ಅದಾನಿ ವಿಚಾರದಲ್ಲಿ ಮೇಲ್ಮನೆಯಲ್ಲಿ ಗದ್ದಲ; ರಾಜ್ಯಸಭೆಯಲ್ಲಿ ಮೋದಿಯನ್ನು ಮೌನಿ ಬಾಬಾ ಎಂದ ಮಲ್ಲಿಕಾರ್ಜುನ ಖರ್ಗೆ

ನಾನು ಸತ್ಯ ಮಾತನಾಡಿದರೆ ಅದು ದೇಶ ವಿರೋಧಿಯೇ? ನಾನು ದೇಶ ವಿರೋಧಿಯಲ್ಲ. ನಾನು ಇಲ್ಲಿ ಎಲ್ಲರಿಗಿಂತಲೂ ಹೆಚ್ಚು ದೇಶಭಕ್ತ. ನಾನು 'ಭೂಮಿಪುತ್ರ'...ನೀವು ದೇಶವನ್ನು ಲೂಟಿ ಮಾಡುತ್ತಿದ್ದೀರಿ ಎಂದ ಮಲ್ಲಿಕಾರ್ಜುನ ಖರ್ಗೆ

ಅದಾನಿ ವಿಚಾರದಲ್ಲಿ ಮೇಲ್ಮನೆಯಲ್ಲಿ ಗದ್ದಲ; ರಾಜ್ಯಸಭೆಯಲ್ಲಿ ಮೋದಿಯನ್ನು ಮೌನಿ ಬಾಬಾ ಎಂದ ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ರಶ್ಮಿ ಕಲ್ಲಕಟ್ಟ

Updated on: Feb 08, 2023 | 2:18 PM

ದೇಶದಲ್ಲಿ ದ್ವೇಷ ಹರಡುತ್ತಿರುವವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಏಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬುಧವಾರ ಪ್ರಶ್ನಿಸಿದ್ದಾರೆ. ರಾಜ್ಯಸಭೆಯಲ್ಲಿ (Rajya Sabha) ಖರ್ಗೆ ಪ್ರಧಾನಿಯವರನ್ನು ಮೌನಿ ಬಾಬಾ ಎಂದು ಹೇಳಿದಾಗ  ಸಭಾಪತಿ ಜಗದೀಪ್ ಧನ್ಖರ್ ಅವರು, ‘‘ನೀವು ತುಂಬಾ ಹಿರಿಯ ಸದಸ್ಯರು ಸರ್, ಇದು ನಿಮಗೆ ಹಿಡಿಸುವುದಿಲ್ಲ. ಈ ರೀತಿ ಪದಗಳನ್ನು ಬಳಸಬೇಡಿ ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಈ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ ಮೇಲ್ಮನೆಯಲ್ಲಿ ಗದ್ದಲವುಂಟಾಗಿದೆ.

2014ರಲ್ಲಿ ಪ್ರಧಾನಿ ಮೋದಿಯವರು ‘ನಾ ಖಾವೂಂಗಾ ನಾ ಖಾನೇ ದೂಂಗಾ’ ಎಂದು ಹೇಳಿದ್ದರು. ಕೆಲವು ಕೈಗಾರಿಕೋದ್ಯಮಿಗಳನ್ನು ತಿನ್ನಲು ಏಕೆ ಬಿಡುತ್ತಿದ್ದಾರೆ ಎಂದು ಈಗ ನಾನು ಕೇಳಬಯಸುತ್ತೇನೆ. ಪ್ರಧಾನಿ ಮೋದಿಯವರ ಆತ್ಮೀಯ ಸ್ನೇಹಿತರೊಬ್ಬರ ಸಂಪತ್ತು 2.5 ವರ್ಷಗಳಲ್ಲಿ 13 ಪಟ್ಟು ಹೆಚ್ಚಾಗಿದೆ. 2014 ರಲ್ಲಿ 2019ರಲ್ಲಿ ₹ 50,000 ಕೋಟಿಯಷ್ಟಿದ್ದರೆ ₹ 1 ಲಕ್ಷ ಕೋಟಿ ಆಯಿತು. ಎರಡು ವರ್ಷಗಳಲ್ಲಿ ಅವರ ಆಸ್ತಿ ₹ 12 ಲಕ್ಷ ಕೋಟಿ ಮುಟ್ಟಿದ್ದು ಯಾವ ಮ್ಯಾಜಿಕ್‌ ಆಗಿತ್ತೋ ಗೊತ್ತಿಲ್ಲ’ ಎಂದಿದ್ದಾರೆ ಖರ್ಗೆ.

“ನೀವು ಸಾಬೀತುಪಡಿಸಲು ಸಾಧ್ಯವಾಗದ ಆರೋಪಗಳನ್ನು ಮಾಡಬಾರದು. ಈ ಸದನವು ಮಾಹಿತಿಯಿಲ್ಲದೆ ವಾಗ್ವಾದಗಳ ವೇದಿಕೆಯಾಗಲು ನಾನು ಅನುಮತಿಸುವುದಿಲ್ಲ” ಎಂದು ಸಭಾಪತಿ ಹೇಳಿದರು.

