ಗುರುಗ್ರಾಮ್ ಮಸೀದಿಗೆ ಬೆಂಕಿ, ರಾತ್ರಿ ನಡೆದ ದಾಳಿಯಲ್ಲಿ ಇಮಾಮ್ ಹತ್ಯೆ: ಕೇಂದ್ರ ಸಚಿವ ರಾವ್ ಇಂದರ್‌ಜಿತ್ ಸಿಂಗ್

ಧಾರ್ಮಿಕ ಸ್ಥಳಗಳ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಶಾಂತಿ ಕಾಪಾಡಲು ಪೊಲೀಸರು ಮತ್ತು ಆಡಳಿತ ಎರಡೂ ಸಮುದಾಯದ ಪ್ರಮುಖ ಸದಸ್ಯರೊಂದಿಗೆ ಸಭೆಗಳನ್ನು ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಸೋಹ್ನಾ, ಪಟೌಡಿ ಮತ್ತು ಮನೇಸರ್ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಗುರುಗ್ರಾಮ್ ಮಸೀದಿಗೆ ಬೆಂಕಿ, ರಾತ್ರಿ ನಡೆದ ದಾಳಿಯಲ್ಲಿ ಇಮಾಮ್ ಹತ್ಯೆ: ಕೇಂದ್ರ ಸಚಿವ ರಾವ್ ಇಂದರ್‌ಜಿತ್ ಸಿಂಗ್
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ

Updated on: Aug 01, 2023 | 1:21 PM

ಗುರುಗ್ರಾಮ್ ಆಗಸ್ಟ್ 1: ಗುರುಗ್ರಾಮ್‌ನ ಮಸೀದಿಯೊಂದರ (Gurugram Mosque)ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಒಬ್ಬ ವ್ಯಕ್ತಿಯ ಹತ್ಯೆಯಾಗಿದೆ. ಈ ದಾಳಿಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಕ್ಟರ್ 57ರಲ್ಲಿರುವ ಅಂಜುಮನ್ ಜಮಾ ಮಸೀದಿಗೂ (Anjuman Jama Masjid) ಬೆಂಕಿ ಹಚ್ಚಲಾಗಿದೆ. ಅಗ್ನಿಶಾಮಕ ನಿಯಂತ್ರಣ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ಹತೋಟಿಗೆ ತಂದಿವೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.  ಗುರುಗ್ರಾಮ್‌ನ ಮಸೀದಿಯೊಂದರ ಮೇಲೆ ದಾಳಿ ನಡೆದಿದ್ದು, ಇಮಾಮ್ ಸೇರಿದಂತೆ ಇಬ್ಬರಿಗೆ ಗುಂಡು ತಾಗಿದೆ ಎಂದು ಕೇಂದ್ರ ಸಚಿವ ಮತ್ತು ಗುರುಗ್ರಾಮ್ ಸಂಸದ ರಾವ್ ಇಂದರ್‌ಜಿತ್ ಸಿಂಗ್(Rao Inderjit Singh) ಹೇಳಿದ್ದಾರೆ.

“ನಿನ್ನೆ, ನಾನು ಗೃಹ ಖಾತೆಯ ರಾಜ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ಅರೆಸೇನಾಪಡೆಗಳ ಇಪ್ಪತ್ತು ತುಕಡಿಗಳನ್ನುಕಳುಹಿಸಲಾಗಿದೆ. ನುಹ್ ಘಟನೆಯು ಗುರುಗ್ರಾಮ್‌ನ ಮೇಲೂ ಪರಿಣಾಮ ಬೀರಿದೆ. ನಿನ್ನೆ, ಗುರುಗ್ರಾಮ್‌ನ ಮಸೀದಿಯ ಮೇಲೆ ದಾಳಿ ನಡೆದಿತ್ತು, ಇದರಲ್ಲಿ ಇಮಾಮ್ ಸೇರಿದಂತೆ ಇಬ್ಬರ ಮೇಲೆ ಗುಂಡು ತಾಗಿದೆ. ಈ ಪ್ರಕರಣದಲ್ಲಿ ಐದು ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ದಾಳಿಕೋರರನ್ನು ಗುರುತಿಸಿದ್ದು, ಹಲವು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಧಾರ್ಮಿಕ ಸ್ಥಳಗಳ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಶಾಂತಿ ಕಾಪಾಡಲು ಪೊಲೀಸರು ಮತ್ತು ಆಡಳಿತ ಎರಡೂ ಸಮುದಾಯದ ಪ್ರಮುಖ ಸದಸ್ಯರೊಂದಿಗೆ ಸಭೆಗಳನ್ನು ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಸೋಹ್ನಾ, ಪಟೌಡಿ ಮತ್ತು ಮನೇಸರ್ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.


ಹರ್ಯಾಣದಲ್ಲಿ ನಿನ್ನೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಹೋಮ್ ಗಾರ್ಡ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ. ಗುರುಗ್ರಾಮ್‌ಗೆ ಹೊಂದಿಕೊಂಡಿರುವ ಹರ್ಯಾಣದ ನುಹ್‌ನಲ್ಲಿ ನಡೆದ ಧಾರ್ಮಿಕ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದಿದ್ದು, ಘರ್ಷಣೆ ಆರಂಭವಾಗಿತ್ತು.

ನುಹ್‌ನ ಖೇಡ್ಲಾ ಮೋಡ್‌ನಲ್ಲಿ ಧಾರ್ಮಿಕ ಮೆರವಣಿಗೆಯನ್ನು ತಡೆಯಲು ಗುಂಪೊಂದು ಕಲ್ಲು ತೂರಾಟ ಮಾಡಿದ್ದು, ಕಾರುಗಳಿಗೆ ಬೆಂಕಿ ಹಚ್ಚಿದೆ. ಇದೇ ವೇಳೆ ಹೋಮ್ ಗಾರ್ಡ್‌ಗಳನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರವು ನೆರೆಯ ಜಿಲ್ಲೆಗೆ ಹರಡುತ್ತಿದ್ದಂತೆ ಗುರುಗ್ರಾಮ್‌ನ ಮಸೀದಿಯೊಂದರ ಮೇಲೆ ಗುಂಪೊಂದು ದಾಳಿ ಮಾಡಿದ ನಂತರ ನಿನ್ನೆ ತಡರಾತ್ರಿ 26 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ, ಆದರೆ ಹಿಂಸಾಚಾರದಲ್ಲಿ ಸಾವನ್ನಪ್ಪಿದ ನಾಲ್ಕನೇ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

ಇದನ್ನೂ ಓದಿ: ಹರ್ಯಾಣದಲ್ಲಿ ಕೋಮು ಘರ್ಷಣೆ: 3 ಮಂದಿ ಸಾವು, ಇಂಟರ್​ನೆಟ್ ಸ್ಥಗಿತ

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಗುರುಗ್ರಾಮ್-ಆಳ್ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಗುಂಪೊಂದು ತಡೆದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us