
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಕ್ರಿಕೆಟ್ ತಂಡದ ಜಯದ ನಾಗಾಲೋಟ ಮುಂದುವರೆದಿದೆ. ಭಾನುವಾರ ಲಖನೌದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 100 ರನ್ಗಳ ಅಮೋಘ ಗೆಲುವು ಕಂಡಿತು.

ಆರಂಭಿಕ ಬ್ಯಾಟರ್ಗಳ ವೈಫಲ್ಯದ ನಡುವೆಯೂ ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ಭಾರತಕ್ಕೆ ಜಯ ದಕ್ಕಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ರೋಹಿತ್ ಶರ್ಮಾ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಇದು ನಿಜವಾದ ಆಟವಾಗಿತ್ತು, ತಂಡದ ಗೆಲುವಿಗೆ ಹೆಚ್ಚಿನವರು ಕಾರಣರಾದರು. ಕಠಿಣವಾದ ಪರಿಸ್ಥಿತಿಯಲ್ಲಿ ನಮ್ಮ ಎಲ್ಲಾ ಅನುಭವಿ ಆಟಗಾರರು ಸರಿಯಾದ ಸಮಯದಲ್ಲಿ ಎದ್ದುನಿಂತು ಗೆಲುವು ತಂದುಕೊಟ್ಟಿದ್ದಾರೆ. ಮೊದಲ ಐದು ಪಂದ್ಯಗಳಲ್ಲಿ ನಾವು ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದೆವು. ಆದರೆ, ಇಲ್ಲಿ ಬ್ಯಾಟಿಂಗ್ ಮಾಡಬೇಕಾದ ಅವಕಾಶ ಸಿಕ್ಕಿತು ಎಂದು ಹೇಳಿದ್ದಾರೆ.

ಬ್ಯಾಟಿಂಗ್ ಮಾಡುವಾಗ ನಮಗೆ ಆರಂಭದಲ್ಲೇ ಸವಾಲು ಹಾಕಿದರು. ಅವರು ಬೌಲಿಂಗ್ ಅದ್ಭುತವಾಗಿತ್ತು. ನಾವು ಬ್ಯಾಟಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಲಿಲ್ಲ. ಮೂರು ವಿಕೆಟ್ಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಇರಲಿಲ್ಲ. ನೀವು ಅಂತಹ ಸಂದರ್ಭದಲ್ಲಿ ಜೊತೆಯಾಟ ಆಡಬೇಕು. ಅದು ನಮಗೆ ಸಿಕ್ಕಿತು ಎಂಬುದು ರೋಹಿತ್ ಮಾತು.

ನಾನು ಸಕಾರಾತ್ಮಕವಾಗಿರಲು ಯೋಚಿಸುತ್ತಿದ್ದೆ, ನನಗೆ ಹೊಡೆಯಲು ಕಷ್ಟ ಎನಿಸುವಂತಹ ಚೆಂಡುಗಳನ್ನು ದೂರ ಇಡಲು ಬಯಸುತ್ತೇನೆ. ಆಗ ಬೌಲರ್ಗಳು ಎದುರಾಳಿಗರ ಮೇಲೆ ಮತ್ತೆ ಒತ್ತಡ ಹೇರುತ್ತಾರೆ. ಒಟ್ಟಾರೆ ಚಿತ್ರಣವನ್ನು ನೋಡಿದಾಗ ನಾವು 30 ರನ್ಗಳನ್ನು ಕಡಿಮೆ ಹೊಡೆದೆವು ಎಂದು ಹೇಳಿದ್ದಾರೆ.

ನೀವು ಇನ್ನಿಂಗ್ಸ್ ಆರಂಭಿಸಿದಾಗ, ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಹೇಗಾದರೂ ಪ್ರಯತ್ನಿಸಬೇಕು. ಮತ್ತು ಒಂದೆರಡು ವಿಕೆಟ್ಗಳನ್ನು ಪಡೆಯಬೇಕು. ನಮ್ಮ ಸೀಮರ್ಗಳು ಅನುಭವ ಹೊಂದಿದ್ದು ಇದನ್ನು ಮಾಡುತ್ತಿದ್ದಾರೆ. ಅವರು ಪರಿಸ್ಥಿತಿಗಳನ್ನು ಚೆನ್ನಾಗಿ ಬಳಸಿಕೊಂಡರು - ರೋಹಿತ್ ಶರ್ಮಾ.

ನಾವು ಉತ್ತಮ ಸಮತೋಲನವನ್ನು ಹೊಂದಿದ್ದೇವೆ, ಒಂದೆರಡು ಉತ್ತಮ ಸ್ಪಿನ್ನರ್ಗಳನ್ನು ಹೊಂದಿದ್ದೇವೆ ಮತ್ತು ಸೀಮರ್ಗಳು ಈ ಪರಿಸ್ಥಿತಿಗಳಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಸಾಕಷ್ಟು ಆಯ್ಕೆಗಳು ಮತ್ತು ಅನುಭವವೂ ಇದೆ. ಬ್ಯಾಟರ್ಗಳು ಬೋರ್ಡ್ನಲ್ಲಿ ರನ್ಗಳನ್ನು ಹಾಕುವುದು ಬಹಳ ಮುಖ್ಯ ಎಂದು ಹಿಟ್ಮ್ಯಾನ್ ಹೇಳಿದ್ದಾರೆ.