ಇಂದೋರ್ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಭಾರತ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದೆ. ತಂಡದ ಮೊತ್ತ 50 ರನ್ ದಾಟುವ ಮುನ್ನವೇ ಪ್ರಮುಖ ಆಟಗಾರರು ಪೆವಿಲಿಯನ್ ಸೇರಿಕೊಂಡಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಹಾಗೂ ಗಿಲ್ ಉತ್ತಮ ಆರಂಭ ನೀಡುವ ಸೂಚನೆಯಲ್ಲಿದ್ದರು. ಆದರೆ ಇಬ್ಬರಿಗೆ ಉತ್ತಮ ಜೊತೆಯಾಟ ನೀಡಲು ಸಾಧ್ಯವಾಗಲಿಲ್ಲ. ಅದರಲ್ಲೂ 2 ಜೀವದಾನ ಪಡೆದ ನಂತರವೂ ನಾಯಕ ರೋಹಿತ್ ಬಿಗ್ ಇನ್ನಿಂಗ್ಸ್ ಆಡಲಿಲ್ಲ.
ವಾಸ್ತವವಾಗಿ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮೊದಲ ಓವರ್ನ ಮೊದಲ ಎಸೆತದಲ್ಲಿಯೇ ಔಟಾಗಬೇಕಾಗಿತ್ತು. ಆದರೆ ಆಸೀಸ್ ಆಟಗಾರರ ನಿರ್ಲಕ್ಷ್ಯದಿಂದ ಬದುಕುಳಿದರು. ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲಿಯೇ ರೋಹಿತ್ ಕೀಪರ್ ಕೈಗೆ ಕ್ಯಾಚ್ ನೀಡಿದ್ದರು. ಆದರೆ ಆಸೀಸ್ ಆಟಗಾರರ ಮನವಿಯನ್ನು ಅಂಪೈರ್ ತಿರಸ್ಕರಿಸಿದರು. ಈ ವೇಳೆ ಆಸೀಸ್ ನಾಯಕನಿಗೆ ರಿವ್ಯೂ ತೆಗೆದುಕೊಳ್ಳುವ ಅವಕಾಶವಿದ್ದರೂ ತೆಗೆದುಕೊಳ್ಳಲಿಲ್ಲ.
ಇನ್ನು ಅದೇ ಓವರ್ನ 4ನೇ ಎಸೆತದಲ್ಲಿ ರೋಹಿತ್ ಎಲ್ಬಿಡ್ಬ್ಲೂ ಔಟಾಗಬೇಕಿತ್ತು. ಇಲ್ಲೂ ಕೂಡ ಆಸೀಸ್ ಆಟಗಾರರ ನಿರ್ಲಕ್ಷ್ಯತನದಿಂದ ರೋಹಿತ್ ಬಚಾವ್ ಆದರು.
ಸಿಕ್ಕ ಈ 2 ಜೀವದಾನವನ್ನು ಸರಿಯಾಗಿ ಬಳಸಿಕೊಳ್ಳದ ರೋಹಿತ್ ಆಸೀಸ್ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಎಸೆತದಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ಕೇವಲ 12 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
ಇನ್ನು ಈ ಸುದ್ದಿ ಬರೆಯುವ ವೇಳೆಗೆ ಟೀಂ ಇಂಡಿಯಾ ಪ್ರಮುಖ 5 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿದೆ.
Published On - 10:46 am, Wed, 1 March 23