ಅಮೀರ್ ಖಾನ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರಿದ್ದ ಅರ್ಜಿ ವಜಾ

2015ರಲ್ಲಿ ಅಮಿರ್ ಖಾನ್ ನೀಡಿದ್ದ ಅಸಹಿಷ್ಣುತೆ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಲು ಕೋರಿದ್ದ ಅರ್ಜಿಯನ್ನು ಛತ್ತೀಸ್​ಗಡ ಹೈಕೋರ್ಟ್ ತಿರಸ್ಕರಿಸಿದೆ.

ಅಮೀರ್ ಖಾನ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರಿದ್ದ ಅರ್ಜಿ ವಜಾ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 26, 2020 | 6:52 PM

ರಾಯಪುರ: ಅಮಿರ್ ಖಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಛತ್ತೀಸ​ಗಢ ಹೈಕೋರ್ಟ್ ವಜಾ ಮಾಡಿದೆ.

2015ರಲ್ಲಿ ಅಮೀರ್, ‘ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ತಮ್ಮ ಕುಟುಂಬಕ್ಕೆ ಅಭದ್ರತೆ ಕಾಡುತ್ತಿದೆ. ಪತ್ನಿ ಕಿರಣ್ ರಾವ್ ತಮಗೆ ದೇಶ ತೊರೆಯಲು ಸೂಚಿಸಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ವಕೀಲ ದೀಪಕ್ ದಿವಾನ್​ರ ಅರ್ಜಿಯನ್ನು ಕೋರ್ಟ್ ತಳ್ಳಿಹಾಕಿದೆ.

ಧರ್ಮ, ಜನ್ಮಸ್ಥಳ ಆಧರಿಸಿ ಅಮೀರ್ ನೀಡಿದ ಹೇಳಿಕೆ ಸಮಾಜದಲ್ಲಿ ಗಲಭೆ ಹುಟ್ಟಿಸುವಂತಿದೆ. ಹೀಗಾಗಿ, ಅಮೀರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ದೀಪಕ್ ಕೋರಿದ್ದರು.

‘ಅಮೀರ್ ಹೇಳಿಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತಹ ಯಾವುದೇ ಅಂಶ ಕಂಡುಬಂದಿಲ್ಲ. ಈಗಾಗಲೇ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ ಕೋರ್ಟ್​ಗಳು ಕೈಗೊಂಡ ನಿರ್ಧಾರ ನ್ಯಾಯಯುತವಾಗಿದೆ’ ಎಂದು ಛತ್ತೀಸ್​ಗಢ ಹೈಕೋರ್ಟ್ ಅಭಿಪ್ರಾಯಪಟ್ಟಿತು ಎಂದು ಲೈವ್​ ಲಾ ಜಾಲತಾಣ ವರದಿ ಮಾಡಿದೆ.

Published On - 6:51 pm, Thu, 26 November 20