ಖರ್ಗೆ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿದ ಬಿಜೆಪಿ

ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸಂಸದ ಪಿಯೂಷ್ ಗೋಯಲ್, ಖರ್ಗೆ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. “ಅವರು ಯಾವುದೇ ಮಾಹಿತಿ ಇಲ್ಲದ ಉದ್ದೇಶಪೂರ್ವಕ ಸಂಪತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ಅದು ಷೇರು ಮಾರುಕಟ್ಟೆ ಲೆಕ್ಕಾಚಾರವಾಗಿದೆ. ಅದರಲ್ಲಿ ಸರ್ಕಾರದ ಪಾತ್ರವಿಲ್ಲ” ಎಂದು ಗೋಯಲ್ ಹೇಳಿದ್ದಾರೆ. “ಈ ಮೌಲ್ಯಮಾಪನ ಏನು ಎಂದು ಮಾಜಿ ಹಣಕಾಸು ಸಚಿವರಿಂದ ಕಲಿಯಲಿ ಎಂದು ನಾನು ಅವರನ್ನು ಒತ್ತಾಯಿಸುತ್ತೇನೆ” ಎಂದಿದ್ದಾರೆ ಗೋಯಲ್.

ಇದನ್ನೂ ಓದಿ:ಸಂಸತ್​​ನಲ್ಲಿ ಆಕ್ಷೇಪಾರ್ಹ ಪದ ಬಳಸಿದ ಮಹುವಾ ಮೊಯಿತ್ರಾ; ನಾಲಗೆ ಮೇಲೆ ನಿಯಂತ್ರಣವಿರಲಿ ಎಂದ ಹೇಮಾ ಮಾಲಿನಿ

ದತ್ತಾಂಶ ನೀಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಹೇಳುತ್ತಿರುವುದು ತುಂಬಾ ಜಾಣತನ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. “ಆದರೆ ಇದು ಗೌರವಾನ್ವಿತ ಪ್ರಧಾನ ಮಂತ್ರಿಯ ವಿರುದ್ಧದ ಆರೋಪವಾಗಿದ್ದು ಅದನ್ನು ನಾವು ಆಕ್ಷೇಪಿಸುತ್ತಿದ್ದೇವೆ. ಅವರು ಪ್ರಧಾನಿ ವಿರುದ್ಧ ಸೂಕ್ಷ್ಮವಾಗಿ ಮತ್ತು ಬಹಿರಂಗವಾಗಿ ದೂಷಿಸುತ್ತಿದ್ದಾರೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

“31 ಪೈಸೆ ಬಾಕಿ ಇರುವ ಕಾರಣ ಗುಜರಾತ್‌ನ ಒಬ್ಬ ರೈತನಿಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನಿರಾಕರಿಸಲಾಗಿದೆ. ಆದರೆ ಕೋಟಿಗಟ್ಟಲೆ ಬಾಕಿಯನ್ನು ತೆರವುಗೊಳಿಸಲಾಗಿದೆ” ಎಂದು ಖರ್ಗೆ ಹೇಳಿದಾಗ ಅದನ್ನು ದೃಢೀಕರಿಸಬೇಕು ಎಂದು ಸಭಾಪತಿ ಹೇಳಿದ್ದಾರೆ.


ಸದನದಲ್ಲಿ ಗದ್ದಲ ಮುಂದುವರಿಯುತ್ತಿದ್ದಂತೆ ಖರ್ಗೆ, “ನೀವೀಗ ನನ್ನನ್ನು ದೇಶವಿರೋಧಿ ಎನ್ನುತ್ತಿದ್ದೀರಾ? ನಾನು ಎಲ್ಲರಿಗಿಂತಲೂ ಹೆಚ್ಚು ದೇಶಪ್ರೇಮಿ, ನಾನು ಭೂಮಿಪುತ್ರ, ನಾನು ಅಫ್ಘಾನಿಸ್ತಾನದವನಲ್ಲ. ನಾನು ಸತ್ಯ ಮಾತನಾಡಿದರೆ ಅದು ದೇಶ ವಿರೋಧಿಯೇ? ನಾನು ದೇಶ ವಿರೋಧಿಯಲ್ಲ. ನಾನು ಇಲ್ಲಿ ಎಲ್ಲರಿಗಿಂತಲೂ ಹೆಚ್ಚು ದೇಶಭಕ್ತ. ನಾನು ‘ಭೂಮಿಪುತ್ರ’…ನೀವು ದೇಶವನ್ನು ಲೂಟಿ ಮಾಡುತ್ತಿದ್ದೀರಿ. ನನ್ನನ್ನು ನೀವು ದೇಶವಿರೋಧಿ ಎಂದು ಹೇಳುತ್ತಿದ್ದೀರಿ ಎಂದು ಖರ್ಗೆ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Wed, 8 February 23

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us