ಮಣಿಪುರ ಸ್ಥಿತಿ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧ, ವಿಪಕ್ಷ ಪ್ರತಿಭಟನೆ ಬಿಟ್ಟು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಲಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

|

Updated on: Jul 21, 2023 | 1:03 PM

ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಅರ್ಥಪೂರ್ಣ ಚರ್ಚೆಗೆ ಸಿದ್ಧವಿದೆ. ಆದರೆ ವಿಪಕ್ಷಗಳು ಸುಖಾಸುಮ್ಮನೆ ಸುಳ್ಳು ಹೇಳುತ್ತಾ ಅಧಿವೇಶದ ಸಮಯ ಹಾಳು ಮಾಡುವುದನ್ನು ಬಿಟ್ಟು ಸಹಕರಿಸಬೇಕು - ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಮಣಿಪುರ ಸ್ಥಿತಿ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧ, ವಿಪಕ್ಷ ಪ್ರತಿಭಟನೆ ಬಿಟ್ಟು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಲಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Follow us on

ನವದೆಹಲಿ, ಜುಲೈ 20: ದಿನಕ್ಕೊಂದು ಷರತ್ತು ಹಾಕುತ್ತಾ ಸಂಸತ್ತಿನ ಹಾಲಿ ಮುಂಗಾರು ಅಧಿವೇಶನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ವಿರೋಧ ಪಕ್ಷಗಳಿಗೆ ಸೆಷನ್​ ನಡೆಯೋದು, ಜನ ಪರ ವಿಚಾರಗಳು ಚರ್ಚೆಯಾಗೋದೇ ಬೇಕಾಗಿಲ್ಲ ಅಂತ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಣಿಪುರ ವಿಚಾರದ ಕುರಿತಾದ ಚರ್ಚೆಗೆ ನಾವು ಸಿದ್ದವಿದ್ದೇವೆ. ಇದನ್ನ ಅಧಿವೇಶನದಲ್ಲಿ ನಿನ್ನೆಯೂ ನಾವು ಹೇಳಿದ್ದೆವು, ಆದರೆ ವಿರೋಧ ಪಕ್ಷಗಳು ಪುನಃ ಪುನಃ ಹೊಸ ಷರತ್ತುಗಳನ್ನು ಮುಂದಿಟ್ಟುಕೊಂಡು ಅಧಿವೇಶನಕ್ಕೆ ಅಡ್ಡಿಪಡಿಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಅರ್ಥಪೂರ್ಣ ಚರ್ಚೆಗೆ ಸಿದ್ಧವಾಗಿದೆ, ಆದರೆ ವಿರೋಧ ಪಕ್ಷಗಳು ಸುಖಾಸುಮ್ಮನೆ ಸುಳ್ಳು ಹೇಳುತ್ತಾ ಅಧಿವೇಶನವನ್ನು ಹಾಳು ಮಾಡುವುದನ್ನು ಬಿಟ್ಟು ಸಹಕರಿಸಬೇಕು ಎಂದರು.

ಇದೆ ವೇಳೆ ಉಳಿದೆಲ್ಲ ಕಲಾಪಗಳನ್ನು ಬದಿಗೊತ್ತಬೇಕು, ಮಣಿಪುರದ ಕುರಿತು ಚರ್ಚೆ ಮಾಡಬೇಕು.. ಎಂದು ವಿರೋಧ ಪಕ್ಷಗಳ ಪ್ರಮುಖರು ನೋಟಿಸ್ ನೀಡಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪ್ರಲ್ಹಾದ ಜೋಶಿ, ಆ ರೀತಿ ನೋಟಿಸ್ ನೀಡಲು ಸದನದ ನಿಯಮಾವಳಿಗಳಲ್ಲಿ ಅವಕಾಶವೇ ಇಲ್ಲ, ಇಂತಹ ಸರಳ ವಿಚಾರವನ್ನು ವಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಇಲ್ಲದ ನಿಯಮಗಳಡಿ ನೋಟಿಸ್ ನೀಡುತ್ತಾ ಕಾಲಾಹರಣ ಮಾಡಬಾರದು ಎಂದು ಸೂಕ್ಷ್ಮವಾಗಿ ಹೇಳಿದರು.

ಈ ಬಾರಿಯ ಮುಂಗಾರಿನ ಅಧಿವೇಶನಲ್ಲಿ ಹಲವು ಪ್ರಮುಖ ವಿಧೇಯಕಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಜನ ಪರ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಹೀಗಾಗಿ ವಿರೋಧ ಪಕ್ಷದ ನಾಯಕರು ಕಲಾಪಕ್ಕೆ ಅಡ್ಡಿಪಡಿಸುವುದನ್ನು ಬಿಟ್ಟು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಲಿ, ಮಣಿಪುರ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Fri, 21 July 23