ಮಗುವಿಗೆ ಜೀವ ತುಂಬಿದ ಮರುಕ್ಷಣವೇ ಪತ್ನಿಯ ಸಾವು.. ನೋವು ಸಹಿಸಲಾಗದೆ ಗಂಡ ಆತ್ಮಹತ್ಯೆ -ಅನಾಥ ಮಗು ವೆಂಟಿಲೇಟರ್‌ನಲ್ಲಿ

Hyderabad: ತೆಲಂಗಾಣದ ನಾರಾಯಣ ಪೇಟ್ ಜಿಲ್ಲೆಯ ಮಕ್ತಲ್ ನ ಉಪ್ಪರಿ ಆಂಜನೇಯ ಎಂಬುವರ ಪುತ್ರ ನವೀನ್ ಕುಮಾರ್ ತನ್ನ ಮನೆಯ ಪಕ್ಕದಲ್ಲಿಯೇ ವಾಸವಿದ್ದ ಭೀಮೇಶ್ವರಿಯನ್ನು ಪ್ರೀತಿಸುತ್ತಿದ್ದ. ಇವರ ಪ್ರೀತಿಗೆ ಯುವತಿಯ ಪೋಷಕರು ಒಪ್ಪಿರಲಿಲ್ಲ. ಒಂದು ವರ್ಷದ ಹಿಂದೆ ತನ್ನ ಮನದನ್ನೆಯನ್ನೇ ಮದುವೆಯಾಗಿದ್ದ, ಆದರೆ ಆ ನಂತರ...

ಮಗುವಿಗೆ ಜೀವ ತುಂಬಿದ ಮರುಕ್ಷಣವೇ ಪತ್ನಿಯ ಸಾವು.. ನೋವು ಸಹಿಸಲಾಗದೆ ಗಂಡ ಆತ್ಮಹತ್ಯೆ -ಅನಾಥ ಮಗು ವೆಂಟಿಲೇಟರ್‌ನಲ್ಲಿ
ಪ್ರಾತಿನಿಧಿಕ ಚಿತ್ರ
Edited By: ಸಾಧು ಶ್ರೀನಾಥ್​

Updated on: Aug 20, 2022 | 3:13 PM

ತೆಲಂಗಾಣ: ಪ್ರೀತಿ ಅಮೂಲ್ಯ. ಪ್ರೀತಿ ಎಂದರೆ ಹುಡುಗ-ಹುಡುಗಿಯ ಪ್ರೀತಿ ಮಾತ್ರವಲ್ಲ.. ಮದುವೆಯ ನಂತರ.. ಹೆಂಡತಿ-ಗಂಡನ ನಡುವಿನ ಪ್ರೇಮವೂ ಅಮೂಲ್ಯ.. ಮದುವೆಗೆ ಮುಂಚೆಯೇ ಪ್ರೀತಿ ಎಂದು ಹಲವರು ಭಾವಿಸುತ್ತಾರೆ. ಪ್ರೀತಿಯ ನಿಜವಾದ ಅರ್ಥವನ್ನು ಈ ಸಮಾಜಕ್ಕೆ ಅರ್ಥೈಸುವ ಕೆಲವರು ಇದ್ದಾರೆ. ಹೆಂಡತಿ ಸತ್ತಳು ಎಂದು ಗಂಡ.. ಗಂಡ ಸತ್ತಳು ಎಂದು ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಆಗಾಗ ನೋಡುತ್ತೇವೆ.

ಅಪ್ಪ-ಅಮ್ಮ ಎಂಬ ಚಿರ ಪ್ರೇಮಿಗಳಿಬ್ಬರೂ ಮೃತಪಟ್ಟು, ತಮ್ಮ ಮಕ್ಕಳನ್ನು ಒಂಟಿಯಾಗಿಸುವ, ಅನಾಥವಾಗಿಸುವ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ಇಂತಹದ್ದೇ ಹೃದಯ ವಿದ್ರಾವಕ ಘಟನೆಯೊಂದು ಹೈದರಾಬಾದ್ ನಲ್ಲಿಯೂ ಇದೀಗ ನಡೆದಿದೆ. ಆ ಇಬ್ಬರೂ ಪರಸ್ಪರ ತುಂಬಾ ಪ್ರೀತಿಸುತ್ತಿದ್ದರು. ಹಿರಿಯರು ಒಪ್ಪದಿದ್ದರೂ ಮದುವೆ ಮಾಡಿ ಸಂತೋಷದ ಜೀವನ ನಡೆಸುತ್ತಿದ್ದರು. ಆದರೆ ವಿಧಿ ಅವರ ಸಂತೋಷವನ್ನು ಹೆಚ್ಚು ಕಾಲ ಉಳಿಸಲಿಲ್ಲ. ಅವರ ಪ್ರೀತಿಯನ್ನು ಕಂಡು ಕಾಲನ ಕಣ್ಣೂ ಕುರುಡಾಯಿತು ಅನಿಸುತ್ತದೆ. ಅದಕ್ಕೇ ವಿಧಿ ಎಂಬ ಕಟುಕ ಮಗುವನ್ನು ಒಂಟಿಯಾಗಿ ಬಿಟ್ಟು, ಆ ಇಬ್ಬರನ್ನೂ ಮರಳಿ ಬಾರದ ಲೋಕಕ್ಕೆ ಕೊಂಡೊಯ್ದಿದೆ.

