ಕೇರಳದಲ್ಲಿ ಹರಡಿರುವ ನಿಫಾ ವೈರಸ್ ಬಾಂಗ್ಲಾದೇಶ ತಳಿ; ಇದು ಕಡಿಮೆ ಸಾಂಕ್ರಾಮಿಕ ಆದರೆ ಮರಣ ಪ್ರಮಾಣ ಹೆಚ್ಚು

|

Updated on: Sep 13, 2023 | 1:25 PM

ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅಸಹಜ ಸಾವುವೈರಸ್‌ನ ಪರಿಣಾಮವಾಗಿದೆ ಎಂದು ವೀಣಾ ಜಾರ್ಜ್ ದೃಢಪಡಿಸಿದರು. ರಾಯಿಟರ್ಸ್ ವರದಿ ಮಾಡಿದಂತೆ, ವೈರಸ್‌ನಿಂದ ಪೀಡಿತ ಜನರಲ್ಲಿ ಒಬ್ಬರು ಈ ತಿಂಗಳು ಸಾವಿಗೀಡಾಗಿದ್ದರೆ, ಇನ್ನೊಬ್ಬರು ಆಗಸ್ಟ್ 30 ರಂದು ಸಾವಿಗೀಡಾಗಿದ್ದಾರೆ.

ಕೇರಳದಲ್ಲಿ ಹರಡಿರುವ ನಿಫಾ ವೈರಸ್ ಬಾಂಗ್ಲಾದೇಶ ತಳಿ; ಇದು ಕಡಿಮೆ ಸಾಂಕ್ರಾಮಿಕ ಆದರೆ ಮರಣ ಪ್ರಮಾಣ ಹೆಚ್ಚು
ಕೇರಳದಲ್ಲಿ ನಿಫಾ ವೈರಸ್ ಸೋಂಕು
Follow us on

ಕೋಯಿಕ್ಕೋಡ್ ಸೆಪ್ಟೆಂಬರ್ 13: ಕೇರಳದಲ್ಲಿ (Kerala) ನಿಫಾ (Nipah virus)ಸೋಂಕಿತ ನಾಲ್ವರಲ್ಲಿ ಇಬ್ಬರ ಸಾವಿಗೆ ಕಾರಣವಾಗಿರುವ ಮೆದುಳಿಗೆ ಹಾನಿಯುಂಟುಮಾಡುವ ನಿಫಾ ವೈರಸ್ ಬಾಂಗ್ಲಾದೇಶದ( Bangladesh) ತಳಿ ಆಗಿದ್ದು, ಇದು ಮನುಷ್ಯರಿಂದ ಮನುಷ್ಯನಿಗೆ ಹರಡುತ್ತದೆ ಎಂದು ಕೇರಳ ಸರ್ಕಾರ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದೆ. ಈ ರೂಪಾಂತರಿ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ ಆದರೆ ಕಡಿಮೆ ಸಾಂಕ್ರಾಮಿಕವಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ರಾಜ್ಯದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅಸಹಜ ಸಾವು ವೈರಸ್‌ನ ಕಾರಣದಿಂದಾಗಿದೆ ಎಂದು ವೀಣಾ ಜಾರ್ಜ್ ದೃಢಪಡಿಸಿದರು. ರಾಯಿಟರ್ಸ್ ವರದಿ ಮಾಡಿದಂತೆ, ವೈರಸ್‌ನಿಂದ ಪೀಡಿತ ಜನರಲ್ಲಿ ಒಬ್ಬರು ಈ ತಿಂಗಳು ಸಾವಿಗೀಡಾಗಿದ್ದರೆ, ಇನ್ನೊಬ್ಬರು ಆಗಸ್ಟ್ 30 ರಂದು ಸಾವಿಗೀಡಾಗಿದ್ದಾರೆ.

