
ಕಳೆದ ಐಪಿಎಲ್ನಲ್ಲಿ ಅಂದರೆ 2024 ರ ಐಪಿಎಲ್ನಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡದ ಪರ ಚೊಚ್ಚಲ ಐಪಿಎಲ್ ಪ್ರವೇಶ ಮಾಡಿ ತನ್ನ ವೇಗದಿಂದಲೇ ರಾತ್ರೋ ರಾತ್ರಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ಮಯಾಂಕ್ ಯಾದವ್ರನ್ನು ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಬೌಲರ್ ಎನ್ನಲಾಗುತ್ತಿದೆ. ಆದರೆ ಐಪಿಎಲ್ ವೇಳೆ ಇಂಜುರಿಗೊಳಗಾದ ಮಯಾಂಕ್ ಅರ್ಧದಿಂದಲೇ ಐಪಿಎಲ್ ತೊರೆಯಬೇಕಾಯಿತು.

ಇನ್ನು ಬೆಂಗಳೂರಿನಲ್ಲಿರುವ ಎನ್ಸಿಎನಲ್ಲಿ ರಿಹ್ಯಾಬ್ನಲ್ಲಿರುವ ಮಯಾಂಕ್, ಚೇತರಿಕೆಯ ಹಾದಿಯಲ್ಲಿದ್ದಾರೆ. ಆದರೆ ಅವರಿನ್ನ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಆದಾಗ್ಯೂ ಅವರು ಭಾರತ ತಂಡದಲ್ಲಿ ಯಾವಾಗ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ.

ಆದರೆ, ಈ ಬಗ್ಗೆ ಇದೀಗ ಅಚ್ಚರಿಯ ಹೇಳಿಕೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಯಾಂಕ್ ಯಾದವ್ರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಖಾತರಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತಾ ಈ ಬಗ್ಗೆ ಹೇಳಿಕೆ ನೀಡಿದ ಜಯ್ ಶಾ, ಮಯಾಂಕ್ ಯಾದವ್ ಬಗ್ಗೆ ನಾನು ನಿಮಗೆ ಯಾವುದೇ ಉತ್ತರವನ್ನು ನೀಡಲು ಸಾಧ್ಯವಿಲ್ಲ. ಯಾಕೆಂದರೆ ಅವರು ತಂಡದಲ್ಲಿ ಇರುತ್ತಾರೋ ಇಲ್ಲವೋ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಆದರೆ ಅವರು ಉತ್ತಮ ವೇಗದ ಬೌಲರ್. ಅವರು ಪ್ರಸ್ತುತ ಎನ್ಸಿಎಯಲ್ಲಿದ್ದು, ನಾವು ಅವರ ಮೇಲೆ ಕಣ್ಣಿಟ್ಟಿದ್ದೇವೆ ಎಂದಿದ್ದಾರೆ.

ವಾಸ್ತವವಾಗಿ ಕಳೆದ ಐಪಿಎಲ್ನಲ್ಲಿ ಮಯಾಂಕ್ ಯಾದವ್ ಅವರ ವೇಗದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ನಾಲ್ಕು ಪಂದ್ಯಗಳಲ್ಲಿ ಏಳು ವಿಕೆಟ್ ಪಡೆದಿದ್ದ ಅವರು ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಐಪಿಎಲ್ 2024 ರಲ್ಲಿ, ಮಯಾಂಕ್ ಯಾದವ್ ಸತತವಾಗಿ ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಅಲ್ಲದೆ ಅನೇಕ ಬಾರಿ ಅವರು ಗಂಟೆಗೆ 156.7 ಕಿಲೋಮೀಟರ್ ವೇಗದಲ್ಲೂ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.

ಕಳೆದ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ಮಯಾಂಕ್ ಗಾಯದ ಕಾರಣ ಕೇವಲ ನಾಲ್ಕು ಪಂದ್ಯಗಳನ್ನು ಆಡಿದ ನಂತರ ಪಂದ್ಯಾವಳಿಯಿಂದ ಹೊರಗುಳಿಯಬೇಕಾಯಿತು. ಮಯಾಂಕ್ ಅವರನ್ನು 2022 ರ ಹರಾಜಿನಲ್ಲಿ 20 ಲಕ್ಷ ರೂ ಮೂಲ ಬೆಲೆಗೆ ಲಕ್ನೋ ಖರೀದಿಸಿತ್ತು. ಆದರೆ ನಂತರ ಗಾಯದ ಕಾರಣ, ಅವರ ಬದಲಿಗೆ ಅರ್ಪಿತ್ ಗುಲೇರಿಯಾ ಅವರನ್ನು ತಂಡಕ್ಕೆ ಬದಲಿಯಾಗಿ ಆಯ್ಕೆ ಮಾಡಲಾಯಿತು.

ಮಯಾಂಕ್ ಯಾದವ್ ತಮ್ಮ ಟಿ20 ವೃತ್ತಿಜೀವನದಲ್ಲಿ 14 ಪಂದ್ಯಗಳನ್ನಾಡಿದ್ದು, ಇದರಲ್ಲಿ 19 ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗೆಯೇ ಲಿಸ್ಟ್ A ವೃತ್ತಿಜೀವನದಲ್ಲಿ 17 ಪಂದ್ಯಗಳನ್ನಾಡಿರುವ ಮಯಾಂಕ್ 34 ವಿಕೆಟ್ಗಳನ್ನು ಪಡೆದಿದ್ದಾರೆ. ಮಯಾಂಕ್ ದೇಶೀಯ ಸರ್ಕ್ಯೂಟ್ನಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ.