ಮಮತಾ ಬ್ಯಾನರ್ಜಿ ಅಹಂಕಾರಕ್ಕೆ ಪಶ್ಚಿಮ ಬಂಗಾಳದ ಜನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ: ಅಬ್ಬಾಸ್ ಸಿದ್ದಿಕಿ

|

Updated on: Feb 28, 2021 | 8:49 PM

West Bengal Assembly Elections 2021: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಹೊರತುಪಡಿಸಿ, ತಮ್ಮ ಹಾದಿಗೆ ಅಡ್ಡಗಾಲಾಗುವ ಮತ್ತೊಂದು ಪಕ್ಷ ಇರಬಾರದೆಂದು ಈ ಪಕ್ಷಗಳು ಭಾವಿಸಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದರು.

ಮಮತಾ ಬ್ಯಾನರ್ಜಿ ಅಹಂಕಾರಕ್ಕೆ ಪಶ್ಚಿಮ ಬಂಗಾಳದ ಜನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ: ಅಬ್ಬಾಸ್ ಸಿದ್ದಿಕಿ
ಕೊಲ್ಕತ್ತಾದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಾಯಕರು.
Follow us on

ಕೊಲ್ಕತ್ತಾ: ಎಡಪಕ್ಷಗಳು, ಕಾಂಗ್ರೆಸ್ ಮತ್ತು ಇತರ ಜಾತ್ಯತೀತ ಪಕ್ಷಗಳ ಮಹಾಮೈತ್ರಿಕೂಟವು ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ವಿರುದ್ಧ ನಿಚ್ಚಳ ಗೆಲುವು ಸಾಧಿಸಲಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿಶ್ವಾಸ ವ್ಯಕ್ತಪಡಿಸಿದರು. ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಎರಡು ಪಕ್ಷಗಳ ಸ್ಪರ್ಧೆಯಷ್ಟೇ ಇರುವುದಿಲ್ಲ ಎನ್ನುವುದಕ್ಕೆ ಇಲ್ಲಿ ನೆರೆದಿರುವ ಭಾರೀ ಸಂಖ್ಯೆಯ ಜನರೇ ಸಾಕ್ಷಿ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಹೊರತುಪಡಿಸಿ, ತಮ್ಮ ಹಾದಿಗೆ ಅಡ್ಡಗಾಲಾಗುವ ಮತ್ತೊಂದು ಪಕ್ಷ ಇರಬಾರದೆಂದು ಈ ಪಕ್ಷಗಳು ಭಾವಿಸಿವೆ. ಮುಂದಿನ ದಿನಗಳಲ್ಲಿ ಕೇವಲ ಮಹಾಮೈತ್ರಿಕೂಟ ಮಾತ್ರ ಉಳಿದುಕೊಳ್ಳುತ್ತದೆ. ಬಿಜೆಪಿ-ಕಾಂಗ್ರೆಸ್​ಗಳು ಪಶ್ಚಿಮ ಬಂಗಾಳದಲ್ಲಿ ಉಳಿಯುವುದಿಲ್ಲ ಎಂದರು.

ಟಿಎಂಸಿ-ಬಿಜೆಪಿಗೆ ಸವಾಲು ಹಾಕಿದ ಅಬ್ಬಾಸ್ ಸಿದ್ದಿಕಿ
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸುತ್ತೇವೆ. ರಾಜ್ಯದ ಜನರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಹಂಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಂದು ಇಂಡಿಯನ್ ಸೆಕ್ಯುಲರ್ ಫ್ರಂಟ್​ನ (ಐಎಸ್​ಎಫ್) ಅಬ್ಬಾಸ್ ಸಿದ್ದಿಕಿ ಹೇಳಿದರು. ನಗರದ ಪರೇಡ್ ಮೈದಾನದಲ್ಲಿ ಭಾನುವಾರ ನಡೆದ ಎಡಪಕ್ಷಗಳು, ಕಾಂಗ್ರೆಸ್ ಮತ್ತು ಜಾತ್ಯತೀತ ಪಕ್ಷಗಳ ಮೈತ್ರಿಕೂಟದ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

ಈ ಬಾರಿ ಬಿಜೆಪಿ ಮತ್ತು ಅದರ ಬೇನಾಮಿ ಮಮತಾ ಬ್ಯಾನರ್ಜಿಯಿಂದ ಪಶ್ಚಿಮ ಬಂಗಾಳಕ್ಕೆ ಮುಕ್ತಿ ಸಿಗುತ್ತದೆ. ಮಮತಾ ಬ್ಯಾನರ್ಜಿ ಮತ್ತು ಅವರ ಟಿಎಂಸಿ ನಾಯಕರು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸಿದ್ದಾರೆ. ರಾಜ್ಯದಲ್ಲೀಗ ಅರಾಜಕ ಪರಿಸ್ಥಿತಿ ನೆಲೆಗೊಂಡಿದೆ ಎಂದು ಹೇಳಿದರು.

ಕಾಂಗ್ರೆಸ್ ಜೊತೆಗೆ ಐಎಸ್​ಎಫ್​ನ ಸೀಟು ಹಂಚಿಕೆ ಮಾತುಕತೆ ಇನ್ನೂ ನಡೆಯುತ್ತಿದೆ. ಕಾಂಗ್ರೆಸ್​ನೊಂದಿಗೆ ಒಪ್ಪಂದ ಅಂತಿಮಗೊಳ್ಳುವ ಮೊದಲೇ ಎಡಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಐಎಸ್​ಎಫ್ ಅಂತಿಮಗೊಳಿಸಿದೆ.

ಐಎಸ್​ಎಫ್ ನಾಯಕ ಅಬ್ಬಾಸ್ ಸಿದ್ದಿಕಿ

ಚುನಾವಣಾ ದಿನಾಂಕ ಘೋಷಣೆ
ಚುನಾವಣಾ ಆಯೋಗವು ಶುಕ್ರವಾರ ಪಶ್ಚಿಮ ಬಂಗಾಳಕ್ಕೆ ಚುನಾವಣಾ ದಿನಾಂಕಗಳನ್ನು ಘೋಷಿಸಿದೆ. ಮಾರ್ಚ್​ 27ರಿಂದ ಆರಂಭವಾಗಲಿರುವ ಚುನಾವಣೆ ಏಪ್ರಿಲ್ 29ರವರೆಗೆ ಒಟ್ಟು 8 ಹಂತಗಳಲ್ಲಿ ನಡೆಯಲಿದೆ. ಒಟ್ಟು 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 209 ಸ್ಥಾನ ಪಡೆದಿತ್ತು. ಬಿಜೆಪಿ 27, ಕಾಂಗ್ರೆಸ್ 23, ಸಿಪಿಎಂ 19 ಸ್ಥಾನ ಪಡೆದಿತ್ತು. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಜಿದ್ದಾಜಿದ್ದೆ ಹೋರಾಟ ನಡೆಯುತ್ತಿದ್ದು ಚುನಾವಣಾ ಕಣ ರಂಗೇರಿದೆ.

ಇದನ್ನೂ ಓದಿ: ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಪಶ್ಚಿಮ ಬಂಗಾಳದ ಪೊಲೀಸ್​ ಇಲಾಖೆಯಲ್ಲಿ ಮಹತ್ವದ ಬದಲಾವಣೆ

ಇದನ್ನೂ ಓದಿ: West Bengal Election Date 2021: ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ, ಮೇ 2ರಂದು ಫಲಿತಾಂಶ