2018 ರಿಂದ ಕೇರಳದಲ್ಲಿ ನಾಲ್ಕನೇ ಬಾರಿ ನಿಫಾ ಸೋಂಕು ಹರಡಿದೆ. 2018 ರಲ್ಲಿ ಮೊದಲ ಬಾರಿ ನಿಫಾ ಕಾಣಿಸಿಕೊಂಡಾಗ 23 ಸೋಂಕಿತ ಜನರಲ್ಲಿ, 21 ಮಂದಿ ಸಾವಿಗೀಡಾಗಿದ್ದು.2019 ಮತ್ತು 2021 ರಲ್ಲಿ, ನಿಫಾ ಮತ್ತೆ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿತು. ವೈರಸ್ ವಿರುದ್ಧ ಯಾವುದೇ ಚಿಕಿತ್ಸೆಗಳು ಅಥವಾ ಲಸಿಕೆಗಳಿಲ್ಲ. ಸೋಂಕಿತ ಬಾವಲಿಗಳು, ಹಂದಿಗಳು ಅಥವಾ ಇತರ ಜನರ ದೈಹಿಕ ದ್ರವಗಳ ನೇರ ಸಂಪರ್ಕದ ಮೂಲಕ ವೈರಸ್ ಮನುಷ್ಯರಿಗೆ ಹರಡುತ್ತದೆ. 1999 ರಲ್ಲಿ ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ಹಂದಿ ಸಾಕಣೆದಾರರು ಮತ್ತು ಹಂದಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುವರಲ್ಲಿ ಈ ಸೋಂಕು ಮೊದಲ ಪತ್ತೆಯಾಗಿತ್ತು.

ನಿಫಾ ಸೋಂಕು; ಇಲ್ಲಿವರೆಗಿನ ಅಪ್ಡೇಟ್

ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ತಂಡಗಳು ಬುಧವಾರ ಕೇರಳಕ್ಕೆ ಆಗಮಿಸಲಿದ್ದು, ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ನಿಫ ವೈರಸ್ ಪರೀಕ್ಷಿಸಲು ಮತ್ತು ಬಾವಲಿಗಳ ಸಮೀಕ್ಷೆಯನ್ನು ನಡೆಸಲು ಮೊಬೈಲ್ ಲ್ಯಾಬ್ ಅನ್ನು ಸ್ಥಾಪಿಸಲಾಗಿದೆ.
ಚೆನ್ನೈನಿಂದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ತಂಡವು ಸಮೀಕ್ಷೆ ನಡೆಸಲು ಕೇರಳವನ್ನು ತಲುಪಲಿದೆ.

ಬುಧವಾರ, ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಆರೋಗ್ಯ ಬಿಕ್ಕಟ್ಟನ್ನು ಪರಿಹರಿಸಲು ಜಾರಿಗೊಳಿಸಲಾದ ಕ್ರಮಗಳ ಸರಣಿಯನ್ನು ಘೋಷಿಸಿದರು. ಕಣ್ಗಾವಲು, ಸಂಪರ್ಕ ಪತ್ತೆಹಚ್ಚುವಿಕೆ, ವ್ಯಕ್ತಿಗಳನ್ನು ಕಡಿಮೆ ಮತ್ತು ಹೆಚ್ಚಿನ ಅಪಾಯದ ಗುಂಪುಗಳಾಗಿ ವರ್ಗೀಕರಿಸುವುದು, ಪ್ರತ್ಯೇಕ ಸೌಲಭ್ಯಗಳನ್ನು ಸ್ಥಾಪಿಸುವುದು, ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸುವುದು ಮತ್ತು ಮತ್ತು ಸೋಂಕಿತರಿಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನಿಂದ ಔಷಧಿಗಳನ್ನು ಖರೀದಿಸುವುದು.

ಕೋಯಿಕ್ಕೋಡ್ ಆಡಳಿತವು ಆಯಂಚೇರಿ, ಮರುತೋಂಕರ, ತಿರುವಳ್ಳೂರು, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲ್ಲ್ಯಪಲ್ಲಿ ಮತ್ತು ಕವಿಲುಂಪರಾ ಈ ಏಳು ಪಂಚಾಯತ್ ಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಿದೆ.

ಕೇರಳದ ಕಣ್ಣೂರು, ವಯನಾಡು ಮತ್ತು ಮಲಪ್ಪುರಂ ಜಿಲ್ಲೆಗಳಿಗೂ ಎಚ್ಚರಿಕೆ ನೀಡಲಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ವೈರಸ್ ಬಾಧಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಮೊನೊಕ್ಲೋನಲ್ ಪ್ರತಿಕಾಯಗಳನ್ನು ಕಳುಹಿಸಲು ಸಹ ಒಪ್ಪಿಕೊಂಡಿದೆ.

ಕಂಟೈನ್‌ಮೆಂಟ್ ಪ್ರದೇಶದಲ್ಲಿರುವ ಜನರು ಮಾಸ್ಕ್ ಧರಿಸಲು, ಸ್ಯಾನಿಟೈಸರ್‌ಗಳನ್ನು ಬಳಸಲು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಲು ಕೇಳಲಾಗಿದೆ.

ಕೋಯಿಕ್ಕೋಡ್ ಜಿಲ್ಲಾಧಿಕಾರಿ ಎ ಗೀತಾ ಅವರು ಮಂಗಳವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಮುಂದಿನ ಸೂಚನೆ ಬರುವವರೆಗೆ, ಪೊಲೀಸರು ಸುತ್ತುವರಿದಿರುವ ಕಾರಣ ಈ ಪ್ರದೇಶಗಳಿಗೆ ಅಥವಾ ಹೊರಗೆ ಪ್ರಯಾಣಿಸಲು ಯಾರಿಗೂ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಅಗತ್ಯ ಮತ್ತು ವೈದ್ಯಕೀಯ ಸರಕುಗಳನ್ನು ಮಾರಾಟ ಮಾಡುವ ಅಂಗಡಿಗಳು ಕಂಟೈನ್‌ಮೆಂಟ್ ವಲಯಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಆದಾಗ್ಯೂ, ಔಷಧಾಲಯಗಳು ಮತ್ತು ಆರೋಗ್ಯ ಕೇಂದ್ರಗಳು ಸುಗಮವಾಗಿ ಕಾರ್ಯನಿರ್ವಹಿಸಬಹುದು.

ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳು ಮತ್ತು ಗ್ರಾಮ ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ಕಂಟೈನ್‌ಮೆಂಟ್ ವಲಯಗಳಲ್ಲಿ ಬ್ಯಾಂಕುಗಳು, ಇತರ ಸರ್ಕಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಅಂಗನವಾಡಿಗಳು ಕಾರ್ಯನಿರ್ವಹಿಸುವುದಿಲ್ಲ. ಜನರು ಆನ್‌ಲೈನ್ ಸೇವೆಗಳನ್ನು ಬಳಸಲು ಮತ್ತು ಮನೆಯಿಂದ ಹೊರಬರುವುದನ್ನು ತಪ್ಪಿಸುವಂತೆ ಗೀತಾ ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಮತ್ತು ಕಂಟೈನ್‌ಮೆಂಟ್ ವಲಯಗಳ ಮೂಲಕ ಹೋಗುವ ವಾಹನಗಳನ್ನು ಈ ಪ್ರದೇಶಗಳಲ್ಲಿ ನಿಲ್ಲಿಸದಂತೆ ತಿಳಿಸಲಾಗಿದೆ.

ಇದನ್ನೂ ಓದಿ: Nipah Virus: ಮತ್ತೆ ಹೆಚ್ಚಿದ ನಿಫಾ ವೈರಸ್​ ಭೀತಿ; ಈ ರೋಗದ ಲಕ್ಷಣಗಳೇನು?

ಕೇಂದ್ರ ಸರ್ಕಾರ ಆರೋಗ್ಯ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, “ನಾನು ಕೇರಳದ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ, ಈ ಋತುವಿನಲ್ಲಿ ಈ ವೈರಸ್ ಹಲವಾರು ಬಾರಿ ವರದಿಯಾಗಿದೆ. ಪ್ರಕರಣಗಳು ವರದಿ ಆಗಿವೆ. ಈ ವೈರಸ್ ಬಾವಲಿಗಳಿಂದ ಹರಡುತ್ತದೆ. ನಾವು ಮುನ್ನೆಚ್ಚರಿಕೆ ವಹಿಸಲು ಈ ಬಗ್ಗೆ ಆರೋಗ್ಯ ಸಚಿವಾಲಯವು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಪ್ರತಿಯೊಬ್ಬರೂ ಆರೋಗ್ಯ ಇಲಾಖೆ ಮತ್ತು ಪೊಲೀಸರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ನಿರ್ಬಂಧಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:23 pm, Wed, 13 September 23