
ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ತೋರಿ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಯಲ್ಲಿ ಪರದಾಡುತ್ತಿದೆ. ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ಶುಕ್ರವಾರ ಜರುಗಿದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿತು. ಬ್ಯಾಟರ್ಗಳು ಉತ್ತಮ ಪ್ರದರ್ಶನ ತೋರಿ ಸವಾಲಿನ ಟಾರ್ಗೆಟ್ ನೀಡಿದರೆ, ಬೌಲರ್ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು.

ಟಾಮ್ ಲಾಥಮ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಅವರ ದ್ವಿಶತಕದ ಜೊತೆಯಾಟ ಮುರಿಯಲು ವಿಫಲರಾದ ಟೀಮ್ ಇಂಡಿಯಾ ಬೌಲರ್ಗಳು ಸೋಲಿಗೆ ಕಾರಣರಾದರು. 7 ವಿಕೆಟ್ಗಳ ಅಮೋಘ ಗೆಲುವಿನೊಂದಿಗಗೆ ಕಿವೀಸ್ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ದ್ವಿತೀಯ ಏಕದಿನಕ್ಕೆ ಉಭಯ ತಂಡಗಳು ಸಜ್ಜಾಗ ಬೇಕಿದೆ.

ಸೋಲಿನ ಆಘಾತದ ನಡುವೆ ಶಿಖರ್ ಧವನ್ ಪಡೆ ಎರಡನೇ ಏಕದಿನ ಪಂದ್ಯಕ್ಕೆ ತಯಾರಾಗಬೇಕಿದೆ. ನವಂಬರ್ 27 ಭಾನುವಾರದಂದು ಹ್ಯಾಮಿಲ್ಟನ್ನ ಸೀಡನ್ ಪಾರ್ಕ್ನಲ್ಲಿ ದ್ವಿತೀಯ ಪಂದ್ಯ ಆಯೋಜಿಸಲಾಗಿದೆ. ಒಂದು ದಿನದ ಬಿಡುವಷ್ಟೇ ಉಳಿದಿದ್ದು ಸರಣಿ ಸಮಬಲ ಸಾಧಿಸಲು ಟೀಮ್ ಇಂಡಿಯಾ ಮಾಸ್ಟರ್ ಪ್ಲಾನ್ ರೂಪಿಸಬೇಕಿದೆ.

ಬೌಲರ್ಗಳ ಕೆಟ್ಟ ಪ್ರದರ್ಶನ ಭಾರತೀಯ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿದೆ. ಮುಖ್ಯ ವೇಗಿ ಜಸ್ಪ್ರೀತ್ ಬುಮ್ರಾ ಅಲಭ್ಯತೆ ಪದೇ ಪದೇ ಎದ್ದು ಕಾಣುತ್ತಿದೆ. ಮೊದಲ ಏಕದಿನದ ಪದಾರ್ಪಣೆ ಪಂದ್ಯದಲ್ಲೇ ಅರ್ಶ್ದೀಪ್ ಸಿಂಗ್ 8.1 ಓವರ್ಗೆನೇ 68 ರನ್ ನೀಡಿದರು.

ಉಮ್ರಾನ್ ಮಲಿಕ್ ಕೂಡ ತಮ್ಮ ಚೊಚ್ಚಲ ODI ನಲ್ಲಿ 10 ಓವರ್ಗೆ 2 ವಿಕೆಟ್ ಕಿತ್ತು 66 ರನ್ ಕೊಟ್ಟರು. ಶಾರ್ದೂಲ್ ಠಾಕೂರ್ 9 ಓವರ್ಗೆ 63 ರನ್ ನೀಡಿ ದುಬಾರಿಯಾದರು. ಹೀಗಾಗಿ ಭಾರತದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಅನಿವಾರ್ಯವಾಗಿದೆ.

ಅತ್ತ ಬ್ಯಾಟಿಂಗ್ ವಿಭಾಗದಲ್ಲಿ ರಿಷಭ್ ಪಂತ್ ವೈಫಲ್ಯ ಕೂಡ ದೊಡ್ಡ ಸಮಸ್ಯೆಯಾಗಿದೆ. ವಿಕೆಟ್ ಕೀಪಿಂಗ್ನಲ್ಲೂ ಅಪಾಯಕಾರಿಯಾಗಿ ಗೋಚರಿಸುತ್ತಿಲ್ಲ. ತಂಡದ ಕೆಲವು ವಿಭಾಗಗಳಲ್ಲಿ ಪ್ರಮುಖ ತೊಂದರೆಗಳಿದ್ದು ಇದನ್ನು ಸರಿ ಪಡಿಸಿ ಕಾರ್ಯತಂತ್ರ ರೂಪಿಸಿ ಟೀಮ್ ಇಂಡಿಯಾ ಎರಡನೇ ಏಕದಿನದಲ್ಲಿ ಕಣಕ್ಕಿಳಿಯಬೇಕಿದೆ.

ಹ್ಯಾಮಿಲ್ಟನ್ನ ಸೀಡನ್ ಪಾರ್ಕ್ ಪಿಚ್ ಬ್ಯಾಟರ್ಗಳಿಗೆ ಹೇಳಿ ಮಾಡಿಸಿದ್ದಾಗಿದೆ. ಇಲ್ಲಿ ಇತ್ತೀಚೆಗೆ ನಡೆದ ಪಂದ್ಯಗಳೆಲ್ಲ ಹೈ-ಸ್ಕೋರ್ ಗೇಮ್ ಆಗಿದೆ. ನ್ಯೂಜಿಲೆಂಡ್ ತಂಡ ಈ ಮೈದಾನದಲ್ಲಿ 333 ರನ್ ಚಚ್ಚಿತ್ತು. ಬೌಲರ್ಗಳು ಈ ಪಿಚ್ನಲ್ಲಿ ಕಷ್ಟಪಡುವುದು ಖಚಿತ. ಹೀಗಾಗಿ ಇದೊಂದು ಭಾರತಕ್ಕೆ ಮತ್ತೊಂದು ಅಗ್ನಿಪರೀಕ್ಷೆ.

ಹ್ಯಾಮಿಲ್ಟನ್ನಲ್ಲಿ ಪಂದ್ಯದ ದಿನ ಭಾನುವಾರ ಬೆಳಗ್ಗೆ ಜೋರಾಗಿ ಮಳೆ ಸುರಿಯಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. ಅದರೆ, ಪಂದ್ಯ ನಡೆಯುವ ಮಧ್ಯಾಹ್ನದ ಹೊತ್ತಿಗೆ ವರುಣನ ಆರ್ಭಟ ಕಡಿಮೆ ಆಗಲಿದೆಯಂತೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 7 ಗಂಟೆಗೆ ಶುರುವಾಗಲಿದೆ. ಟಾಸ್ ಪ್ರಕ್ರಿಯೆ 6:30ಕ್ಕೆ ಏರ್ಪಡಿಸಲಾಗಿದೆ.
Published On - 8:11 am, Sat, 26 November 22