
ಏಷ್ಯಾಕಪ್ 2023 ರಲ್ಲಿ ಭಾರತದ ಅಭಿಯಾನ ಸರಿಯಾಗಿ ಆರಂಭವಾಗಿಲ್ಲ. ಶನಿವಾರ ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಇಂಡಿಯಾ- ಪಾಕಿಸ್ತಾನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಟೀಮ್ ಇಂಡಿಯಾದ ಬ್ಯಾಟಿಂಗ್ ಇನ್ನಿಂಗ್ಸ್ಗೆ ಪಂದ್ಯ ಅಂತ್ಯಗೊಂಡಿತು. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದೆ.

ಇದೀಗ ಭಾರತಕ್ಕೆ ಮುಂದಿನ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಗುಂಪು ಹಂತದಲ್ಲಿ ಕೊನೆಯ ಪಂದ್ಯ ಆಡಲಿರುವ ಟೀಮ್ ಇಂಡಿಯಾ ಸೂಪರ್ 4 ಹಂತಕ್ಕೆ ಏರಬೇಕಾದರೆ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಹಾಗಾದರೆ ರೋಹಿತ್ ಪಡೆಯ ಮುಂದಿನ ಯಾವಾಗ?, ಯಾರ ವಿರುದ್ಧ? ಎಂಬುದನ್ನು ನೋಡೋಣ.

ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ನೇಪಾಳ ವಿರುದ್ಧ ಆಡಲಿದೆ. ಈ ಮ್ಯಾಚ್ ಸೆಪ್ಟೆಂಬರ್ 4 ಸೋಮವಾರದಂದು ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಭಾರತ ಹಾಗೂ ಪಾಕಿಸ್ತಾನ ಪಂದ್ಯ ಮಳೆಯಿಂದ ರದ್ದಾಯಿತು. ಅದೇರೀತಿ ಸೆಪ್ಟೆಂಬರ್ 4 ರಂದು ನಡೆಯುವ ಭಾರತ ಮತ್ತು ನೇಪಾಳ ನಡುವಿನ ಪಂದ್ಯಕ್ಕೂ ವರುಣನ ಕಾಟ ಇರಲಿದೆ ಎಂದು ಹೇಳಲಾಗಿದೆ. ಪಂದ್ಯ ನಡೆಯುವ ಸಂದರ್ಭ ಶೇ. 76 ರಷ್ಟು ಮಳೆಯಾಗುವ ಸಾಧ್ಯತೆ ಇದೆಯಂತೆ.

ಹಾಗೊಂದು ವೇಳೆ ಭಾರತ ಹಾಗೂ ನೇಪಾಳ ನಡುವಣ ಪಂದ್ಯ ಕೂಡ ಮಳೆಯಿಂದ ರದ್ದಾದರೆ ಮತ್ತೆ ಒಂದೊಂದು ಅಂಕ ನೀಡಲಾಗುತ್ತಿದೆ. ಆದ ಭಾರತ ಒಟ್ಟು 2 ಪಾಯಿಂಟ್ನೊಂದಿಗೆ ಸೂಪರ್ 4 ಹಂತಕ್ಕೆ ತೇರ್ಗಡೆ ಆಗುತ್ತದೆ. ಒಂದುವೇಳೆ ಟೀಮ್ ಇಂಡಿಯಾ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಮುಂದಿನ ಮ್ಯಾಚ್ನಲ್ಲಿ ರೋಹಿತ್ ಪಡೆ ಗೆಲ್ಲಬೇಕು ಅಥವಾ ಪಂದ್ಯ ರದ್ದಾಗಬೇಕು.

ಪಾಕ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ಅಗ್ರ 4 ಬ್ಯಾಟರ್ಗಳು ಬಂದ ಬೆನ್ನಲ್ಲೇ ಪೆವಿಲಿಯನ್ ಹಾದಿ ಹಿಡಿದರು. ನಾಯಕ ರೋಹಿತ್ ಶರ್ಮಾ 11, ಗಿಲ್ 10, ವಿರಾಟ್ ಕೊಹ್ಲಿ 4 ಹಾಗೂ ಶ್ರೇಯಸ್ ಅಯ್ಯರ್ 14 ರನ್ಗೆ ಬ್ಯಾಟ್ ಕೆಳಗಿಟ್ಟರು.

ಆದರೆ, ಐದನೇ ವಿಕೆಟ್ಗೆ ಜೊತೆಯಾದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಬೊಂಬಾಟ್ ಜೊತೆಯಾಟ ಆಡಿದರು. 66 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭ ಒಂದಾದ ಇವರಿಬ್ಬರು ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು. ಒಟ್ಟು 138 ರನ್ಗಳ ಕಾಣಿಕೆ ನೀಡಿದರು. ಕಿಶನ್ 81 ಎಸೆತಗಳಲ್ಲಿ 9 ಫೋರ್ 2 ಸಿಕ್ಸರ್ನೊಂದಿಗೆ 82 ರನ್ ಸಿಡಿಸಿದರು.

ಹಾರ್ದಿಕ್ 90 ಎಸೆತಗಳಲ್ಲಿ 7 ಫೋರ್, 1 ಸಿಕ್ಸರ್ ಬಾರಿಸಿ 87 ರನ್ಗೆ ಔಟಾದರು. ಇವರಿಬ್ಬರ ನಿರ್ಗಮನದ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. ಜಡೇಜಾ 14, ಥಾಕೂರ್ 3, ಕುಲ್ದೀಪ್ 4, ಬುಮ್ರಾ 16 ರನ್ ಗಳಿಸಿದರು. ಭಾರತ 48.5 ಓವರ್ಗಳಲ್ಲಿ 266 ರನ್ಗಳಿಗೆ ಆಲೌಟ್ ಆಯಿತು. ಪಾಕ್ ಪರ ಅಫ್ರಿದಿ 4, ನಸೀಂ ಹಾಗೂ ರೌಫ್ ತಲಾ 3 ವಿಕೆಟ್ ಪಡೆದರು.