
ಜೂನ್ 1 ರಿಂದ ನಡೆಯಲ್ಲಿರುವ ಟಿ20 ವಿಶ್ವಕಪ್ಗೆ ಕೆಲವೇ ದಿನಗಳಲ್ಲಿ ಎಲ್ಲಾ ತಂಡಗಳು ಪ್ರಕಟಗೊಳ್ಳಲಿವೆ. ಬಿಸಿಸಿಐ ಕೂಡ ಇನ್ನಷ್ಟೇ ಟೀಂ ಇಂಡಿಯಾವನ್ನು ಪ್ರಕಟಿಸಿಬೇಕಾಗಿದೆ. ಇದಕ್ಕಾಗಿ ಆಯ್ಕೆ ಮಂಡಳಿ ಕೂಡ ನಾಯಕ ರೋಹಿತ್ ಶರ್ಮಾ ಜೊತೆಗೆ ಇಷ್ಟರಲ್ಲೇ ಸಭೆ ನಡೆಸಲಿದೆ.

ಈ ಸಭೆಯಲ್ಲಿ ಭಾರತ ಟಿ20 ವಿಶ್ವಕಪ್ ತಂಡದ ಬಗ್ಗೆ ಚರ್ಚೆ ನಡೆಯಲ್ಲಿದ್ದು, ತಂಡವನ್ನು ಅಂತಿಮಗೊಳಿಸಲಿದೆ. ಇದಲ್ಲದೆ ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಈ ಸಭೆಯಲ್ಲಿ ತಂಡದ ಉಪನಾಯಕತ್ವದ ಬದಲಾವಣೆಯ ಬಗ್ಗೆಯೂ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಕ್ರಿಕ್ಬಜ್ ವರದಿ ಪ್ರಕಾರ, ಟಿ20 ವಿಶ್ವಕಪ್ಗೆ ನಡೆಯಲಿರುವ ತಂಡದ ಆಯ್ಕೆ ಸಭೆಯಲ್ಲಿ ಉಪನಾಯಕತ್ವದ ಬದಲಾವಣೆಯ ಬಗ್ಗೆಯೂ ಚರ್ಚಿಸಬಹುದು. ಸದ್ಯ ಈ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ನಿಭಾಯಿಸುತ್ತಿದ್ದಾರೆ. ಆದರೆ ಸಭೆಯಲ್ಲಿ ಭಾರತ ತಂಡದ ಉಪನಾಯಕನಾಗಿ ರಿಷಬ್ ಪಂತ್ ಅವರನ್ನು ಮರು ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸಬಹುದು.

ರಿಷಬ್ ಪಂತ್ ಈ ಹಿಂದೆಯೂ ಸಹ ಟೀಂ ಇಂಡಿಯಾದ ಉಪನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಕಾರು ಅಪಘಾತಕ್ಕೀಡಾಗಿ ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ಪಂತ್ರನ್ನು ಆ ಸ್ಥಾನದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಗೆ ಈ ಜವಬ್ದಾರಿ ನೀಡಲಾಯಿತು. ಅಲ್ಲದೆ ಅಪಘಾತಕ್ಕೀಡಾದ ಬಳಿಕ ಇಲ್ಲಿಯವರೆಗೆ ಪಂತ್ ಟೀಂ ಇಂಡಿಯಾ ಪರ ಆಡಿಲ್ಲ.

ರಿಷಬ್ ಪಂತ್ ಪ್ರಸ್ತುತ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಈ ಸೀಸನ್ನಲ್ಲಿ ಅವರ ಪ್ರದರ್ಶನವು ಅತ್ಯುತ್ತಮವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಭಾರತದ ಮೊದಲ ಆಯ್ಕೆಯ ವಿಕೆಟ್ಕೀಪರ್ ಆಗಲಿದ್ದಾರೆ.

ಅದೇ ವೇಳೆ ನಾಯಕನಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇದಲ್ಲದೆ ಪಂತ್, ಒಮ್ಮೆ ಭಾರತ ತಂಡದ ನಾಯಕತ್ವವನ್ನೂ ನಿರ್ವಹಿಸಿದ್ದಾರೆ. ಜೂನ್ 2022 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಪಂತ್ ಭಾರತ ತಂಡದ ನಾಯಕತ್ವ ವಹಿಸಿದ್ದರು.

ಇತ್ತ ಹಾರ್ದಿಕ್ ಪಾಂಡ್ಯ ಐಪಿಎಲ್ನಲ್ಲಿ ಕಮಾಲ್ ಮಾಡುವಲ್ಲಿ ವಿಫಲರಾಗಿದ್ದಾರೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ ಕೇವಲ 197 ರನ್ ಬಾರಿಸಿದ್ದು, ಕೇವಲ 4 ವಿಕೆಟ್ಗಳನ್ನು ಪಡೆದಿದ್ದಾರೆ. ಅಲ್ಲದೆ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 9 ಪಂದ್ಯಗಳಲ್ಲಿ 6 ರಲ್ಲಿ ಸೋತಿದೆ. ಇಂತಹ ಪರಿಸ್ಥಿತಿಯಲ್ಲಿ ಟಿ20 ವಿಶ್ವಕಪ್ಗೂ ಮುನ್ನ ಉಪನಾಯಕನ ಜವಾಬ್ದಾರಿಯನ್ನು ಪಾಂಡ್ಯರಿಂದ ಕಸಿದುಕೊಳ್ಳಬಹುದು.