
ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ನಲ್ಲಿ ಟ್ರಾಫಿಕ್ ಪೊಲೀಸರು ಜನರ ನೆರವಿನಿಂದ ರಸ್ತೆ ಗುಂಡಿಗಳನ್ನು ಮುಚ್ಚಿದರು. ಈ ಕುರಿತು ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ಅವರು ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಪೊಲೀಸರ ಈ ಪ್ರಯತ್ನವನ್ನು ಮೆಚ್ಚಿಕೊಂಡಿರುವ ಬೆಂಗಳೂರಿನ ಜನರು ಸಾರ್ವಜನಿಕರ ಸಮಸ್ಯೆಗಳಿಗೆ ಬಿಬಿಎಂಪಿ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ಬಿಬಿಎಂಪಿ ಕಾರ್ಯವೈಖರಿಯನ್ನು ಸಾಕಷ್ಟು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ‘ರಸ್ತೆಗಳ ನಿರ್ವಹಣೆ ಮತ್ತು ರಿಪೇರಿ ಕೆಲಸವನ್ನು ಬಿಬಿಎಂಪಿ ಮಾಡಬೇಕಿತ್ತು. ವಾಹನಗಳನ್ನು ಓಡಿಸುವವರ ಕಷ್ಟವನ್ನು ಹತ್ತಿರದಿಂದ ಗಮನಿಸುವ ಪೊಲೀಸರು ಇಂಥ ಮಹತ್ವದ ಕೆಲಸಕ್ಕೆ ಮುಂದೆ ಬಂದಿದ್ದಾರೆ’ ಎಂದು ರಾಜೇಶ್ ಎಂಬವರು ತಿಳಿಸಿದ್ದಾರೆ.

‘ಟ್ರಾಫಿಕ್ ಪೊಲೀಸರೇ ರಸ್ತೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದು ಹಲವರು ಸಲಹೆ ಮಾಡಿದ್ದಾರೆ. ‘ಈಗಾಗಲೇ ಜನರ ಕೊರತೆ ಎದುರಿಸುತ್ತಿರುವ ಪೊಲೀಸರು ಬಿಬಿಎಂಪಿ ಕೆಲಸವನ್ನೂ ಮಾಡಬೇಕಾಗಿ ಬಂದಿರುವುದು ವಿಷಾದದ ಸಂಗತಿ’ ಎಂದು ಜಯದೇವನ್ ಪ್ರಭಾಕರನ್ ಎಂಬವರು ವಿಷಾದಿಸಿದ್ದಾರೆ.

‘ಈ ಕೆಲಸ ನೀವೇಕೆ ಮಾಡಿದಿರಿ? ಬಿಬಿಎಂಪಿಯ ನಿಮ್ಮ ಸಹವರ್ತಿಗಳ ಗಮನ ಸೆಳೆಯಬೇಕಿತ್ತು ಅಲ್ಲವೇ? ನೀವು ಮಾಡಬೇಕಾದ ಕೆಲಸವೇ ಸಾಕಷ್ಟಿರುವಾಗ ಬೇಡದ ಉಸಾಬರಿ ಏಕೆ ಬೇಕಿತ್ತು’ ಎಂದು ವಿಎನ್ ಹೆಸರಿನ ಟ್ವಿಟರ್ ಹ್ಯಾಂಡಲ್ ಖಾರವಾಗಿ ಪ್ರಶ್ನಿಸಿದೆ. ‘ನಮಗೆ ಗೊತ್ತಿದೆ. ಸುರಕ್ಷೆಯೂ ನಮ್ಮ ಪ್ರಾಥಮಿಕ ಮತ್ತು ಮುಖ್ಯ ಜವಾಬ್ದಾರಿ’ ಎಂದು ಕುಲ್ದೀಪ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಟ್ರಾಫಿಕ್ ಪೊಲೀಸರ ರಸ್ತೆ ದುರಸ್ತಿ ಕೆಲಸ
Published On - 8:25 pm, Tue, 19 October 21