ಟ್ರಿನಿಡಾಡ್ ನ ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲೂ ಭಾರತ ರೋಚಕ ಗೆಲುವು ಕಂಡಿದೆ. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಕಾದಾಟದಲ್ಲಿ ಟೀಮ್ ಇಂಡಿಯಾ 2 ವಿಕೆಟ್ ಗಳಿಂದ ಗೆದ್ದು 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಅಕ್ಷರ್ ಪಟೇಲ್ ವಿಂಡೀಸ್ ಲೆಕ್ಕಚಾರವನ್ನು ತಲೆಕೆಳಗಾಗಿಸಿದರು. ಕ್ರೀಸ್ಗೆ ಬಂದಾಗಿನಿಂದ ಸ್ಫೋಟಕ ಆಟವಾಡಿದ ಇವರು ಕೇವಲ 35 ಎಸೆತಗಳಲ್ಲಿ 3 ಫೋರ್ ಹಾಗೂ ಬರೋಬ್ಬರಿ 5 ಸಿಕ್ಸರ್ ಸಿಡಿಸಿ ಅಜೇಯ 64 ರನ್ ಚಚ್ಚಿದರು.
100 ರನ್ ಗೂ ಮೊದಲೇ 3 ವಿಕೆಟ್ ಕಳೆದುಕೊಂಡಾಗ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಎಚ್ಚರಿಕೆಯ ಆಟವಾಡಿ ತಂಡಕ್ಕೆ ಆಸರೆಯಾದರು. ವಿಕೆಟ್ ಕಳೆದುಕೊಳ್ಳದಂತೆ ರನ್ ಕಲೆಹಾಕುತ್ತಾ ಸಾಗಿದ ಈ ಜೋಡಿ 99 ರನ್ ಗಳ ಕಾಣಿಕೆ ನೀಡಿದರು. ಇಬ್ಬರೂ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.
71 ಎಸೆತಗಳಲ್ಲಿ 4 ಫೋರ್, 1 ಸಿಕ್ಸರ್ ನೊಂದಿಗೆ ಅಯ್ಯರ್ 63 ರನ್ ಗೆ ಔಟಾದರೆ, ಸಂಜು 51 ಎಸೆತಗಳಲ್ಲಿ ತಲಾ 3 ಫೋರ್ ಸಿಕ್ಸರ್ ಬಾರಿಸಿ 54 ರನ್ ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಶಾಯ್ ಹೋಪ್ 115 ರನ್ಗಳ ಅಮೂಲ್ಯ ಕೊಡುಗೆ ನೀಡಿದರು. 74 ರನ್ ಗಳಿಸಿದ ನಾಯಕ ನಿಕೊಲಸ್ ಪೂರನ್ ತಂಡದ ಉತ್ತಮ ಮೊತ್ತಕ್ಕೆ ಅಡಿಪಾಯ ಹಾಕಿದರು.
ಆಲ್ರೌಂಡರ್ ಅಕ್ಷರ್ ಪಟೇಲ್ ಅವರ ಸ್ಫೋಟಕ ಆಟ ಒಂದು ಕಡೆಯಾದರೆ, ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಅರ್ಧಶತಕ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿತು. ಟಾರ್ಗೆಟ್ 300ರ ಗಡಿ ದಾಟಿದ್ದರೂ ಭಾರತ ಇನ್ನೆರಡು ಎಸೆತ ಬಾಕಿ ಇರುವಂತೆ ಗೆದ್ದು ಬೀಗಿದೆ.