ಭಾರತ ಕ್ರಿಕೆಟ್ ತಂಡ ತನ್ನ ಮುಂದಿನ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಕೆರಿಬಿಯನ್ ನಾಡಿಗೆ ಟೀಮ್ ಇಂಡಿಯಾ ಪ್ರವಾಸ ಬೆಳೆಸಲಿದ್ದು, ಅಲ್ಲಿ ಎರಡು ಪಂದ್ಯಗಳ ಟೆಸ್ಟ್, ಮೂರು ಪಂದ್ಯಗಳ ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿ ಆಡಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟ ಮಾಡಲಿದೆ. ಇದರ ಮೂಲಕ ಮುಂದಿನ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಶುರುವಾಗಲಿದೆ.
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಎರಡನೇ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಮುಂದಿನ ಆವೃತ್ತಿಗಾಗಿ ಬಲಿಷ್ಠ ತಂಡವನ್ನು ಕಟ್ಟಬೇಕಿದೆ. ಇದಕ್ಕಾಗಿ ಬಿಸಿಸಿಐ ಹೊಸ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.
ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಮೂರು ಹೊಸ ಬ್ಯಾಟರ್ ಮತ್ತು ಮೂರು ಹೊಸ ಬೌಲರ್ ಕರೆತರಲು ಬಿಸಿಸಿಐ ಪ್ಲಾನ್ ಮಾಡಿದಂತಿದೆ. ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಹೆಚ್ಚು ಸಮಯ ಟೆಸ್ಟ್ ಆಡುವುದು ಅನುಮಾನ. ರೋಹಿತ್ ಶರ್ಮಾ ಫಾರ್ಮ್ನಲ್ಲಿಲ್ಲ.
ಅತ್ತ ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಇಂಜುರಿಯಲ್ಲಿದ್ದಾರೆ. ಹೀಗಾಗಿ ಬಿಸಿಸಿಐ ವೆಸ್ಟ್ ಇಂಡೀಸ್ ಸರಣಿಗೆ ಯುವ ಆಟಗಾರರಾದ ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಹಾಗೂ ರಜತ್ ಪಟಿದಾರ್ ಆಯ್ಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತದ ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ಬೇಕಾಗಿದೆ. ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಸದ್ಯದಲ್ಲಿ ಟೆಸ್ಟ್ಗೆ ನಿವೃತ್ತಿ ನೀಡುವ ಸಾಧ್ಯತೆ ಇದೆ. ಜಸ್ಪ್ರಿತ್ ಬುಮ್ರಾ ಹಾಗೂ ಪ್ರಸಿದ್ಧ್ ಕೃಷ್ಟ ಇಂಜುರಿಯಲ್ಲಿದ್ದಾರೆ. ಹೀಗಾಗಿ ಮಾರಕ ವೇಗಿಗಳ ಅವಶ್ಯಕತೆ ಭಾರತಕ್ಕಿದೆ.