ಎಂಎಲ್​ಎ ಜಿಗ್ನೇಶ್​ ಮೇವಾನಿಗೆ ಜಾಮೀನು; ಆದ್ರೆ ಹೈಕೋರ್ಟ್ ಮೆಟ್ಟಿಲೇರಲು ಮುಂದಾದ ಮಹಿಳಾ ಪೊಲೀಸ್ ಅಧಿಕಾರಿ

ಪ್ರಕರಣದ ವಿಚಾರಣೆ ನಡೆಸಿದ್ದ ಬಾರಾಪೇಟಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಅಪರೇಶ್​ ಚಕ್ರವರ್ತಿ, ಶಾಸಕ ಜಿಗ್ನೇಶ್​ ಮೇವಾನಿಗೆ ಬೇಲ್​ ನೀಡಿದ್ದಾರೆ

ಎಂಎಲ್​ಎ ಜಿಗ್ನೇಶ್​ ಮೇವಾನಿಗೆ ಜಾಮೀನು; ಆದ್ರೆ ಹೈಕೋರ್ಟ್ ಮೆಟ್ಟಿಲೇರಲು ಮುಂದಾದ ಮಹಿಳಾ ಪೊಲೀಸ್ ಅಧಿಕಾರಿ
ಜಿಗ್ನೇಶ್ ಮೇವಾನಿ
Edited By:

Updated on: May 01, 2022 | 1:33 PM

ಗುವಾಗಹಟಿ: ಮಹಿಳಾ ಪೊಲೀಸ್ ಸಬ್​ ಇನ್ಸ್​​ಪೆಕ್ಟರ್​ ಒಬ್ಬರು ನೀಡಿದ್ದ ಹಲ್ಲೆ ದೂರಿನ ಅನ್ವಯ ಪೊಲೀಸರಿಂದ ಬಂಧಿತರಾಗಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು ಸಿಕ್ಕಿದೆ. ಆದರೆ ಈ ಮಹಿಳಾ ಪೊಲೀಸ್ ಅಧಿಕಾರಿ ಜಿಗ್ನೇಶ್​ರನ್ನು ಇಲ್ಲಿಗೇ ಬಿಟ್ಟುಬಿಡುವಂತೆ ಕಾಣುತ್ತಿಲ್ಲ. ಮೇವಾನಿಗೆ ನೀಡಲಾದ ಜಾಮೀನನ್ನು ಪ್ರಶ್ನಿಸಿ, ಮತ್ತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.  ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಜಿಗ್ನೇಶ್​ ಮೇವಾನಿಯವರನ್ನು ಪೊಲೀಸರು ವಾಹನದಲ್ಲಿ ಕರೆದುಕೊಂಡು ಹೋಗುವಾಗ, ಇಬ್ಬರು ಪುರುಷ ಪೊಲೀಸ್​ ಸಿಬ್ಬಂದಿಯ ಎದುರಿಗೇ, ಜಿಗ್ನೇಶ್ ಮೇವಾನಿ ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂಬುದು ಈ ಮಹಿಳಾ ಅಧಿಕಾರಿಯ ದೂರಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ಬಾರಾಪೇಟಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಅಪರೇಶ್​ ಚಕ್ರವರ್ತಿ, ಶಾಸಕ ಜಿಗ್ನೇಶ್​ ಮೇವಾನಿಗೆ ಬೇಲ್​ ನೀಡಿದ್ದಾರೆ. ಚಲಿಸುವ ವಾಹನದಲ್ಲಿ ಪುರುಷ ಪೊಲೀಸ್ ಅಧಿಕಾರಿಗಳ ಎದುರೇ, ಮಹಿಳಾ ಅಧಿಕಾರಿಯ ಮೇಲೆ ಮೇವಾನಿ ಹಲ್ಲೆ ನಡೆಸಲು ಪ್ರಯತ್ನ ಪಟ್ಟಿದ್ದಾರೆ ಎಂಬ ಎಫ್​ಐಆರ್ ಸುಳ್ಳು ಎಂದು ಆದೇಶ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಅಸ್ಸಾಂ ಮುಖ್ಯಮಂತ್ರಿ, ಜಿಲ್ಲಾ ನ್ಯಾಯಾಧೀಶರು ಅವರ ತೀರ್ಪು ನೀಡಿದ್ದಾರೆ. ಆದರೆ ಈಗ ಮಹಿಳಾ ಪೊಲೀಸ್ ಅಧಿಕಾರಿ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಅದಕ್ಕಾಗಿ ನನ್ನ ಅನುಮತಿಯನ್ನೂ ಕೇಳಿದ್ದಾರೆ. ಅವರು ಅನುಮತಿ ಕೇಳಿ ಮನವಿ ಮಾಡಿದ ಅರ್ಜಿ, ದೂರಿನ ವಿವರಗಳನ್ನೊಳಗೊಂಡ ಫೈಲ್​ ನನ್ನ ಎದುರು ಇದೆ. ನಾನು ಅನುಮೋದನೆ ಕೊಟ್ಟ ತಕ್ಷಣ ಪೊಲೀಸ್​ ಅಧಿಕಾರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸುತ್ತಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜಿಗ್ನೇಶ್ ಮೇವಾನಿ ಮೊದಲು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಿರಂತರವಾಗಿ ಅವಹೇಳನಕಾರಿ ಟ್ವೀಟ್​​ಗಳನ್ನು ಮಾಡಿ, ಪೊಲೀಸರಿಂದ ಬಂಧಿತರಾಗಿದ್ದರು. ಆ ಪ್ರಕರಣದಲ್ಲಿ ಜಾಮೀನು ಸಿಕ್ಕಿ, ಲಾಕಪ್​ನಿಂದ ಹೊರಬರುತ್ತಿದ್ದಂತೆ ಈ ಕೇಸ್​​ನಲ್ಲಿ ಅರೆಸ್ಟ್ ಆಗಿದ್ದರು. ಕಳೆದ 9-10ದಿನಗಳಿಂದಲೂ ಪೊಲೀಸ್​ ಕಸ್ಟಡಿಯಲ್ಲೇ ಇದ್ದ ಮೇವಾನಿಗೆ ಸದ್ಯ ರಿಲೀಫ್ ಸಿಕ್ಕಿದೆ.

ಇದನ್ನೂ ಓದಿ: Skin Care: ನಿಮ್ಮ ಈ ಹವ್ಯಾಸಗಳೇ ಚರ್ಮದ ಆರೋಗ್ಯಕ್ಕೆ ಮುಳುವಾಗಬಹುದು; ಏನೇನದು? ಇಲ್ಲಿದೆ ನೋಡಿ

Follow Us