Hit and Run: ಬಿಎಂಡಬ್ಲ್ಯೂ ಕಾರು ಗುದ್ದಿ ಮಹಿಳೆಯ ಸಾವಿಗೆ ಕಾರಣನಾದ ಮಿಹಿರ್ ಶಾ ಯಾರು?

ಮುಂಬೈನ ವರ್ಲಿಯಲ್ಲಿ ಶಿವಸೇನಾ ಮುಖಂಡರೊಬ್ಬರ ಮಗ ಚಲಾಯಿಸುತ್ತಿದ್ದ ಎನ್ನಲಾದ ಅತಿವೇಗದ ಬಿಎಂಡಬ್ಲ್ಯೂ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 45 ವರ್ಷದ ಮಹಿಳೆಯೊಬ್ಬರು ಮೃತಪಟ್ಟು ಆಕೆಯ ಪತಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಶಿವಸೇನಾ ನಾಯಕ ರಾಜೇಶ್​ ಶಾ ಅವರ ಪುತ್ರ ಮಿಹಿರ್ ಶಾ ನಾಪತ್ತೆಯಾಗಿದ್ದಾರೆ.

Hit and Run: ಬಿಎಂಡಬ್ಲ್ಯೂ ಕಾರು ಗುದ್ದಿ ಮಹಿಳೆಯ ಸಾವಿಗೆ ಕಾರಣನಾದ ಮಿಹಿರ್ ಶಾ ಯಾರು?
ಮಿಹಿರ್ ಶಾ

Updated on: Jul 08, 2024 | 9:27 AM

ಮುಂಬೈನ ವರ್ಲಿಯಲ್ಲಿ ಭಾನುವಾರ ಬೆಳಗ್ಗೆ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ದಂಪತಿ ಪ್ರಯಾಣಿಸುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಕಾರು ಚಾಲಕ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆರೋಪಿ ಚಾಲಕನ ಹೆಸರು ಮಿಹಿರ್ ಶಾ ಈತ ಶಿವಸೇನೆಯ ಏಕನಾಥ್ ಶಿಂಧೆ ಬಣದ ನಾಯಕ ರಾಜೇಶ್​ ಶಾ ಅವರ ಪುತ್ರ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಹಿರ್ ಶಾ ತಲೆ ತಪ್ಪಿಸಿಕೊಂಡಿದ್ದು, ತಂದೆ ರಾಜೇಶ್​ ಶಾರನ್ನು ಪೊಲೀಸರು ಬಂಧಿಸಿದ್ದಾರೆ. ಪುಣೆಯ ಪೋರ್ಷೆ ಕಾರು ಅಪಘಾತ ಸುದ್ದಿ ಮಾಸುವ ಮುನ್ನವೇ ಈ ಘಟನೆ ಬೆಳಕಿಗೆ ಬಂದಿದೆ. ಪುಣೆಯಲ್ಲಿ ವೇದಾಂತ್ ಅಗರ್ವಾಲ್ ಎಂಬಾತ ಪೋರ್ಷೆ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಬೈಕ್​ಗೆ ಗುದ್ದಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು.

ಅಪಘಾತದ ಬಗ್ಗೆ ಮಾಹಿತಿ
ಪ್ರದೀಪ್ ನಖ್ವಾ ಎಂಬುವವರು ಬೆಳಗ್ಗೆ ತಮ್ಮ ಪತ್ನಿಯೊಂದಿಗೆ ಮೀನು ಖರೀದಿಸಲು ಸ್ಕೂಟಿಯಲ್ಲಿ ತೆರಳಿದ್ದರು. ಮನೆಗೆ ಹಿಂದಿರುಗುತ್ತಿದ್ದಾಗ ಬಿಎಂಡಬ್ಲ್ಯೂ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದ್ದು ಕೂಡ ಇಬ್ಬರು ಬಾನೆಟ್​ ಮೇಲೆ ಬಿದ್ದಿದ್ದರು, ಪ್ರದೀಪ್ ಹೇಗೋ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ ಆದರೆ ಕಾವೇರಿ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಮಿಹಿರ್ ಶಾ ಕೇವಲ 10ನೇ ತರಗತಿಯವರೆಗೆ ಓದಿದ್ದು ಮುಂದೆ ವಿದ್ಯಾಭ್ಯಾಸ ಮುಂದುವರೆಸಲಿಲ್ಲ.

ಅಪಘಾತದ ಹಿಂದಿನ ರಾತ್ರಿ, ಮಿಹಿರ್ ತಡರಾತ್ರಿಯವರೆಗೂ ಜುಹುದಲ್ಲಿ ಮದ್ಯಪಾನ ಮಾಡುತ್ತಿದ್ದ. ಕುಡಿದ ಅಮಲಿನಲ್ಲಿ, ತನ್ನ ಚಾಲಕ ರಾಜೇಂದ್ರ ಸಿಂಗ್ ಬಿಜಾವತ್ ಅವರನ್ನು ಲಾಂಗ್ ಡ್ರೈವ್‌ಗೆ ಕರೆದೊಯ್ಯುವಂತೆ ಕೇಳಿದ್ದಾನೆ.

ಮತ್ತಷ್ಟು ಓದಿ: ಮೀನು ತರಲೆಂದು ಹೊರಗೆ ಹೋಗಿದ್ದ ಮಹಿಳೆಗೆ ಬಿಎಂಡಬ್ಲ್ಯೂ ಕಾರು ಡಿಕ್ಕಿ, ಸ್ಥಳದಲ್ಲೇ ಸಾವು

ಜುಹುವಿನಿಂದ ವರ್ಲಿಗೆ ಚಾಲನೆ ಮಾಡಿದ ನಂತರ,ಉಳಿದ ದೂರ ಚಾಲಕನಿಗೆ ಡ್ರೈವ್ ಮಾಡಲು ಹೇಳಿದ್ದರು. ಮುಂಜಾನೆ 5.30ರ ವೇಳೆಗೆ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದ ಬಳಿಕ ನಂಬರ್ ಪ್ಲೇಟ್​ ತೆಗೆದು ಹಾಕಿದ್ದ, ನಂತರ ಕಲಾನಗರದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದ. ಅಪಘಾತದ ಬಗ್ಗೆ ತಿಳಿಸಲು ತಂದೆಗೆ ಕರೆ ಮಾಡಿ ಬಳಿಕ ಸ್ವಿಚ್ಡ್​ ಆಫ್​ ಮಾಡಿದ್ದಾರೆ.

ಮಿಹಿರ್ ಅವರ ತಂದೆ ರಾಜೇಶ್ ಶಾ ಮತ್ತು ಅವರ ಚಾಲಕ ರಾಜೇಂದ್ರ ಸಿಂಗ್ ಬಿಜಾವತ್ ಅವರನ್ನು ಪೊಲೀಸರಿಗೆ ಸಹಕರಿಸದ ಆರೋಪದ ಹಿನ್ನೆಲೆ ನಿನ್ನೆ ಸಂಜೆ ಬಂಧಿಸಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕಾರು ಆತನ ತಂದೆ ರಾಜೇಶ್ ಶಾ ಹೆಸರಿನಲ್ಲಿ ನೋಂದಣಿಯಾಗಿದೆ.ಸದ್ಯ ನಾಲ್ಕು ಪೊಲೀಸ್ ತಂಡಗಳು ಮಿಹಿರ್‌ಗಾಗಿ ಹುಡುಕಾಟ ನಡೆಸುತ್ತಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us