ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final) ಪಂದ್ಯ ಮುಕ್ತಾಯಗೊಂಡಿದೆ. ಗುರಿ ಬೆನ್ನಟ್ಟಲು ಸಾಧ್ಯವಾಗದೆ, ದ್ವಿತೀಯ ಇನ್ನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ನಿಂದ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ.
ಎರಡನೇ ಆವೃತ್ತಿಯ ಡಬ್ಲ್ಯೂಟಿಸಿ ಪ್ರಶಸ್ತಿಯನ್ನು ಕಾಂಗರೂ ಪಡೆ ಎತ್ತಿ ಹಿಡಿದಿದೆ. ಇದರಿಂದ ಭಾರತದ 10 ವರ್ಷಗಳ ಐಸಿಸಿ ಕಪ್ ಬರ ಮುಂದುವರೆದಿದೆ. ಅಂತಿಮ ಐದನೇ ದಿನ ಭಾರತದ ಗೆಲುವಿಗೆ 280 ರನ್ ಬೇಕಾಗಿತ್ತು. ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಬೇಕಿತ್ತು. ಇದರಲ್ಲಿ ಆಸೀಸ್ ಯಶಸ್ಸು ಸಾಧಿಸಿ ಮೊದಲ ಸೆಷನ್ನಲ್ಲೇ ಗೆದ್ದುಕೊಂಡಿತು.
ಟೀಮ್ ಇಂಡಿಯಾ ಈಗ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಇದು ಮುಂದುವರೆಯಿತು. ಕೆಲ ಹಿರಿಯ ಆಟಗಾರರನ್ನು ಈ ಸರಣಿಯಿಂದ ಕೈಬಿಡಲಾಗಿತ್ತು. ಇದೀಗ ಟೆಸ್ಟ್ ಚಾಂಪಿಯನ್ಶಿಪ್ ಮುಕ್ತಾಯಗೊಂಡಿದ್ದು ಭಾರತದ ಈ ಪ್ಲೇಯರ್ಸ್ ನಿವೃತ್ತಿ ನೀಡುವ ಸಾಧ್ಯತೆ ಇದೆ.
ವೃದ್ದಿಮಾನ್ ಸಾಹ: ಎಂಎಸ್ ಧೋನಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಆದ ಬಳಿಕ ವೃದ್ದಿಮಾನ್ ಸಾಹ ಮುಖ್ಯ ವಿಕೆಟ್ ಕೀಪರ್ ಆಗಿದ್ದರು. ಆದರೆ, ರಿಷಭ್ ಪಂತ್ ತಂಡ ಸೇರಿಕೊಂಡ ಬಳಿಕ ಇವರ ಸ್ಥಾನಕ್ಕೆ ಕುತ್ತುಬಂತು. ಈಗಂತು ಕೆಎಸ್ ಭರತ್, ಇಶಾನ್ ಕಿಶನ್ ಕೂಡ ಇದ್ದಾರೆ. ಹೀಗಾಗಿ ಸಾಹ ನಿವೃತ್ತಿ ನೀಡುವುದು ಬಹುತೇಕ ಖಚಿತ.
ಇಶಾಂತ್ ಶರ್ಮಾ: ಟೀಮ್ ಇಂಡಿಯಾ ಮಾರಕ ವೇಗಿಗಳಿಂದ ತುಂಬಿ ಹೋಗಿದೆ. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಜಯದೇವ್ ಉನಾದ್ಕಟ್ ಹೀಗೆ ಇನ್ನೂ ಕೆಲ ಯುವ ವೇಗಿಗಳು ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಇವರ ನಡುವೆ ಇಶಾಂತ್ ತಂಡಕ್ಕೆ ಕಮ್ಬ್ಯಾಕ್ ಮಾಡುವುದು ಅನುಮಾನ. ಹೀಗಾಗಿ ಇವರು ಸದ್ಯದಲ್ಲೇ ವಿದಾಯ ಹೇಳುವ ಸಾಧ್ಯತೆ ಇದೆ.
ಮಯಾಂಕ್ ಅಗರ್ವಾಲ್: 2022 ಮಾರ್ಚ್ ಬಳಿಕ ಅಗರ್ವಾಲ್ ಅವರನ್ನು ಯಾವುದೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿಲ್ಲ. ಓಪನರ್ ಸ್ಥಾನಕ್ಕೆ ಟೀಮ್ ಇಂಡಿಯಾದಲ್ಲಿ ಶುಭ್ಮನ್ ಗಿಲ್, ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಹೀಗೆ ಸಾಕಷ್ಟು ಆಯ್ಕೆಗಳಿವೆ. ಮುಂದಿನ ದಿನಗಳಲ್ಲಿ ಮಯಾಂಕ್ಗೆ ಸ್ಥಾನ ಸಿಗುವುದು ಅನುಮಾನ.
ಉಮೇಶ್ ಯಾದವ್: ಟೀಮ್ ಇಂಡಿಯಾದ ಮತ್ತೋರ್ವ ವೇಗಿ ಉಮೇಶ್ ಯಾದವ್ ಟೆಸ್ಟ್ ವೃತ್ತಿ ಜೀವನ ಕೂಡ ತೂಗುಯ್ಯಾಲೆಯಲ್ಲಿದೆ. ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಇವರು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಹೀಗಾಗಿ ಮುಂದೆ ಆಯ್ಕೆ ಆಗುವುದು ಅನುಮಾನ.