ಇಂದು ಭಾರತೀಯ ಕ್ರಿಕೆಟ್ ನಲ್ಲಿ ಅತ್ಯಂತ ಫಿಟ್ ಮತ್ತು ಸ್ಟೈಲಿಶ್ ಆಟಗಾರರಲ್ಲಿ ಒಬ್ಬರಾದ ಕನ್ನಡಿಗ ಮನೀಶ್ ಪಾಂಡೆ ಅವರ ಹುಟ್ಟುಹಬ್ಬ. 33ನೇ ವರ್ಷಕ್ಕೆ ಕಾಲಿಟ್ಟಿರುವ ಪಾಂಡೆಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
19ನೇ ವಯಸ್ಸಿನಲ್ಲಿ ವಿಶ್ವಕಪ್ ಗೆದ್ದ ನಂತರ, ಐಪಿಎಲ್ ನಲ್ಲಿ ಶತಕ ಗಳಿಸಿದ ಮನೀಶ್ ಈಗ ಭಾರತ ತಂಡದಿಂದ ದೂರವಾಗಿದ್ದಾರೆ ಎಂಬುದು ಬೇಸರದ ಸಂಗತಿ. ಯಾವುದೇ ಪ್ರಮುಖ ಟೂರ್ನಿಯಲ್ಲಿ ಸ್ಥಾನ ಪಡೆಯದ ಮನೀಶ್ ಸದ್ಯ ದೇಶೀಯ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹಾಗೂ ಕ್ರಿಕೆಟ್ ಲೋಕದ ಅದ್ಭುತ ಫೀಲ್ಡರ್ ಆಗಿರುವ ಪಾಂಡೆ ಕರ್ನಾಟಕ ರಣಜಿ ತಂಡದ ನಾಯಕನಾಗಿಯೂ ಗಮನ ಸೆಳೆದಿದ್ದಾರೆ.
ಮನೀಶ್ ಅವರು ಮೂಲತಃ ಉತ್ತರಾಖಂಡದ ನೈನಿತಾಲ್ ನವರು. ಪಾಂಡೆ ಅವರ ತಂದೆ ಸೇನಾ ಅಧಿಕಾರಿಯಾಗಿದ್ದು, ಅವರಿಗೆ ಬೆಂಗಳೂರಿಗೆ ವರ್ಗಾವಣೆ ಆದ ಬಳಿಕ ಮನೀಶ್ ಕೂಡ ಕರ್ನಾಟಕಕ್ಕೆ ಬಂದರು. ಬಳಿಕ ರಾಜಸ್ಥಾನಕ್ಕೆ ವರ್ಗಾವಣೆ ಆಯಿತಾದರೂ ಪಾಂಡೆ ಬೆಂಗಳೂರಿನಲ್ಲೇ ಉಳಿದಿದ್ದರು.
ಬೆಂಗಳೂರು ಹಾಗೂ ಮೈಸೂರಿನಲ್ಲಿ ಸತತ ಕ್ರಿಕೆಟ್ ಅಭ್ಯಾಸ ನಡೆಸಿ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾದರು. ಜೊತೆಗೆ ಕರ್ನಾಟಕ ರಣಜಿ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ ಗೂ ಪದಾರ್ಪಣೆ ಮಾಡಿದರು.
ಮನೀಶ್ ಪಾಂಡೆ 2015 ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನಕ್ಕೆ ಪಾದಾರ್ಪಣೆ ಮಾಡಿದರು. ಅವರು ಆರಂಭಿಕ ಪಂದ್ಯದಲ್ಲಿ ಕೇದಾರ್ ಜಾಧವ್ ಜೊತೆ 144 ರನ್ ಗಳ ಜೊತೆಯಾಟವನ್ನು ಹಂಚಿಕೊಂಡರು. ಅದೇ ಪ್ರವಾಸದಲ್ಲಿ ಅವರನ್ನು ಟಿ20 ತಂಡದಲ್ಲಿ ಸೇರಿಸಲಾಯಿತು. 2016 ಆಸ್ಟ್ರೇಲಿಯಾ ಪ್ರವಾಸದಲ್ಲಿ, ಅವರು ಸಿಡ್ನಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ 104 ರನ್ ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು.
ಪಾಂಡೆ ಹಲವು ಬಾರಿ ಸರಣಿಗೆ ಆಯ್ಕೆಯಾಗಿದ್ದರೂ ಬೆಂಚ್ ಕಾಯ್ದಿರುವುದೇ ಜಾಸ್ತಿ. ಆಡುವ 11ರ ಬಳಗದಲ್ಲಿ ಪಾಂಡೆಗೆ ಅವಕಾಶ ಸಿಕ್ಕಿರುವುದು ತೀರಾ ಅಪರೂಪ.
2019ರ ಡಿ. 2ರಂದು ಮನೀಶ್ ಪಾಂಡೆ ದಕ್ಷಿಣ ಭಾರತದ ಖ್ಯಾತ ನಟಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪಾಂಡೆ ಇದುವರೆಗೆ 29 ಏಕದಿನ ಹಾಗೂ 39 ಟಿ-20 ಕ್ರಿಕೆಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.