ಕೋಟೆನಾಡು ಚಿತ್ರದುರ್ಗ ಪರಾಕ್ರಮದ ಸಂಕೇತವಾಗಿದೆ. ವೀರ ಮದಕರಿ ನಾಯಕ ಪರಾಕ್ರಮಗೈದ ಮತ್ತು ಒನಕೆ ಓಬವ್ವ ದರ್ಗೆಯ ಅವತಾರ ತಾಳಿದ ಪುಣ್ಯಭೂಮಿ. ಈ ನೆಲದಲ್ಲಿ ಪಾಳೇಗಾರರ ಕಾಲದಲ್ಲಿ ನಿರ್ಮಿತ ಅನೇಕ ಐತಿಹಾಸಿಕ ಸ್ಮಾರಕ, ಜಲಮೂಲಗಳಿವೆ. ಮಳೆ ಇಲ್ಲದೆ ಜಲಮೂಲಗಳು ಬರಿದಾಗಿದ್ದವು.
ಈ ವರ್ಷದ ನಿರೀಕ್ಷೆಗೂ ಮೀರಿ ಮಳೆಯಾಗಿದ್ದರಿಂದ ಐತಿಹಾಸಿಕ ಹೊಂಡ, ಪುಷ್ಕರಣಿಗಳು ತುಂಬಿ ತುಳುಕುತ್ತಿವೆ. ಇದರಿಂದ, ಚಿತ್ರದುರ್ಗದ ಜನರು ಫುಲ್ ಖುಷ್ ಆಗಿದ್ದಾರೆ. ಅಲ್ಲದೇ ಜಲಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಆಗ್ರಹಿಸುತ್ತಿದ್ದಾರೆ.
ಕೋಟೆನಾಡು ಚಿತ್ರದುರ್ಗದಲ್ಲಿ ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ಹತ್ತಾರು ಜಲಮೂಲಗಳಿವೆ. ಕೋಟೆ ಬಳಿಯ ಸಿಹಿನೀರು ಹೊಂಡ, ಕೆಂಚಪ್ಪಮಲ್ಲಪ್ಪ ಬಾವಿ, ಸಂತೆ ಹೊಂಡ, ಚಿನ್ನಕ್ಕಿ ಹೊಂಡ, ಕೆಳಗೋಟೆಯಲ್ಲಿನ ಚನ್ನಕೇಶವ ದೇಗುಲ ಬಳಿಯ ಹೊಂಡ, ಗಣಪತಿ ದೇಗುಲ ಬಳಿಯ ಬಾವಿ ಸೇರಿ ಅನೇಕ ಜಲಮೂಲಗಳು ಈ ಸಲದ ಮಳೆಗೆ ತುಂಬು ತುಳುಕುತ್ತಿವೆ.
ಸುಮಾರು ವರ್ಷಗಳಿಂದ ಬರಗಲಾದ ಪರಿಣಾಮ ಹೊಂಡ, ಪುಷ್ಕರಣಿ, ಬಾವಿಗಳು ಬರಿದಾಗಿದ್ದವು. ಆದರೆ, ಈವರ್ಷ ಭರ್ತಿ ಮಳೆ ಸುರಿದಿದ್ದು ಗತವೈಭವ ಮರುಸೃಷ್ಠಿ ಆದಂತಾಗಿದೆ. ಕೋಟೆನಾಡಿನ ಇತಿಹಾಸ ಪ್ರಸಿದ್ಧ ಜಲಮೂಲಗಳಿಗೆ ಕೋಟೆಯಷ್ಟೇ ಇತಿಹಾಸವಿದೆ. ಹೀಗಾಗಿ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.
ಇಡೀ ನಗರದ ಜನರ ನೀರಿನ ದಾಹ ತೀರಿಸುತ್ತಿದ್ದ ಜಲಮೂಲಗಳ ಸಂರಕ್ಷಣೆ ಸರ್ಕಾರದ ಹೊಣೆಯಾಗಿದೆ. ಕೋಟೆನಾಡು ಚಿತ್ರದುರ್ಗ ನಗರದಲ್ಲಿನ ಜಲಪಾತ್ರೆಗಳು ತುಂಬಿ ತುಳುಕುತ್ತಿದ್ದು ನಗರದ ಅಂದ ಹೆಚ್ಚಿಸಿವೆ.
ನಗರದಲ್ಲಿ ತಣ್ಣನೆಯ ವಾತಾವರಣ ಸೃಷ್ಠಿಸಿವೆ. ಹೀಗಾಗಿ, ಸರ್ಕಾರ, ಜಿಲ್ಲಾಡಳಿತ ಮತ್ತು ನಗರಸಭೆ ಈ ಬಗ್ಗೆ ಗಮನಹರಿಸಿ ಜಲಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಯೋಜನೆ ರೂಪಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.