
ಮ್ಯಾಂಚೆಸ್ಟರ್ ನ ಎಮಿರೇಟ್ಸ್ ಓಲ್ಡ್ ಟ್ರಾಫಾರ್ಡ್ ಕ್ರೀಡಾಂಗಣದಲ್ಲಿ ಇಂದು ಭಾರತ ಹಾಗೂ ಇಂಗ್ಲೆಂಡ್ ನಡುವೆ ಅಂತಿಮ ತೃತೀಯ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ಒಂದು ಪಂದ್ಯ ಗೆದ್ದು 1-1ರ ಸಮಬಲ ಸಾಧಿಸಿರುವ ಕಾರಣ ಇಂದಿನ ಕದನ ನಿರ್ಣಾಯಕವಾಗಲಿದೆ.

ಮೊದಲ ಪಂದ್ಯದಲ್ಲಿ ಕೇವಲ 110 ರನ್ಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ ದ್ವಿತೀಯ ಪಂದ್ಯದಲ್ಲಿ ಭಾರತವನ್ನು 146 ರನ್ಗೆ ಕಟ್ಟಿ ಹಾಕುವ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿತ್ತು. ಹೀಗಾಗಿ ತೃತೀಯ ಏಕದಿನದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಮುಖ್ಯವಾಗಿ ಕಳಪೆ ಫಾರ್ಮ್ನಿಂದ ತತ್ತರಿಸಿರುವ ವಿರಾಟ್ ಕೊಹ್ಲಿ ವಿಶ್ರಾಂತಿಯ ಮೊರೆ ಹೋಗುವ ಮುನ್ನ ಆಡಲಿರುವ ಕೊನೆಯ ಪಂದ್ಯ ಇದಾಗಿದೆ. ಹೀಗಾಗಿ ಇಂದು ಇವರ ಪ್ರದರ್ಶನ ಯಾವರೀತಿ ಇರಲಿದೆ ಎಂಬುದು ನೋಡಬೇಕಿದೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಆರಂಭಿಕ ಜೋಡಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲ ಪಂದ್ಯದಲ್ಲಿ ಮಿಂಚಿದ್ದರೆ ಎರಡನೇ ಪಂದ್ಯದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು.

ಅನುಭವಿ ವಿರಾಟ್ ಕೊಹ್ಲಿ ಕೂಡ ಬೇಗನೆ ಔಟ್ ಆಗಿದ್ದು ದುಬಾರಿಯಾಯಿತು. ಮಧ್ಯಮ ಕ್ರಮಾಂಕದಲ್ಲಿಯೂ ದೊಡ್ಡ ಜೊತೆಯಾಟ ದಾಖಲಾಗಲಿಲ್ಲ. ವಿರಾಟ್, ತಂಡಕ್ಕೆ ಗೆಲುವಿನ ಕಾಣಿಕೆ ನೀಡುವಂತಹ ಇನಿಂಗ್ಸ್ ಆಡುವಲ್ಲಿಯೂ ವಿಫಲರಾಗುತ್ತಿದ್ದಾರೆ. ಅವರು ಲಯಕ್ಕೆ ಮರಳಿದರೆ ಆತಿಥೇಯ ಬೌಲರ್ ಗಳಿಗೆ ಒತ್ತಡ ಬೀಳಬಹುದು.

ಆಲ್ರೌಂಡರ್ ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಕೂಡ ನಿತ್ತು ಆಡಲು ಕಲಿಯಬೇಕಿದ. ಭಾರತ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಬುಮ್ರಾ, ಶಮಿ ಜೋಡಿ ವಿಕೆಟ್ ತಂದುಕೊಡುತ್ತಿದ್ದಾರೆ, ಚಹಲ್ ಸ್ಪಿನ್ ಮೋಡಿಕೂಡ ಚೆನ್ನಾಗಿ ವರ್ಕೌಟ್ ಆಗುತ್ತಿದೆ. ಟೀಮ್ ಇಂಡಿಯಾದಲ್ಲಿ ಇಂದಿನ ಪಂದ್ಯಕ್ಕೆ ಬದಲಾವಣೆ ಅನುಮಾನ ಎನ್ನಲಾಗಿದೆ.