ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮರುನಾಮಕರಣ; ಕಾಂಗ್ರೆಸ್​​ಗೆ ದೂರದೃಷ್ಟಿಯ ಕೊರತೆಯಿದೆ ಎಂದ ಜೆಪಿ ನಡ್ಡಾ

ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯದಲ್ಲಿ ಪ್ರತಿಯೊಬ್ಬ ಪ್ರಧಾನಿಗೂ ಗೌರವವನ್ನು ನೀಡಲಾಗಿದೆ.ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಸಂಬಂಧಿಸಿದ ವಿಭಾಗವನ್ನು ಬದಲಾಯಿಸಿಲ್ಲ. ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯವು ರಾಜಕೀಯವನ್ನು ಮೀರಿದ ಪ್ರಯತ್ನವಾಗಿದೆ ಎಂದು ಹೇಳಿದ ನಡ್ಡಾ, ಇದನ್ನು ಅರಿತುಕೊಳ್ಳುವ ದೂರದೃಷ್ಟಿ ಕಾಂಗ್ರೆಸ್‌ಗೆ ಇಲ್ಲ ಎಂದು ಆರೋಪಿಸಿದರು.

ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮರುನಾಮಕರಣ; ಕಾಂಗ್ರೆಸ್​​ಗೆ ದೂರದೃಷ್ಟಿಯ ಕೊರತೆಯಿದೆ ಎಂದ ಜೆಪಿ ನಡ್ಡಾ
ಜೆಪಿ ನಡ್ಡಾ
ರಶ್ಮಿ ಕಲ್ಲಕಟ್ಟ

Updated on: Jun 16, 2023 | 6:53 PM

ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ (Nehru Memorial Museum and Library) ಮರುನಾಮಕರಣದ ಕುರಿತು ಕಾಂಗ್ರೆಸ್‌ನ (Congress) ಟೀಕೆಗಳಿಗೆ ತಿರುಗೇಟು ನೀಡಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ (JP Nadda) ಒಂದು ವಂಶಾಡಳಿತವನ್ನು ಮೀರಿದ ನಾಯಕರಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಅಸಮರ್ಥತೆ, ರಾಜಕೀಯ ಅಜೀರ್ಣಕ್ಕೆ ಇದು  ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ನೆಹರು ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ (ಎನ್‌ಎಂಎಂಎಲ್) ಅನ್ನು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಮರುನಾಮಕರಣ ಮಾಡಿದ್ದು  ಸರ್ಕಾರದ ಕ್ಷುಲ್ಲಕ ಕೃತ್ಯ. ಕಟ್ಟಡಗಳ ಮರುನಾಮಕರಣದಿಂದ ಪರಂಪರೆಗಳು ಅಳಿಸಿಹೋಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಎನ್‌ಎಂಎಂಎಲ್‌ನ ಮರುನಾಮಕರಣದ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕೆಟ್ಟ ಮನಸ್ಥಿತಿ ಮತ್ತು ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಆಧುನಿಕ ಭಾರತದ ವಾಸ್ತುಶಿಲ್ಪಿ ನೆಹರು ಅವರ ದೊಡ್ಡ ಕೊಡುಗೆಯನ್ನು ಎಂದಿಗೂ ಕಡಿಮೆ ಮಾಡಲು ಅವರಿಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಸರಣಿ ಟ್ವೀಟ್ ಮೂಲಕ ಉತ್ತರಿಸಿದ ನಡ್ಡಾ, ರಾಜಕೀಯ ಅಜೀರ್ಣಕ್ಕೆ ಶ್ರೇಷ್ಠ ಉದಾಹರಣೆ – ಒಂದು ವಂಶಾಡಳಿತವನ್ನು ಮೀರಿ ನಮ್ಮ ರಾಷ್ಟ್ರವನ್ನು ನಿರ್ಮಿಸಿದ ಮತ್ತು ಸೇವೆ ಸಲ್ಲಿಸಿದ ನಾಯಕರು ಇದ್ದಾರೆ ಎಂಬ ಸರಳ ಸತ್ಯವನ್ನು ಒಪ್ಪಿಕೊಳ್ಳಲು ಅವರು ಅಸಮರ್ಥರಾಗಿದ್ದಾರೆ ಎಂದು ಹೇಳಿದ್ದಾರೆ.


ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯದಲ್ಲಿ ಪ್ರತಿಯೊಬ್ಬ ಪ್ರಧಾನಿಗೂ ಗೌರವವನ್ನು ನೀಡಲಾಗಿದೆ.ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಸಂಬಂಧಿಸಿದ ವಿಭಾಗವನ್ನು ಬದಲಾಯಿಸಿಲ್ಲ. ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯವು ರಾಜಕೀಯವನ್ನು ಮೀರಿದ ಪ್ರಯತ್ನವಾಗಿದೆ ಎಂದು ಹೇಳಿದ ನಡ್ಡಾ, ಇದನ್ನು ಅರಿತುಕೊಳ್ಳುವ ದೂರದೃಷ್ಟಿ ಕಾಂಗ್ರೆಸ್‌ಗೆ ಇಲ್ಲ ಎಂದು ಆರೋಪಿಸಿದರು.

ತೀನ್ ಮೂರ್ತಿ ಭವನದ ಆವರಣದಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಉದ್ಘಾಟಿಸಿದ ಸುಮಾರು ಒಂದು ವರ್ಷದ ನಂತರ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ (ಎನ್‌ಎಂಎಂಎಲ್) ಅನ್ನು ಮರುನಾಮಕರಣ ಮಾಡಲಾಗಿದೆ.
ಪ್ರಧಾನಿ ಸಂಗ್ರಹಾಲಯದಲ್ಲಿ, ಪ್ರತಿಯೊಬ್ಬ ಪ್ರಧಾನಿಗೂ ಗೌರವವಿದೆ. ಪಂಡಿತ್ ನೆಹರುಗೆ ಸಂಬಂಧಿಸಿದ ವಿಭಾಗವನ್ನು ಬದಲಾಯಿಸಲಾಗಿಲ್ಲ. ಇದರ ಬದಲಾಗಿ ಅದರ ಪ್ರತಿಷ್ಠೆಯನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ ನಡ್ಡಾ.

ಒಂದು ಕುಟುಂಬದ ಪರಂಪರೆ ಮಾತ್ರ ಉಳಿದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹಿಂದಿನ ಎಲ್ಲಾ ಪ್ರಧಾನಿಗಳ ಪರಂಪರೆಯನ್ನು ಅಳಿಸಿಹಾಕುವುದು ಪಕ್ಷದ ಏಕೈಕ ಕೊಡುಗೆಯಾಗಿದೆ. ಈ ವಿಷಯಕ್ಕೆ ಕಾಂಗ್ರೆಸ್‌ನ ವಿಧಾನವು ವ್ಯಂಗ್ಯದಿಂದ ಕೂಡಿದ್ದು ಎಂದು ಬಿಜೆಪಿ ಮುಖ್ಯಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: Prime Ministers Museum: ನೆಹರು ಮೆಮೊರಿಯಲ್ ಮ್ಯೂಸಿಯಂನ ಹೆಸರು ಬದಲಿಸಿದ ಕೇಂದ್ರ ಸರ್ಕಾರ, ಕಾಂಗ್ರೆಸ್ ಆಕ್ರೋಶ

50 ವರ್ಷಗಳ ಕಾಲ ಭಾರತವನ್ನು ಆಳಿದ ಪಕ್ಷಕ್ಕೆ, ಅವರ ಸಣ್ಣತನವು ನಿಜವಾಗಿಯೂ ದುರಂತವಾಗಿದೆ. ಜನರು ಅವರನ್ನು ತಿರಸ್ಕರಿಸಲು ಕಾರಣವೂ ಇದೇ ಎಂದು ನಡ್ಡಾ ಹೇಳಿದ್ದಾರೆ. NMML ನ ವಿಶೇಷ ಸಭೆಯಲ್ಲಿ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಶುಕ್ರವಾರ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us