ಜುಲೈ 22ರವರೆಗೆ ಉತ್ತರ ಕನ್ನಡ ಜಿಲ್ಲೆಯ ಜನರು ಶಾಂತಿಯುತವಾಗಿ ಅವರ ಪಾಡಿಗೆ ಅವರು ಜೀವನ ಸಾಗಿಸುತ್ತಿದ್ದರು. ಆದರೆ ಅಂದಿನಿಂದ ಸುರಿದ ಅತ್ಯಂತ ವ್ಯಾಪಕ ಮಳೆ ಅವರ ಜೀವನವನ್ನು ಹೈರಾಣಾಗಿಸಿದೆ.
ಜಿಲ್ಲೆಯ ಯಲ್ಲಾಪುರ ತಾಲೂಕಿನ ನಾನಾ ಊರುಗಳಲ್ಲಿ ಬೃಹತ್ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ.. ಅದರಲ್ಲಿ ಕಾಳಿ ನದಿಯ ತಟದಲ್ಲಿರುವ ಕಳಚೆ ಗ್ರಾಮ ಸಂಪೂರ್ಣ ನಾಶವಾಗಿದೆ. ಅಡಿಕೆ, ತೆಂಗು ಬೆಳೆದು ಬದುಕು ಕಟ್ಟಿಕೊಂಡಿದ್ದ ಈ ಊರಿನ ಜನರು ಇದೀಗ ಪುನರ್ವಸತಿಗಾಗಿ ಮೊರೆ ಇಡುವಂತಾಗಿದೆ.
2021 ಜುಲೈ 22ರವರೆಗೆ ಹೀಗಿದ್ದ ಝರಿ ಈಗ ಬದಲಾದ ಸ್ವರೂಪ..
300 ಮನೆಗಳ ಸಂಪೂರ್ಣ ಗ್ರಾಮವೇ ಈಗ ಮುಂದೇನು ಎಂಬ ಪ್ರಶ್ನೆಯಡಿ ಚಿಂತೆಗೀಡಾಗಿದೆ. ಶಾಸಕ ಶಿವರಾಮ ಹೆಬ್ಬಾರ್, ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ವಿವಿಧ ಸಂಘ ಸಂಸ್ಥೆಗಳು ನೆರವು ಚಾಚಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳಚೆಗೆ ಭೇಟಿ ನೀಡಿದ್ದಾರೆ.
ಕಳಚೆ ಊರೊಂದೇ ಅಲ್ಲದೇ ಕದ್ರಾಕ್ಕೆ ತೆರಳುವ ಹೆದ್ದಾರಿಯಲ್ಲೂ ಬೃಹತ್ ಪ್ರಮಾಣದ ಕುಸಿತ ಏರ್ಪಟ್ಟಿದೆ. ಸಮೀಪದಲ್ಲೇ ಇರುವ ಕದ್ರಾ ಮತ್ತು ಕೊಡಸಳ್ಳಿ ಆಣೆಕಟ್ಟು, ಕೈಗಾ ಅಣುವಿದ್ಯುತ್ ಸ್ಥಾವರಕ್ಕೂ ಅಪಾಯದ ಮುಸ್ನೂಚನೆ ಇದು ಎಂಬ ಮಾತು ಕೇಳಿಬಂದಿದೆ.
ಚಿಕ್ಕ ಚಿಕ್ಕ ತೊರೆಗಳು ದೊಡ್ಡ ಕಂದಕಗಳಗಾಗಿ ಮಾರ್ಪಟ್ಟಿವೆ. ಒಂದೇ ಸಮನೆ ಸುರಿದ ಮಳೆ ಮತ್ತು ಭೂಮಿಯ ಮೇಲೆ ಬಿದ್ದ ಅಪಾರ ಒತ್ತಡ ಭೂಕುಸಿತಕ್ಕೆ ಕಾರಣ ಎಂದ ಮೇಲ್ನೋಟದ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಈಕುರಿತು ಉನ್ನತ ಮಟ್ಟದ ಅಧ್ಯಯನ ಆಗಬೇಕಿದೆ.
ಕುಸಿದ ಮನೆ, ತೋಟಗಳು ಬದುಕನ್ನೂ ಹೊಸಕಿಹಾಕಿವೆ. ಊರಿಗೆ ಊರೇ ಮತ್ತೊಮ್ಮೆ ಹೊಸದಾಗಿ ಹುಟ್ಟಬೇಕಿರುವ ಅನಿವಾರ್ಯತೆಯಲ್ಲಿದೆ.
ಅಲ್ಲಿ ಉರುಳಿಬಿದ್ದ ತೆಂಗಿನಮರವೇ ಸಂಕವಾಗಿತ್ತು. ಪರಿಸರ, ಕೃಷಿ ಪರಿಣಿತ ಶಿವಾನಂದ ಕಳವೆಯವರು ಕಳಚೆಯ ಭೂಕುಸಿತವಲಯದ ಪರಿಶೀಲನೆ ನಡೆಸಿದರು.
ಚಿಕ್ಕ ಝರಿಯೊಂದು ತನ್ನ ಅಕ್ಕಪಕ್ಕದ ತೋಟವನ್ನು ಕೊಚ್ಚಿಕೊಂಡು ಬೃಹತ್ ಹಳ್ಳವನ್ನೇ ಸೃಷ್ಟಿಸಿದ್ದವು.
ಕಿಲೊಮೀಟರ್ಗಟ್ಟಲೆ ರಸ್ತೆ ಸಂಪೂರ್ಣ ನಾಶವಾಗಿತ್ತು. ರಸ್ತೆಯ ಮೇಲೆ ದೊಡ್ಡದೊಡ್ಡ ಕಲ್ಲುಬಂಡೆಗಳು, ಬೃಹತ್ ಮರಗಳು ಮಣ್ಣಿನ ಪ್ರವಾಹವೇ ಬಂದು ಕುಳಿತಿತ್ತು.
ಇಂದು ಕಳಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಶಿವರಾಮ ಹೆಬ್ಬಾರ ಭೇಟಿ ನೀಡಿದ್ದಾರೆ. ಕಳಚೆ ಕಣಿವೆಯ ಕೂಗಿಗೆ ಮುಂದಿನ ದಿನಗಳಲ್ಲಿ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.
Published On - 6:03 pm, Thu, 29 July 21