ನವೀನ್ ಕುಮಾರ್ -ಭೀಮೇಶ್ವರಿ ಪ್ರೀತಿಯನ್ನು ಯುವತಿಯ ಪೋಷಕರು ಪೋಷಿಸಿರಲಿಲ್ಲ, ಒಪ್ಪಿರಲಿಲ್ಲ. ವರ್ಷದ ಹಿಂದಷ್ಟೇ ಮದುವೆಯಾಗಿ ಹೈದರಾಬಾದ್ ನಗರಕ್ಕೆ ಬಂದಿದ್ದರು. ನಗರದ ಮೌಲಾಲಿ ಬಳಿ ವಾಸವಿದ್ದರು. ಆದರೆ ಪತಿ-ಪತ್ನಿ ಇಬ್ಬರೂ ತುಂಬಾ ಕಷ್ಟದ ಜೀವನ ನಡೆಸಬೇಕಿತ್ತು. ನವೀನ್ ಕುಮಾರ್ ಆಟೋ ಓಡಿಸಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದ.

ಎರಡು ದಿನಗಳ ಹಿಂದೆ ಗರ್ಭಿಣಿ ಪತ್ನಿ ಭೀಮೇಶ್ವರಿ ನೋವಿಂದ ಬಳಲುತ್ತಿದ್ದರು. ನೆರೆಹೊರೆಯವರ ಸಹಾಯದಿಂದ ನೇರೆಡ್ ಮೆಟ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಬಳಿಕ ಭೀಮೇಶ್ವರಿಯ ಸ್ಥಿತಿ ಗಂಭೀರವಾಗಿಯಿತು. ತಾಯಿ ಮತ್ತು ಮಗುವನ್ನು ಉತ್ತಮ ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿನ ಸ್ಥಿತಿಯೂ ಸರಿಯಿಲ್ಲದ ಕಾರಣ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ, ಇತ್ತ ಚಿಕಿತ್ಸೆ ಪಡೆಯುತ್ತಿದ್ದ ಭೀಮೇಶ್ವರಿ ಅಂದೇ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಒಂದೆಡೆ ಮಗು ಜೀವನ್ಮರಣ ಸ್ಥಿತಿಯಲ್ಲಿದ್ದರೆ, ಮತ್ತೊಂದೆಡೆ ತಾನು ಅತಿಯಾಗಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಸಾವು.. ಸರಿಯಾಗಿ ಇದೇ ವೇಳೆ.. ಮನನೊಂದ ನವೀನ್ ಕುಮಾರ್ ಸಾಯುವ ನಿರ್ಧಾರಕ್ಕೆ ಬಂದುಬಿಟ್ಟ. ರೈಲು ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪತಿ-ಪತ್ನಿಯರ ಮೃತದೇಹಗಳು ಗಾಂಧಿ ಆಸ್ಪತ್ರೆಯ ಶವಾಗಾರದಲ್ಲಿದ್ದರೆ, ಮಗು ವೆಂಟಿಲೇಟರ್‌ನಲ್ಲಿ..
ಇದೇ ತಿಂಗಳ 19ರಂದು ರಾತ್ರಿ ರೈಲು ನಿಲ್ದಾಣದ ಸಂಜೀವಯ್ಯ ಪಾರ್ಕ್ ಬಳಿಯ ರೈಲು ಹಳಿಗಳ ಮೇಲೆ ಅಪರಿಚಿತ ವ್ಯಕ್ತಿಯ ಶವ ಬಿದ್ದಿರುವ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಆಗ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ನವೀನ್ -ಭೀಮೇಶ್ವರಿ ಅಮರ ಪ್ರೀತಿ ವಿಷಯ ಬೆಳಕಿಗೆ ಬಂದಿದೆ. ಒಂದೆಡೆ ಎರಡು ದಿನಗಳ ಹಿಂದೆ ಜನಿಸಿ, ಜನ್ಮತಃ ಅನಾಥವಾದ ಮಗು, ತಾಯಿಯ ಸಾವು, ಅದ ಕಂಡು ಇಹಲೋಕ ತ್ಯಜಿಸಿದ ತಂದೆ..ಈ ಸನ್ನಿವೇಶ ಎಂತಹ ಕಲ್ಲು ಹೃದಯವನ್ನೂ ಕರಗಿಸುತ್ತದೆ.

Loading...
Unable to load recommendations.
Follow Us