ ಶಂಕಿತ ಉಗ್ರ ಬಂಧನ
ಎನ್ಐಎ
ರಶ್ಮಿ ಕಲ್ಲಕಟ್ಟ

Updated on: Sep 30, 2023 | 8:52 PM

ದೆಹಲಿ ಸೆಪ್ಟೆಂಬರ್ 30: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಲ್ಲಿನ ಭಯೋತ್ಪಾದಕ ನಾಯಕರನ್ನು ಒಳಗೊಂಡಿರುವ ಅಂತರಾಷ್ಟ್ರೀಯ ಸಂಚು ಪ್ರಕರಣದಲ್ಲಿ ಮಣಿಪುರದ (Manipur) ಚುರಾಚಂದ್‌ಪುರದಲ್ಲಿ ಶಂಕಿತ ಉಗ್ರನನ್ನು ದೇಶದ ಉನ್ನತ ಭಯೋತ್ಪಾದನಾ ನಿಗ್ರಹ ಸಂಸ್ಥೆ (NIA) ಬಂಧಿಸಿದೆ. ಶಂಕಿತನನ್ನು ವಿಚಾರಣೆಗಾಗಿ ಮತ್ತು ಹೆಚ್ಚಿನ ತನಿಖೆಗಾಗಿ ದೆಹಲಿಗೆ ಕರೆತರಲಾಗುತ್ತಿದೆ. ಆರೋಪಿ ಮತ್ತು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿರುವ ಆತನ ಜಾಲವು ಮಣಿಪುರ ಬಿಕ್ಕಟ್ಟನ್ನು ಬಳಸಿಕೊಳ್ಳಲು ಪ್ರಯತ್ನಿಸಿದೆ ಎಂದು ಭಯೋತ್ಪಾದನಾ ನಿಗ್ರಹ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಆರೋಪಿ ಸೆಮಿನ್‌ಲುನ್ ಗ್ಯಾಂಗ್ಟೆ ಮಣಿಪುರದಲ್ಲಿ ಶಾಂತಿ ಕದಡುವ ಮೂಲಕ ಭಾರತದ ವಿರುದ್ಧ ಯುದ್ಧ ನಡೆಸಲು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳ ನಾಯಕತ್ವದ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.


ಜೂನ್ 22 ರಂದು ಮಣಿಪುರದ ಕ್ವಾಕ್ಟಾದಲ್ಲಿ ವ್ಯಕ್ತಿಯೊಬ್ಬನನ್ನು ಕೊಂದ ಕಾರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಗಂಗ್ಟೆ ಎಂದು ಪೊಲೀಸ್ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ಜೂನ್ 22 ರಂದು ಸಣ್ಣ ಸೇತುವೆಯೊಂದರ ಬಳಿ ನಿಲ್ಲಿಸಲಾಗಿದ್ದ ಸ್ಕಾರ್ಪಿಯೋ ಎಸ್‌ಯುವಿ ಸ್ಫೋಟಗೊಂಡಿದ್ದು, ಹಿಂಸಾಚಾರಕ್ಕೆ ಕಾರಣವಾಗಿತ್ತು. ದಾಳಿಯು ತರಬೇತಿ ಪಡೆದ ಭಯೋತ್ಪಾದಕರು ನಡೆಸಿದಂತೆ ಇತ್ತು ಎಂದು ಮೂಲಗಳು ಹೇಳಿದ್ದವು.

ಗ್ಯಾಂಗ್ಟೆ ಯಾವ ಭಯೋತ್ಪಾದಕ ಗುಂಪಿಗೆ ಸೇರಿದ್ದಾನೆ ಎಂದು ಎನ್‌ಐಎ ಹೇಳಿಲ್ಲ.

ಸುಮಾರು 25 ಕುಕಿ ದಂಗೆಕೋರ ಗುಂಪುಗಳು ಚುರಾಚಂದ್‌ಪುರದಲ್ಲಿ ನೆಲೆಗೊಂಡಿವೆ. ಇವು ಕೇಂದ್ರ, ರಾಜ್ಯ ಮತ್ತು ಮಿಲಿಟರಿಯೊಂದಿಗೆ ತ್ರಿಪಕ್ಷೀಯ ಕಾರ್ಯಾಚರಣೆಗಳ ರದ್ದು (SoO) ಒಪ್ಪಂದಕ್ಕೆ ಸಹಿ ಹಾಕಿವೆ, ಅದರ ಅಡಿಯಲ್ಲಿ ದಂಗೆಕೋರರು ಗೊತ್ತುಪಡಿಸಿದ ಶಿಬಿರಗಳಲ್ಲಿ ಉಳಿಯಬೇಕು ಮತ್ತು ಅವರ ಶಸ್ತ್ರಾಸ್ತ್ರಗಳನ್ನು ಮೇಲ್ವಿಚಾರಣೆ ಶೇಖರಣೆಯಲ್ಲಿ ಇರಿಸಲಾಗುತ್ತದೆ. ಆದಾಗ್ಯೂ, SoO ಒಪ್ಪಂದಕ್ಕೆ ಸಹಿ ಹಾಕಿರುವ ಕೆಲವು ಗುಂಪುಗಳ ಬಂಡುಕೋರರು ಮಣಿಪುರ ಹಿಂಸಾಚಾರದಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಆರೋಪಗಳಿವೆ.

ಜುಲೈನಲ್ಲಿ ಎನ್‌ಐಎ ಪ್ರಕರಣವನ್ನು ದಾಖಲಿಸಿತ್ತು.

ಇದನ್ನೂ ಓದಿ: ಮಣಿಪುರ ಮತ್ತೆ ಡಿಸ್ಟರ್ಬ್ಡ್ ಏರಿಯಾ ಎಂದು ಘೋಷಣೆ

ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಉಗ್ರಗಾಮಿ ಗುಂಪುಗಳು ವಿವಿಧ ಜನಾಂಗೀಯ ಗುಂಪುಗಳ ನಡುವೆ ಬಿರುಕು ಮೂಡಿಸಲು ಮತ್ತು ಸರ್ಕಾರದ ವಿರುದ್ಧ ಸಮರ ಸಾರುವ ಉದ್ದೇಶದಿಂದ ಹಿಂಸಾಚಾರದ ಘಟನೆಗಳಲ್ಲಿ ಪಾಲ್ಗೊಳ್ಳಲು ಭಾರತದಲ್ಲಿನ ಉಗ್ರಗಾಮಿ ನಾಯಕರ ಒಂದು ವಿಭಾಗದೊಂದಿಗೆ ಸಂಚು ರೂಪಿಸಿವೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us